ಪಕ್ಕದ ಮನೆಯ ಕೌಟುಂಬಿಕ ಕಲಹವನ್ನು ಬಗೆಹರಿಸಲು ಯತ್ನಿಸಿದ ಯುವಕನ ಮೇಲೆ ಪುಂಡರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಸ್ಥಳೀಯ ವಾಸಿ ವೆಂಕಟೇಶ್ ಹಲ್ಲೆಗೊಳಗಾದ ಯುವಕ.
ಏನಿದು ಪ್ರಕರಣ?
ವೆಂಕಟೇಶ್ನ ಪಕ್ಕದ ಮನೆಯಲ್ಲೇ ವಾಸವಾಗಿದ್ದ ಅಜೀರ್ ಹಾಗೂ ಆತನ ಪತ್ನಿ ಆಫಿಯಾ ನಡುವೆ ಜಗಳ ಉಂಟಾಗಿತ್ತು. ಜಗಳದ ನಂತರ ಆಫಿಯಾ ತಮ್ಮ ಮಕ್ಕಳೊಂದಿಗೆ ಮನೆ ಬಿಟ್ಟು ತೆರಳಿದ್ದರು. ಈ ವಿಷಯ ತಿಳಿದ ಅಜೀರ್, ತಮ್ಮ ಸ್ನೇಹಿತನಾದ ವೆಂಕಟೇಶರಿಗೆ ಸಹಾಯ ಕೇಳಿದ್ದಾರೆ. ಅದರಂತೆ ವೆಂಕಟೇಶ್ ಬಸ್ ನಿಲ್ದಾಣಕ್ಕೆ ಹೋಗಿ ಆಫಿಯಾ ಮತ್ತು ಮಕ್ಕಳೊಂದಿಗೆ ಮಾತನಾಡಿ, ಮನೆಗೆ ಮರಳುವಂತೆ ಮನವಿ ಮಾಡಲು ಮುಂದಾಗಿದ್ದಾರೆ.
ಆ ವೇಳೆ ಅಲ್ಲೇ ಇದ್ದ ಮುಸ್ಲಿಂ ಯುವಕರ ಗುಂಪು ಬಂದು, ವೆಂಕಟೇಶ್ ಹಾಗೂ ಆಫಿಯಾ ನಡುವೆ ಸಂಬಂಧ ಇರುವುದಾಗಿ ಶಂಕಿಸಿ, ಏಕಾಏಕಿ ವೆಂಕಟೇಶ್ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ. ಪೊಲೀಸರು ಹೇಳುವಂತೆ, ವೆಂಕಟೇಶ್ ಮತ್ತು ಆ ಕುಟುಂಬ ಸುಮಾರು 15 ವರ್ಷಗಳಿಂದ ಪರಿಚಿತರು. ಒಂದೇ ಹಳ್ಳಿಯಲ್ಲಿ ಪಕ್ಕದ ಮನೆಯವರಾಗಿ ವಾಸಿಸುತ್ತಿದ್ದರು. ಸ್ಥಳೀಯರು ವೆಂಕಟೇಶ್ ಅದೇ ಗ್ರಾಮದವನಾಗಿದ್ದು, ಯಾವುದೇ ದುರುದ್ದೇಶ ಹೊಂದಿರಲಿಲ್ಲ ಎಂದು ಹೇಳಿದರೂ ದಾಳಿಕೋರರು ಆತನನ್ನು ತೀವ್ರವಾಗಿ ಥಳಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದ ಕೆಲ ಆರೋಪಿಗಳು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಸಂಘಟನೆಯ ಸದಸ್ಯರಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಆರೋಪಿಗಳಲ್ಲಿ ಒಬ್ಬ ವೆಂಕಟೇಶರನ್ನು ಮಹಿಳೆ ಹಾಗೂ ಆಕೆಯ ಮಕ್ಕಳೊಂದಿಗೆ ಇರುವ ಸಂಬಂಧದ ಬಗ್ಗೆ ಪ್ರಶ್ನಿಸುತ್ತಿರುವುದು ಕಾಣಿಸುತ್ತದೆ. ಇದಕ್ಕೆ ಪ್ರತಿಕ್ರಿಯಿಸಿರುವ ವೆಂಕಟೇಶ್, “ನಾವು ಬಾಲ್ಯದಿಂದಲೇ ಪರಿಚಿತರು, ನಮ್ಮ ಕುಟುಂಬಗಳು ಹತ್ತಿರದ ಸಂಬಂಧ ಹೊಂದಿವೆ” ಎಂದು ಹೇಳುತ್ತಾರೆ. ಜೊತೆಗೆ, ವಿಡಿಯೋದಲ್ಲಿ ಅವರು ಹಲ್ಲೆ ಮಾಡಬೇಡಿ ಎಂದು ಬೇಡಿಕೊಳ್ಳುತ್ತಿರುವ ದೃಶ್ಯವೂ ಕಾಣಿಸುತ್ತದೆ.
ಘಟನೆಯ ನಂತರ ಆ ಪ್ರದೇಶದಲ್ಲಿ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಿದ್ದು, ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಅದೇ ವೇಳೆ SDPI ಸದಸ್ಯರು (ಹಲ್ಲೆ ಮಾಡಿದ ಗುಂಪು) ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ, ವೆಂಕಟೇಶ್ ವಿರುದ್ಧ ಪ್ರತಿದೂರು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದವೂ ನಡೆದಿದೆ.

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ, “ವೆಂಕಟೇಶ್ ಅವರು ತಮ್ಮ ಪಕ್ಕದ ಮನೆಯ ಮುಸ್ಲಿಂ ಕುಟುಂಬದವರ ಜೊತೆಗೆ ಕಾಣಿಸಿಕೊಂಡ ಕಾರಣಕ್ಕೆ ಹಲ್ಲೆಗೆ ಒಳಗಾಗಿದ್ದಾರೆ. ಎರಡೂ ಕುಟುಂಬಗಳು ಹಲವು ವರ್ಷಗಳಿಂದ ಪರಿಚಿತವಾಗಿವೆ. ತಾಯಿ, ಮಗಳು ಮತ್ತು ಮಗ ಬಸ್ ನಿಲ್ದಾಣದಲ್ಲಿದ್ದರು, ವೆಂಕಟೇಶ್ ಅವರ ಜೊತೆಗೆ ಇದ್ದರು” ಎಂದು ಪ್ರತಿಕ್ರಿಯಿಸಿದ್ದಾರೆ.
“ನಮ್ಮ ಪಕ್ಕದ ಮನೆಯ ನಿವಾಸಿಯಾಗಿರುವ ವೆಂಕಟೇಶ್ ನನ್ನ ಮಗನಿದ್ದಂತೆ, ಆತ ನಮ್ಮ ಕುಟುಂಬಕ್ಕೆ ಸಹಾಯ ಮಾಡಲು ಬಂದಿದ್ದನೇ ಹೊರತು ಬೇರೆ ಯಾವ ಉದ್ದೇಶವೂ ಇರಲಿಲ್ಲ. ನಮ್ಮ ಮಗಳು ಮತ್ತು ವೆಂಕಟೇಶ್ ಅಣ್ಣ-ತಂಗಿ ಇದ್ದಂತೆ ಎಂದು ಹೇಳಿದರೂ ಕೇಳದೆ, ನೀನು ಆಕೆಯನ್ನು ಲವ್ ಮಾಡ್ತಿದ್ದೀಯ ಎಂದು ಒಪ್ಪಿಕೋ ಎಂಬಂತೆ ಒತ್ತಾಯಿಸಿ ನಾಲ್ವರು ಹಲ್ಲೆ ಮಾಡಿದ್ದಾರೆ” ಎಂದು ಸ್ವತಃ ಯುವತಿಯ ತಾಯಿ ಆಫಿಯಾ ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳ | 3 ತಿಂಗಳ ಮಗುವಿನೊಂದಿಗೆ ಭಿಕ್ಷಾಟನೆ: ಪೊಲೀಸರಿಂದ ಮಗು ರಕ್ಷಣೆ
ಸದ್ಯ ವೆಂಕಟೇಶ್ ನೀಡಿದ ದೂರಿನನ್ವಯ ಅಜೀರ್, ಖಜಾಫೀರ್, ಇಂದ್ರಾವಳಿ ಸೇರಿದಂತೆ ಇತರರ ವಿರುದ್ಧ ಹಲ್ಲೆ ಮತ್ತು ದರೋಡೆ ಪ್ರಕರಣ ದಾಖಲಿಸಲಾಗಿದೆ. ಈವರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆದರೆ ಆರೋಪಿಗಳು, “ನಾವು ಕೇವಲ ಆ ಮಹಿಳೆ ಮತ್ತು ಮಕ್ಕಳ ವಿಚಾರವಾಗಿ ಪ್ರಶ್ನೆ ಮಾಡಿದ್ದೇವೆ. ಆ ಹುಡುಗಿ 17 ವರ್ಷದವಳು. ಆದ್ದರಿಂದ ವೆಂಕಟೇಶ್ ವಿರುದ್ಧ POCSO (ಮಕ್ಕಳ ಲೈಂಗಿಕ ಅಪರಾಧಗಳ ಕಾಯ್ದೆ) ಅಡಿ ಪ್ರಕರಣ ದಾಖಲಾಗಬೇಕಿತ್ತು. ಆದರೆ ಪೊಲೀಸರು ನಮಗೆ ವಿರುದ್ಧವೇ ಕೇಸ್ ಹಾಕಿದ್ದಾರೆ. ಯಾವುದೇ ಅಪರಾಧ ನಡೆದಿಲ್ಲ, ನಿರಪರಾಧಿಗಳನ್ನು ಸಿಕ್ಕಿಹಾಕಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ತನಿಖೆ ಮುಂದುವರೆದಿದೆ.





