ಸಿಂಧನೂರು ಪಟ್ಟಣದಿಂದ ಹುಬ್ಬಳ್ಳಿಗೆ ಚಲಿಸುವ ರೈಲು ಬೋಗಿಗಳಲ್ಲಿ ಒಂದೊಂದೇ ಶೌಚಾಲಯವಿದ್ದು, ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಎಲ್ಲ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸಂಸದರು ಸಂಬಂಧಿಸಿದ ರೈಲ್ವೆ ಅಧಿಕಾರಿಗಳ ಜತೆ ಮಾತನಾಡಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸಿಂಧನೂರು- ಹುಬ್ಬಳ್ಳಿ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಚಾಲಕ ಶರಣು ಪಾಟೀಲ್ ಆಗ್ರಹಿಸಿದರು.
“ಸಿಂಧನೂರಿನಿಂದ ಹುಬ್ಬಳ್ಳಿಗೆ ಚಲಿಸುತ್ತಿರುವ ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ಟ್ರೈನ್ No: 17304 ರೈಲ್ವೆ ಬೋಗಿಯಲ್ಲಿ ಒಂದೇ ಶೌಚಾಲಯವಿದ್ದು, ಅದಕ್ಕೆ ನೀರಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸಬೇಕು” ಎಂದು ರೈಲ್ವೆ ಅಧಿಕಾರಿಗಳು ಹಾಗೂ ಸಂಸದರನ್ನು ಒತ್ತಾಯಿಸಿದರು.
“ಸಿಂಧನೂರಿನಿಂದ ಹುಬ್ಬಳ್ಳಿಗೆ ನಿತ್ಯವೂ ಪ್ರಯಾಣ ಮಾಡುವ ಪ್ರಯಾಣಿಕರು, ವೃದ್ಧರು, ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ರೈಲಿನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದ್ದು, ಕಳೆದ ಎರಡ್ಮೂರು ತಿಂಗಳಿಂದ ಬೆಳಗಿನ ಜಾವ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ” ಎಂದರು.
“ಸಂಬಂಧಪಟ್ಟ ಸಚಿವರು, ಸಂಸದರು ರೈಲ್ವೆ ಇಲಾಖೆಯ ವ್ಯವಸ್ಥಾಪಕರೊಂದಿಗೆ ಮಾತನಾಡಿ, ಶೀಘ್ರದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಇಲ್ಲದಿದ್ದರೆ ಕೊಪ್ಪಳ ಸಿಂಧನೂರು ರೈಲ್ವೆ ಪ್ರಯಾಣಿಕ ಹಿತರಕ್ಷಣಾ ಸಮಿತಿಯಿಂದ ರೈಲ್ವೆ ಇಲಾಖೆ ಅವ್ಯವಸ್ಥೆಯ ವಿರುದ್ಧ ರೈಲ್ವೆ ತಡೆ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ವಿಶೇಷ ಮಕ್ಕಳ ಆರೈಕೆ ನಮ್ಮ ಸಾಮಾಜಿಕ ಜವಾಬ್ದಾರಿಯ ಅಂಗ : ರೋಹನ್ ಫ್ರಾಂಕೋ
ಗ್ಯಾನಪ್ಪ ಕನ್ನುಪೇಟೆ, ಸುರೇಶ ಸಿಂಧನೂರ್, ಅಶೋಕ್ ಸಜ್ಜನ್, ಶರಣಬಸವ ವೀರಾಪುರ, ಚನ್ನಬಸವಸ್ವಾಮಿ ಸಿಂಧನೂರ್, ಸುರೇಶ ಸಜ್ಜನ್ ತುರ್ವಿಹಾಳ್, ಟಿ ವಿ ರಾಮನ್ ಗಂಗಾವತಿ, ಶ್ರೀದೇವಿ ಬೂದುಗುಂಪ ಹಾಗೂ ಇತರರು ಇದ್ದರು.





