ತನ್ನ ವೃತ್ತಿಯ ಇಲಾಖೆ ವಿರುದ್ದವೇ ಪೊಲೀಸ್ ಪೇದೆಯೋರ್ವ ವಾಟ್ಸಾಪ್ ಸ್ಟೇಟಸ್ ಮೂಲಕ ಅಸಮಾಧಾನ ಹೊರಹಾಕಿರುವ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕುಷ್ಟಗಿ ತಾಲೂಕು ಹನುಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ತಮ್ಮ ಇಲಾಖೆ ಹಾಗೂ ವೃತ್ತಿಯ ವಿರುದ್ಧ ಅಸಮಾಧಾನ ಹೊರ ಹಾಕಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಅವರ ‘ಈ ವರ್ಷದಲ್ಲಿ 8300 ಪೊಲೀಸರ ನೇಮಕ’ ಎಂಬ ಪತ್ರಿಕಾ ಹೇಳಿಕೆಗೆ ವಿರುದ್ದವಾಗಿ ಇಂತಹ ಸ್ಟೇಟಸ್ ಹಾಕಿದ್ದಾರೆ ಎನ್ನಲಾಗಿದೆ.
ಪೊಲೀಸ್ ಡಿಪಾರ್ಟ್ಮೆಂಟ್ಗೆ ಬರುವ ಮುಂಚೆ ನೂರು ಸಲ ವಿಚಾರ ಮಾಡಿ ಬನ್ನಿ. ಬೇರೆ ಡಿಪಾರ್ಟ್ಮೆಂಟ್ಗೆ ಹೋಗೋದು ಎಷ್ಟೊ ಉತ್ತಮ. 365 ದಿನವೂ ಡ್ಯೂಟಿ ಮಾಡಬೇಕು. ಒಂದಿನಾನು ರಜೆ ಇಲ್ಲ. ಈ ಕೆಲಸಕ್ಕಿಂತ ಎಗ್ ರೈಸ್ ಮಾರಿ ಬದುಕೋದೆ ಬೆಟರ್ ಎಂಬ ಸ್ಟೇಟಸ್ ಹಾಕಿದ್ದು, ಇದು ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಕೊಪ್ಪಳ | 3 ತಿಂಗಳ ಮಗುವಿನೊಂದಿಗೆ ಭಿಕ್ಷಾಟನೆ: ಪೊಲೀಸರಿಂದ ಮಗು ರಕ್ಷಣೆ
ಪೊಲೀಸ್ ಇಲಾಖೆ ವಿರುದ್ದ ಅಸಮಾಧಾನ ಹೊರಹಾಕಿರುವ ಪೇದೆ ಬ್ರಹ್ಮಾನಂದ ವಿರುದ್ದ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ತನಿಖೆಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.





