ಮಹಿಳೆಯರು ಹಾಗೂ ಹದಿ ಹರೆಯದ ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ ಮಾಡಲು ರಾಜ್ಯವ್ಯಾಪಿ ಆಂದೋಲನ ಹುಟ್ಟು ಹಾಕಬೇಕು. ಹೋರಾಟಕ್ಕೆ ಸಜ್ಜಾಗಬೇಕು ಎಂದು ಎಐಎಮ್ಎಸ್ಎಸ್ ರಾಜ್ಯಾಧ್ಯಕ್ಷೆ ಎಂ.ಎನ್.ಮಂಜುಳಾ ಕರೆಕೊಟ್ಟರು.
ನಗರದ ಕನಕದಾಸ ವೃತ್ತದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ವಿರೊಧಿ ಆಂದೋಲನ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದರು.
ಈ ವೇಳೆ ಅವರು ಮಾತನಾಡಿ, “ರಾಜ್ಯದಲ್ಲಿ ಸೌಜನ್ಯ, ದಾನಮ್ಮ, ನೇಹಾ ಹಿರೇಮಠ್, ಅಂಜಲಿ, ಮಹಾಲಕ್ಷ್ಮಿ, ಯಾಮಿನಿಯಂತವರ ಘೋರ ಸಾವುಗಳು ನಾಗರಿಕರನ್ನು ಅಘಾತಕ್ಕೀಡು ಮಾಡಿದವು. ಇತ್ತೀಚೆಗೆ ಹುಬ್ಬಳ್ಳಿ, ತೋರಣಗಲ್ಲು ಮತ್ತು ಮೈಸೂರಿನಲ್ಲಿ ಕಂದಮ್ಮಗಳ ಮೇಲಿನ ಅಪರಾಧಗಳು ಎಲ್ಲರ ಮನಸ್ಸನ್ನು ಕಲಕಿವೆ. ಇಂತಹ ಅಪರಾಧಗಳಿಗೆ ಕೊನೆ ಹಾಕುವಲ್ಲಿ ಇಂದಿನ ಪೊಲೀಸ್, ಆಡಳಿತಾಂಗ ಮತ್ತು ನ್ಯಾಯಾಂಗ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಂತಹ ಅಮಾನವೀಯ ವ್ಯವಸ್ಥೆಯ ವಿರುದ್ಧ ನಾವೆಲ್ಲ ಸುಧೀರ್ಘವಾದ ಹೋರಾಟಕ್ಕೆ ಸಜ್ಜಾಗಬೇಕಾಗಿದೆ. ಎಲ್ಲಾ ಮಹಿಳೆಯರನ್ನು ಜಾಗೃತರನ್ನಾಗಿಸಿ ಸಂಘಟಿಸಬೇಕಾಗಿದೆ. ಎಲ್ಲಾ ರೀತಿಯ ಶೋಷಣೆಗಳಿಗೆ ಕೊನೆ ಹಾಡುವ ಕ್ರಾಂತಿಕಾರಿ ಹೋರಾಟ ನಾಂದಿ ಹಾಡಿರುವ ಕಾರ್ಮಿಕ ವರ್ಗಗದೊಂದಿಗೆ ಮಹಿಳಾ ವಿಮುಕ್ತಿ ಹೋರಾಟವನ್ನು ಬೆಸೆಯುತ್ತಾ, ಮಹಿಳೆಗೆ ನೈಜ ಘನತೆ, ಗೌರವ ಖಾತ್ರಿಪಡಿಸುವ ಹೊಸ ಸಮಾಜವನ್ನು ತರಲು ಎಲ್ಲರೂ ಸಜ್ಜಾಗಿ” ಎಂದು ಕರೆ ನೀಡಿದರು.
ಹಿರಿಯ ಬಂಡಾಯ ಸಾಹಿತಿ ಹಾಗೂ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಎಐಎಮ್ಎಸ್ಎಸ್ ವತಿಯಿಂದ ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ರಾಜ್ಯವ್ಯಾಪಿ ಸಹಿ ಸಂಗ್ರಹ ಅಭಿಯಾನ’ಕ್ಕೆ ಎಲ್ಲಾ ಜನತೆ ಬೆಂಬಲಿಸಬೇಕು. ಜಾಗತೀಕರಣದ ನಂತರ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಟಿವಿ, ಮೊಬೈಲ್ ಗಳಲ್ಲಿ ಬರುವ ಹಿಂಸೆ, ಅಶ್ಲೀಲ ದೃಶ್ಯಗಳು ಯುವಕರ ಭಾವನೆಗಳನ್ನು ಕೆರಳಿಸಿ ಅತ್ಯಾಚಾರದಂತಹ ಹೀನ ಕೃತ್ಯಕ್ಕೆ ಅವರನ್ನು ಇಳಿಸುತ್ತಿವೆ.
ದೇಶ-ವಿದೇಶಗಳಲ್ಲಿ ಅಶ್ಲೀಲತೆಯ ಸೃಷ್ಟಿ ಒಂದು ದಂದೆಯಾಗಿದೆ. ಸಮಾಜದಲ್ಲಿ ಮಹಿಳೆಯರಿಗೆ ಭದ್ರತೆ ಕಾಣೆಯಾಗಿದೆ. ಪ್ರೀತಿಸಿದ ಯುವಕನಿಂದ ಕೊಲೆ, ಬಸ್ಸಿನಲ್ಲಿ, ದೇವಸ್ಥಾನದಲ್ಲಿ ದಿನೇ ದಿನೇ ಅತ್ಯಾಚಾರದಂತಹ ಪ್ರಕರಣಗಳು ವರದಿಯಾಗುತ್ತಿವೆ. ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚಾಗುತ್ತಿದೆ. ಮಕ್ಕಳನ್ನು ಕಳ್ಳಸಾಗಣೆ ಮಾಡಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನೋಡುತ್ತಿದ್ದೆವೆ. ಇಂತಹ ಎಲ್ಲಾ ಅಮಾನವೀಯ ಕೃತ್ಯಗಳ ವಿರುದ್ಧ ಜನತೆ ಒಂದಾಗಬೇಕು” ಎಂದು ಹೇಳಿದರು.
ಜಿಲ್ಲಾ ಸಂಘಟನಾ ಸಮಿತಿಯ ಅಧ್ಯಕ್ಷೆ ಮಂಜುಳಾ ಮಜ್ಜಿಗಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, “ರಾಜ್ಯದಾದ್ಯಂತ ಮಹಿಳೆಯರ ಮೇಲೆ ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ ಕೊಲೆಯಂತ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿಯೇ ಇದೇ ನವಂಬರ್ ತಿಂಗಳು 4 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಅಣ್ಣನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಮದುವೆ ಆಗುವೆನೆಂದು ತಂಗಿಯನ್ನು ನಂಬಿಸಿ ಗರ್ಭಿಣಿಯನ್ನಾಗಿ ಮಾಡಿ ತಾಯಿಯಾಗಲು ಕಾರಣವಾಗಿರುವ ಘಟನೆ ಇನ್ನೂ ಮಾಸಿಲ್ಲ.
ಕೊಟ್ಟ ಸಾಲ ಕೇಳಲು ಬಂದ ಮಹಿಳೆ ಮೇಲೆ ಬಲವಂತದಿಂದ ಸಾರಾಯಿ ಕುಡಿಸಿ ಅತ್ಯಾಚಾರವೆಸಗಿದ ಘಟನೆ ಹಾಗೂ ವಿಕೃತ ತಂದೆಯೊಬ್ಬ ತನ್ನ ಸ್ನೇಹಿತನ ಮನೆಗೆ ಮಗಳನ್ನು ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿ ಸ್ನೇಹಿತನೊಂದಿಗೆ ಸಹಕರಿಸಲು ಹೇಳಿದ ಘಟನೆ ಮೂರು ದಿನಗಳ ಹಿಂದೆ ನಡೆದಿರುವ ಘಟನೆ ಇದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಹಿಳೆಯರು ಹಾಗೂ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿವೆ ಎಂಬ ಅಪಖ್ಯಾತಿ ಕೊಪ್ಪಳ ಜಿಲ್ಲೆಗೆ ಸಲ್ಲುತ್ತಿರುವುದು ದುರಂತ ಹಾಗೂ ಬಹಳ ನೋವಿನ ಸಂಗತಿ. ಅತ್ಯಾಚಾರಿಗಳಿಗೆ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಆದ್ದರಿಂದ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಪರಾಧಗಳ ವಿರುದ್ಧ ಬಹು ದೊಡ್ಡ ಸಮರವನ್ನೇ ಸಾರಬೇಕಿದೆ” ಎಂದು ಆತಂಕ ವ್ಯಕ್ತಪಡಿಸಿ ಕರೆಕೊಟ್ಟರು.
ಇದನ್ನೂ ಓದಿ ಕೊಪ್ಪಳ | ತೆಪ್ಪ ಮುಳುಗಿ ಇಬ್ಬರು ಮೀನುಗಾರರು ಸಾವು
ಸಂಘಟನೆಯ ಪದಾಧಿಕಾರಿಗಳಾದ ಶಾರದಾ ಗಡ್ಡಿ, ಹುಸೇನ್ ಬಿ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಸಿದ್ದರು. ನೂರಾರು ಸಾರ್ವಜನಿಕರು ಸಹಿ ಮಾಡುವುದರ ಮೂಲಕ ಹೋರಾಟಕ್ಕೆ ಹಾಗೂ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.





