ಕೊಪ್ಪಳ ಜಿಲ್ಲೆಯ ಅರಸನಕೇರಿ, ಚಿಕ್ಕ ಬೆಣಕಲ್ ಮತ್ತು ಹಿರೇ ಬೆಣಕಲ್ ಗ್ರಾಮಗಳಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವ ಸರ್ಕಾರದ ನಡೆಗೆ ಸಾಮಾಜಿಕ ಹೋರಾಟಗಾರ ಬಸವರಾಜ್ ಸೂಳಿಬಾವಿ ವಿರೋಧ ವ್ಯಕ್ತಪಡಿಸಿದರು.
ಈಗಾಗಲೇ ಮೂರು ಪರಮಾಣು ವಿದ್ಯುತ್ ಸ್ಥಾವರಗಳಿಗೆ ಜಾಗ ಕೊಟ್ಟು ಪರಿಸರ ಮತ್ತು ಜನರ ಆರೋಗ್ಯ ಹಾನಿಗೆ ಕಾರಣವಾದ ರಾಜ್ಯ ಸರ್ಕಾರ ಮತ್ತೊಮ್ಮೆ ಅಂಥದ್ದೇ ಯೋಜನೆಗೆ ಜಾಗ ಕೊಡಲು ಸಿದ್ಧವಾಗಿದೆ. ಈ ಬಾರಿ ಅದಕ್ಕೆ ಬಲಿಯಾಗಲು ಸಿದ್ದವಾಗಿರುವುದು ಕೊಪ್ಪಳ ಜಿಲ್ಲೆಯ ನೆಲ. ಈಗಾಗಲೇ ಅಸಂಖ್ಯೆ ಕಾರ್ಖಾನೆಗಳ ಆಡಂಗೋಲದ ನೆಲವಾಗಿ ದೊಡ್ಡ ಪ್ರಮಾಣದ ಪರಿಸರ ಹಾನಿಯಾಗುವುದರ ಜೊತೆಗೆ ಜನರ ಆರೋಗ್ಯ ಹದಗೆಟ್ಟಿದೆ. ರಾಜ್ಯ ಸರ್ಕಾರವೇ ವನ್ಯ ಜೀವಿ ಸುರಕ್ಷಿತ ಧಾಮವೆಂದು ಘೋಷಣೆ ಮಾಡಿರುವ ಪ್ರದೇಶದಲ್ಲಿ ಮತ್ತು ಪ್ರಾಗೈತಿಹಾಸಿಕ ಪ್ರದೇಶವೆಂದು ಹೆಸರಾದ ಪ್ರದೇಶದಲ್ಲಿ ಅಣು ಸ್ಥಾವರ ಸ್ಥಾಪನೆಗೆ ಉದ್ದೇಶಿಸಿರುವುದು ಸರಿಯಲ್ಲ ಎಂದು ಆಕ್ರೋಶಗೊಂಡರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ‘ಹಬ್ ಅಂಡ್ ಸ್ಪೋಕ್’ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚಲು ಮುಂದಾದರೆ ಹೋರಾಟ: ಎಐಡಿಎಸ್ಒ
ಸದ್ಯ ಸ್ಥಾವರ ಉದ್ದೇಶಿತ ಗ್ರಾಮಗಳಿಗೆ ಪ್ರಗತಿಪರ ಮತ್ತು ಪರಿಸರವಾದಿ ಗೆಳೆಯರ ತಂಡ ಭೇಟಿ ಮಾಡಿ ಗ್ರಾಮಸ್ಥರ ಜೊತೆ ಚರ್ಚೆ ನಡೆಸಿವೆ. ಅವಲೋಕನಕ್ಕಾಗಿ ಭೇಟಿ ನೀಡಿದ ತಂಡದಲ್ಲಿ ಟಿ. ರತ್ನಾಕರ, ಶುಕ್ರಾಜ ತಾಳಕೇರಿ, ಮುತ್ತು ಬಿಳೆಯಲಿ, ಡಿ. ಎಚ್. ಪೂಜಾರ, ಕೆ. ಬಿ. ಗೋನಾಳ, ಗಂಗಾವತಿಯ ವಿಜಯ ಮತ್ತಿತರರು ಇದ್ದರು.






