ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಕುಂದಾಪುರ ಕ್ಷೇತ್ರದ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹಲವು ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಕುಂದಾಪುರ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಪ್ರಮುಖ ವಿಷಯಗಳನ್ನು ಒತ್ತಿ ಹೇಳಿದ್ದಾರೆ.
ಮನವಿಯಲ್ಲಿ ಏನಿದೆ ?
1) ಹಂಗಾರುಕಟ್ಟೆ ಬಂದರು ಸರ್ವ ಋತು ಬಂದರಾಗಿ ಅಭಿವೃದ್ಧಿ: ಕರಾವಳಿಯ ಪ್ರಮುಖ ಮೀನುಗಾರಿಕೆ ಕೇಂದ್ರವಾಗಿರುವ ಹಂಗಾರುಕಟ್ಟೆ ಬಂದರು ಸರ್ವ ಋತು ಬಂದರಾಗಿ ಪರಿವರ್ತನೆಯಾಗಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇರುವುದರಿಂದ, ಇದನ್ನು ಆದ್ಯತೆಯಲ್ಲಿ ಸರ್ಕಾರದ ಮುಂದೆ ಪ್ರಸ್ತಾಪಿಸಿ ಅನುಷ್ಠಾನಕ್ಕೆ ಒತ್ತಾಯಿಸಬೇಕೆಂದು ಶಾಸಕರಿಗೆ ಮನವಿ ಮಾಡಲಾಗಿದೆ.
2) ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು:
ಕುಂದಾಪುರ-ಉಡುಪಿ ಕರಾವಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಾಗಿ ಬರುತ್ತಿರುವ ಸಂದರ್ಭದಲ್ಲಿ, ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಹೆಚ್ಚು ಹೂಡಿಕೆ ಮಾಡಲು ಹಾಗೂ ಪ್ರಸಿದ್ಧ ತಾಣಗಳನ್ನು ಜಾಗತಿಕ ಮಟ್ಟಕ್ಕೆ ತರುವಂತೆ ಅಧಿವೇಶನದಲ್ಲಿ ಒತ್ತಾಯಿಸಬೇಕೆಂದು ಬೇಡಿಕೆ.
3) ಐಟಿ ಪಾರ್ಕ್ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿ:
ಸ್ಥಳೀಯ ಯುವಕರು ಉದ್ಯೋಗಕ್ಕಾಗಿ ರಾಜ್ಯದ ಹೊರಗೆ ಹಾಗೂ ವಿದೇಶಗಳಿಗೆ ತೆರಳುವ ದುಸ್ಥಿತಿ ಮುಂದುವರಿದಿರುವುದರಿಂದ, ಕುಂದಾಪುರದಲ್ಲಿ ಐಟಿ ಪಾರ್ಕ್ ಅಥವಾ ಉದ್ಯೋಗ ವಲಯಗಳನ್ನು ತಕ್ಷಣ ನಿರ್ಮಿಸಲು ಸರ್ಕಾರಕ್ಕೆ ಆಗ್ರಹಿಸಬೇಕೆಂದು ಮನವಿಯಲ್ಲಿ ಹೇಳಲಾಗಿದೆ. “ನಮ್ಮ ಕ್ಷೇತ್ರ ಮುದುಕರ ಕ್ಷೇತ್ರವಾಗುತ್ತಿದೆ. ಉದ್ಯೋಗ ಅಪಾರ್ತಿಯಿಂದ ಯುವ ಶಕ್ತಿ ಹೊರ ರಾಜ್ಯಕ್ಕೆ ಹರಿದುಹೋಗುತ್ತಿದೆ,” ಎಂದು ಮನವಿಯಲ್ಲಿ ವಿಷಾದ ವ್ಯಕ್ತವಾಗಿದೆ.
4) ವಾರಾಹಿ ನೀರು ಯೋಜನೆಯ ವಿಳಂಬಕ್ಕೆ ಪರಿಹಾರ:
ಸುಮಾರು 50 ವರ್ಷಗಳಿಂದ ಕರಾವಳಿಗೆ ವಾರಾಹಿ ನೀರು ಬರದೇ ಇರುವ ಪ್ರಶ್ನೆಯನ್ನು ಅಧಿವೇಶನದಲ್ಲಿ ಗಂಭೀರವಾಗಿ ಎತ್ತಿ ಹಿಡಿದು ಕುಡಿಯುವ ನೀರಿನ ಕೊರತೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಮನವಿ ಮಾಡಲಾಗಿದೆ.
5) ಉಡುಪಿ ಜಿಲ್ಲೆಗೆ ಸುಸಜ್ಜಿತ ವೈದ್ಯಕೀಯ ಕಾಲೇಜಿನ ಅಗತ್ಯ:
ಉಡುಪಿ ಜಿಲ್ಲೆಗೆ ಸರ್ಕಾರಿ ಅಥವಾ ಅಗ್ರ ಮಟ್ಟದ ಮೆಡಿಕಲ್ ಕಾಲೇಜು ಸ್ಥಾಪನೆ ಅಗತ್ಯವಿದ್ದು, ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾಗಿ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖವಾಗಿದೆ.
6) ಕರಾವಳಿಯಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ:
ಕರಾವಳಿ ಪ್ರದೇಶದಲ್ಲಿ ಕಡಲ್ಕೊರೆತ ಹಾಗೂ ಕಲ್ಲು ಸಮುದ್ರಕ್ಕೆ ಸೇರುವ ಸಮಸ್ಯೆ ಗಂಭೀರವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಮನವರಿಕೆ ಮಾಡಲು ಶಾಸಕರನ್ನು ಮನವಿ ಮಾಡಲಾಗಿದೆ. “ಸಾರ್ವಜನಿಕರ ಜೀವ-ಆಸ್ತಿ ರಕ್ಷಣೆ ಹೆಚ್ಚು ಮುಖ್ಯ, ಸುಳ್ಳು ಭರವಸೆ ನೀಡಿ ಚುನಾವಣೆಗಾಗಿಯೇ ಕೆಲಸ ಮಾಡುವ ಕಾಲ ಕಳೆದಿದೆ,” ಎಂದು ನಾಗೇಂದ್ರ ಪುತ್ರನ್ ಹೇಳಿದ್ದಾರೆ.





