ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಕೊರಗ ಸಮುದಾಯದ ಯುವಜನರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಕಲ್ಪಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು, ಕಳೆದ ಸುಮಾರು 25 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಈ ಹೋರಾಟಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ ಇಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಪದಾಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಕೊರಗ ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿದ ಕೊರಗ ಸಮುದಾಯದ ಮುಖಂಡರು, ನಮ್ಮ ಸಮುದಾಯ ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿರುವ ಸ್ಥಿತಿಯಲ್ಲಿದೆ. ಪ್ರಸ್ತುತ ನಮ್ಮ ಜನಸಂಖ್ಯೆ ಕೇವಲ 14,000ಕ್ಕೆ ಸೀಮಿತವಾಗಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಯುವಜನರಿಗೆ ಉತ್ತಮ ದರ್ಜೆಯ ಉದ್ಯೋಗಗಳ ಕೊರತೆ. ಪದವಿ ಪಡೆದ ಯುವಕರು ಸಹ ಪೌರ ಕಾರ್ಮಿಕರಾಗಿ ದುಡಿಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದಾಗಿ ಕೆಲವರು ಕುಡಿಯುವ ದುಶ್ಚಟಕ್ಕೆ ಬಲಿಯಾಗಿ, 35–40 ವರ್ಷದಲ್ಲಿಯೇ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ತಮ್ಮ ನೋವನ್ನು ಹಂಚಿಕೊಂಡರು.

ಇದನ್ನು ಅರಿತುಕೊಂಡು, ಕಳೆದ ಹಲವು ವರ್ಷಗಳಿಂದ ಕೊರಗ ಸಮುದಾಯದ ಯುವಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ನೀಡಬೇಕೆಂಬ ನ್ಯಾಯಸಮ್ಮತ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲಾಗುತ್ತಿದೆ. ಆದರೆ, ಸರ್ಕಾರದ ಹಿರಿಯ ನಾಯಕರು ಕೇವಲ ಮನವಿ ಸ್ವೀಕರಿಸಿ ಭರವಸೆ ನೀಡುವುದರಲ್ಲಿಯೇ ಸೀಮಿತವಾಗಿದ್ದಾರೆ. ಈ ಕಾರಣದಿಂದಲೇ ಬೇಡಿಕೆ ಈಡೇರಿಸುವವರೆಗೆ ಅಹೋರಾತ್ರಿ ಧರಣಿ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷರಾದ ಚಾರ್ಸ್ ಅಂಬ್ಲರ್ ಮಾತನಾಡಿ, ನಮ್ಮ ವೇದಿಕೆ ಸಂಪೂರ್ಣವಾಗಿ ಕೊರಗ ಸಮುದಾಯದ ಹೋರಾಟಕ್ಕೆ ಬೆಂಬಲ ನೀಡುತ್ತದೆ. ಈ ಕುರಿತು ಮುಖ್ಯಮಂತ್ರಿ ಅವರಿಗೆ ನಾವು ಸಹ ಮನವಿ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವೇದಿಕೆಯ ಕಾರ್ಯದರ್ಶಿ ಝಫರುಲ್ಲಾ ಟಿ.ಎಂ. ಹೂಡೆ, ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಹುಸೈನ್ ಕಟ್ಪಾಡಿ, ಮಾಜಿ ಅಧ್ಯಕ್ಷ ಡಾ. ಜೆರಾಲ್ಡ್ ಪಿಂಟೊ, ಉಪಾಧ್ಯಕ್ಷೆ ಶಾಂತಿ ಪಿರೇರಾ, ಮೇರಿ ಡಿಸೋಜಾ, ಭಾರತೀಯ ಕ್ರೈಸ್ತ ಒಕ್ಕೂಟದ ಗ್ಲಾಡ್ಸನ್ ಕರ್ಕಡ, ಉಡುಪಿ ಯುಬಿಎಂಸಿ ಚರ್ಚ್ ನ ಲಿಯೊನಾರ್ಡ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.





