ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಯಿಂದಾಗಿ ಕರ್ನಾಟಕದ ಮಹಾನಗರಗಳು ಹಾಗೂ ಕರಾವಳಿ ಭಾಗದಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕುರಿತು ಕರಾವಳಿ ಭಾಗದ ಸಂಸದರು ತಕ್ಷಣ ಗಮನಹರಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.
ಕರ್ನಾಟಕ ಕರಾವಳಿ ಭಾಗದ ಬಹುತೇಕ ಕುಟುಂಬಗಳು ಹೋಟೆಲ್ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿವೆ. ಯುದ್ಧ ಆರಂಭವಾಗಿ ಕೇವಲ 12 ದಿನಗಳಲ್ಲಿ ದೇಶದ ಪರಿಸ್ಥಿತಿ ಇಂತಾಗಿದ್ದರೆ, ದೇಶವನ್ನು ಮುನ್ನಡೆಸುವ ಬಗ್ಗೆ ಕೇಂದ್ರ ಸರ್ಕಾರದ ಸಾಮರ್ಥ್ಯ ಪ್ರಶ್ನಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದರೆ ಸಾಕಾಗುವುದಿಲ್ಲ; ಸಂಕಷ್ಟದ ಸಂದರ್ಭಗಳಲ್ಲಿ ಜನರ ಜೊತೆ ನಿಲ್ಲಬೇಕು. ಗ್ಯಾಸ್ ಸಮಸ್ಯೆ ಕುರಿತು “ಪ್ರಯತ್ನ ಮಾಡುತ್ತೇವೆ” ಎನ್ನುವುದು ಸಂಸದ ಕೋಟ ಅವರಿಂದ ಬಂದಿರುವ ಜವಾಬ್ದಾರಿಯಿಲ್ಲದ ಹೇಳಿಕೆ ಎಂದು ಅವರು ಟೀಕಿಸಿದರು. ಯಾವುದೇ ಕಾರಣಕ್ಕೂ ಮಹಾನಗರಗಳು ಹಾಗೂ ಕರಾವಳಿ ಭಾಗದಲ್ಲಿ ಹೋಟೆಲ್ಗಳು ಬಂದ್ ಆಗದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕರಾವಳಿ ಭಾಗದ ಜನರು ಕೇವಲ ತಮ್ಮ ಹೊಟ್ಟೆಪಾಡಿಗಾಗಿ ಮಾತ್ರವಲ್ಲದೆ ದೇಶದಾದ್ಯಂತ ಹೋಟೆಲ್ ಉದ್ಯಮ ನಡೆಸಿ ಲಕ್ಷಾಂತರ ಕಾರ್ಮಿಕರು, ಸಾಫ್ಟ್ವೇರ್ ಕಂಪನಿಗಳ ಉದ್ಯೋಗಿಗಳು ಸೇರಿದಂತೆ ವಿವಿಧ ವರ್ಗದವರಿಗೆ ಆಹಾರ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆದ್ದರಿಂದ ಹೋಟೆಲ್ ಉದ್ಯಮಕ್ಕೆ ಅಡುಗೆ ಅನಿಲದ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳುವುದು ಕರಾವಳಿ ಸಂಸದರು ಹಾಗೂ ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯ ಹೇಳಿಕೆ ನೀಡಿ ವಿಷಯವನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬಾರದು. ದೇಶದಾದ್ಯಂತ ಸಾವಿರಾರು ಕುಟುಂಬಗಳು ಹೋಟೆಲ್ ಉದ್ಯಮವನ್ನು ನಂಬಿಕೊಂಡು ಬದುಕುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕೋಟ ನಾಗೇಂದ್ರ ಪುತ್ರನ್ ಒತ್ತಾಯಿಸಿದ್ದಾರೆ.





