ರಾಜ್ಯ ಹಾಗೂ ದೇಶದಾದ್ಯಂತ ನಿನ್ನೆ ಆರ್ಎಸ್ಎಸ್ ಪತ ಸಂಚಲನವನ್ನು ಆಯೋಜಿಸಲಾಗಿದ್ದು, ದೇಶದ ಸ್ವಾತಂತ್ರ್ಯ ಪೂರ್ವ 25 ವರ್ಷಗಳ ಹಿಂದೆಯೇ ಹುಟ್ಟಿದ ಆರ್ಎಸ್ಎಸ್ ಈಗ 100 ವರ್ಷಗಳ ಆಚರಣೆಗೆ ತಲುಪಿದೆ” ಎಂಬ ಹೆಮ್ಮೆ ವ್ಯಕ್ತವಾಗುತ್ತಿದೆ. ಆದರೆ, ಈ ಸಂತೋಷದ ಹಿನ್ನಲೆಯಲ್ಲಿ ಒಂದು ಮೂಲಭೂತ ಪ್ರಶ್ನೆ ಎದ್ದಿದೆ ಬ್ರಿಟಿಷರ ವಿರುದ್ಧ ಒಂದೇ ಒಂದು ಹೋರಾಟ ಮಾಡದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಯಾವುದೇ ಪಾತ್ರವಹಿಸದೆ, ದೇಶದ ರಕ್ಷಣೆಗೆ ಬದಲು ಗುಲಾಮಗಿರಿಯ ನೆರಳಲ್ಲಿ ಬದುಕಿದ ಆರ್ಎಸ್ಎಸ್ ನಿಜಕ್ಕೂ ದೇಶಕ್ಕಾಗಿ ಮಾಡಿದಾದರೂ ಏನು? ಎಂಬುದು ಸಾಮಾನ್ಯ ಪ್ರಜೆಯ ಪ್ರಶ್ನೆಯಾಗಿದೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಪ್ರಶ್ನಿಸಿದ್ದಾರೆ.
ಬ್ರಿಟಿಷರ “ಒಡೆದು ಆಳುವ” ನೀತಿಗೆ ತಾವೇ ಸಮರ್ಪಿಸಿಕೊಂಡು, ಹಿಂದುತ್ವದ ಹೆಸರಿನಲ್ಲಿ ಸನಾತನ ಧರ್ಮಕ್ಕೆ ಹಿಂಸೆ ಹಾಗೂ ದ್ವೇಷದ ಬಣ್ಣ ಹಚ್ಚುವ ಮೂಲಕ ದೇಶದಲ್ಲಿ ಸೌಹಾರ್ದತೆ ಹಾಗೂ ಏಕತೆಗೆ ಧಕ್ಕೆಯುಂಟುಮಾಡುತ್ತಿರುವ ಆರ್ಎಸ್ಎಸ್ ಸಂಘಟನೆ, ಶಾಂತಿಯ ತೋಟವೆನಿಸಿರುವ ಭಾರತವನ್ನು ಸಂಘರ್ಷದ ಅಂಗಳವಾಗಿ ರೂಪಿಸುತ್ತಿದೆ. “ಹಿಂದುತ್ವ ಅಪಾಯದಲ್ಲಿದೆ” ಎಂಬ ಸುಳ್ಳು ಪ್ರಚಾರದ ಮೂಲಕ ದೇಶದ ಜನತೆಯ ಮನಸ್ಸಿಗೆ ಮಂಕುಬೂದಿ ಎರಚಿ, ಬಿಜೆಪಿ ಮುಖಾಂತರ ಅಧಿಕಾರವನ್ನು ಹಿಡಿದಿರುವ ಈ ಸಂಘಟನೆ, ಕೇವಲ ಲಾಠಿ ಹಿಡಿದು ಮೆರವಣಿಗೆ ನಡೆಸುವುದರ ಹೊರತಾಗಿ ದೇಶಕ್ಕಾಗಿ ಮಾಡಿದ ಯಾವುದೇ ತ್ಯಾಗ ಅಥವಾ ಸೇವೆಯ ದಾಖಲೆ ಇಲ್ಲವೆಂಬುದು ಸ್ಪಷ್ಟವಾಗಿದೆ. ಇದರಿಂದಾಗಿ ಇಂದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಮನದಲ್ಲಿ ಒಂದೇ ಪ್ರಶ್ನೆ ಮೂಡುತ್ತಿದೆ — ಆರ್ಎಸ್ಎಸ್ ದೇಶಕ್ಕಾಗಿ ಮಾಡಿದಾದರೂ ಏನು? ಎಂಬುದಾಗಿ ಪ್ರಶ್ನಿಸಿದ್ದಾರೆ.




