ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಿರೇಬೊಮ್ಮನಾಳ ಗ್ರಾಮದ ಚರಂಡಿಗಳು ತುಂಬಿ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿದೆ.
ಗ್ರಾಮದ ಎಸ್ಸಿ ಕಾಲನಿಯ ಕುಡಿಯುವ ನೀರಿನ ಟ್ಯಾಂಕ್ ಸುತ್ತಲೂ ಗಿಡಗಂಟೆ ಬೆಳೆದಿದ್ದು, ವಿಷಜಂತುಗಳ ವಾಸಸ್ಥಾನವಾಗಿದೆ. ಟ್ಯಾಂಕ್ ಸುತ್ತಲೂ ಕೊಳಚೆ ನೀರು ಸಂಗ್ರಹವಾಗಿದ್ದು, ಗಬ್ಬು ವಾಸನೆ ಬೀರಲಾರಂಭಿಸಿದೆ. ಇದರಿಂದ ಗ್ರಾಮದಲ್ಲೀಗ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
“ಗ್ರಾಮದ ದಲಿತ ಕಾಲನಿ ಪ್ರಮುಖ ಓಣಿಗಳಲ್ಲಿ ಮನೆಮುಂದೆ ಕೊಳಚೆ ನೀರು ಸಂಗ್ರಹವಾಗಿದ್ದು, ಓಡಾಡಲು ದಾರಿ ಇಲ್ಲದಂತಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯಿತಿ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

“ಚರಂಡಿ ಸ್ವಚ್ಛಗೊಳಿಸುವ ಕುರಿತು ಗ್ರಾಮದ ಯುವಕರು ಮೂರ್ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಪಿಡಿಒ ಯಮನೂರಪ್ಪ ಬೊಮ್ಮನಾಳ ಅವರಿಗೆ ಮನವಿ ಮಾಡಿದರೂ ಕೂಡ ಅಧಿಕಾರಿ ಕ್ಯಾರೆ ಎಂದಿಲ್ಲ. ಗ್ರಾ.ಪಂ ಸದಸ್ಯರ ಗಮನಕ್ಕೆ ತಂದರೂ ಕೂಡ ಅದಕ್ಕೂ ನಮಗೂ ಸಂಬಂಧ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಡಾ ಬಿ ಆರ್ ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಹರಿಜನ ಮಾತನಾಡಿ, “ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಊರೊಳಗೆ ಯಾವುದೇ ಓಣಿಗೆ ಹೋದರೂ ಕೂಡ ಕಾಲಿಡಲು ಜಾಗ ಇಲ್ಲದಂತಾಗಿದೆ. ಮಲಿನವಾದ ನೀರು ರಸ್ತೆ ಮೇಲೆ ಹರಿದು, ರಸ್ತೆಯಲ್ಲಾ ಕೊಳಚೆಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ʼಬೆಣ್ಣೆʼ ಹಚ್ಚುವುದಕ್ಕೆ ಮಾತ್ರ ಜಿಲ್ಲೆ ಸೀಮಿತವಾ? ಬಜೆಟ್ನಲ್ಲಿ ಜಿಲ್ಲೆ ಮರೆತ ಸಿಎಂ, ಜನರ ಬೇಸರ
“ಕುಡಿಯುವ ನೀರಿನ ಟ್ಯಾಂಕರ್ ಸುತ್ತಲು ಹೊಲಸು ತುಂಬಿಕೊಂಡಿದೆ. ಪ್ರಾಣಿಗಳೂ ಕೂಡ ಟ್ಯಾಂಕ್ ನೀರನ್ನು ಕುಡಿಯಲು ಹಿಂಜರಿಯುತ್ತವೆ. ಅಷ್ಟೊಂದು ತ್ಯಾಜ್ಯದಿಂದ ತುಂಬಿದೆ. ಪಿಡಿಒ ಅವರಿಗೆ ನಾಲ್ಕೈದು ಬಾರಿ ಮನವಿ ಮಾಡಿದ್ದೇವೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ತಾ.ಪಂ, ಜಿ.ಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ” ಎಂದರು.
ವರದಿ : ಸಿಟಿಜನ್ ಜರ್ನಲಿಸ್ಟ್- ಬಸವರಾಜ್ ಬೋದುರ್





