ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದಲ್ಲಿ ಕಳೆದ ವರ್ಷ ನಡೆದ ವಿದೇಶಿ ಮಹಿಳೆ ಹಾಗೂ ಸ್ಥಳೀಯ ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ಮತ್ತು ಒಡಿಶಾ ಮೂಲದ ಪ್ರವಾಸಿಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಮೂವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಗಂಗಾವತಿಯ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯಸಾಯಿ) ಮತ್ತು ಶರಣಪ್ಪ (ಶರಣು ಬಸವರಾಜ್) ಎಂದು ಶಿಕ್ಷೆಗೊಳಗಾದವರು ಎಂದು ಗುರುತಿಸಲಾಗಿದೆ.
ಕಳೆದ ವರ್ಷದ ಮಾರ್ಚ್ನಲ್ಲಿ ಸಾಣಾಪುರಕ್ಕೆ ಇಸ್ರೇಲ್ ಮೂಲದ ಮಹಿಳೆ ಪ್ರವಾಸಕ್ಕೆ ಬಂದಿದ್ದರು. ಅವರೊಂದಿಗೆ ಒಡಿಶಾ ರಾಜ್ಯದ ಬಿಬಾಶ್ ಎಂಬ ಪ್ರವಾಸಿಗನೂ ಇದ್ದನು. ಜೊತೆಗೆ ಅಮೆರಿಕ ಹಾಗೂ ಮಹಾರಾಷ್ಟ್ರದ ಇನ್ನೂ ಕೆಲ ಪ್ರವಾಸಿಗರು ತಂಡದಲ್ಲಿದ್ದರು. ಇವರನ್ನು ಸ್ಥಳೀಯ ಹೋಂ ಸ್ಟೇ ಒಡತಿ ಕಾಲುವೆ ಪಕ್ಕದ ಬೆಳದಿಂಗಳ ಸೌಂದರ್ಯ ನೋಡಲು ಮಧ್ಯರಾತ್ರಿ ಕರೆದುಕೊಂಡು ಹೋಗಿದ್ದ ವೇಳೆ, ಪಾನಮತ್ತರಾಗಿ ಬಂದ ಆರೋಪಿಗಳು ವಿದೇಶಿ ಮಹಿಳೆ ಮತ್ತು ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ನಡೆಸಿದ್ದರು.
ಇದನ್ನೂ ಓದಿ : ಬೀದರ್ | ಕಾರಂಜಾ ಕಾಲುವೆಗೆ ಬಿದ್ದು ತಂದೆ–ಮಗ ಸಾವು
ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯವು ಈ ಕಠಿಣ ತೀರ್ಪು ಪ್ರಕಟಿಸಿದೆ





