ಕುಮಟಾ ಮೂಲದ ಕುಟುಂಬವೊಂದು ಶಿರಡಿ–ಅಯೋಧ್ಯೆ ತೀರ್ಥಯಾತ್ರೆಯೆ ಮುಗಿಸಿ ವಾಪಸ್ಸು ಬರುವಾಗ ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಸಿನಿಮೀಯ ಶೈಲಿಯಲ್ಲಿ ದರೋಡೆ ಯತ್ನ ನಡೆದಿದೆ. ಚಾಲಕನ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ದೊಡ್ಡ ಅನಾಹುತ ಆಗುವುದು ತಪ್ಪಿದೆ.
ಮಾಹಿತಿಯಂತೆ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕತಗಾಲ–ಮಾಸ್ತಿಹಳ್ಳ ಮೂಲದ ಕುಟುಂಬವೊಂದು ಸ್ಥಳೀಯ ಗಜಾನನ ಟ್ರಾವೆಲ್ಸ್ನ ಟಿಟಿ ವಾಹನದಲ್ಲಿ ಶಿರಡಿ ಹಾಗೂ ಅಯೋಧ್ಯೆ ಪ್ರವಾಸ ಮುಗಿಸಿ ಶುಕ್ರವಾರ ರಾತ್ರಿ ಕುಮಟಾಕ್ಕೆ ಹಿಂತಿರುಗುತ್ತಿತ್ತು. ಈ ವೇಳೆ, ಸೊಲ್ಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳು ಟಿಟಿ ವಾಹನವನ್ನು ಹಿಂಬಾಲಿಸಿ ದರೋಡೆ ಯತ್ನಕ್ಕೆ ಮುಂದಾಗಿದ್ದಾರೆ.
ಚಲಿಸುತ್ತಿದ್ದ ವಾಹನದ ಹಿಂಭಾಗದ ಬಾಗಿಲಿಗೆ ಜಿಗಿದು ಒಳನುಗ್ಗಿದ ಕಳ್ಳರು ಹಿಂಬದಿಯಲ್ಲಿದ್ದ ಬ್ಯಾಗ್ಗಳನ್ನು ಹೊರಗೆಸೆದರು. ಏಕಾಏಕಿ ನಡೆದ ಈ ಘಟನೆಯಿಂದ ವಾಹನದಲ್ಲಿದ್ದ ಪ್ರಯಾಣಿಕರು ಭೀತಿಗೊಳಗಾದರು. ಆದರೆ ಚಾಲಕ ಗಣಪತಿ ನಾಯ್ಕ್ ಅವರ ಸಮಯಪ್ರಜ್ಞೆ ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಪ್ಪಿಸಿತು. ಅವರು ತಕ್ಷಣವೇ ವಾಹನ ನಿಲ್ಲಿಸಿ, ಕಳ್ಳರ ಎದುರಿಸಲು ಸಜ್ಜಾದರು.

ವಾಹನದಲ್ಲಿ ಅಡುಗೆಗೆ ಇಟ್ಟಿದ್ದ ಆಯುಧಗಳನ್ನು ಕೈಗೆತ್ತಿಕೊಂಡ ಅವರು ಕಳ್ಳರನ್ನು ಎದುರಿಸಲು ಮುಂದಾದರು. ಚಾಲಕನ ಧೈರ್ಯವನ್ನು ಕಂಡು ಬೆಚ್ಚಿಬಿದ್ದ ದರೋಡೆಕೋರರು ಅಲ್ಲಿಂದ ಪರಾರಿಯಾದರು. ಅದೃಷ್ಟವಶಾತ್, ಕಳ್ಳರು ದೋಚಿದ ಬ್ಯಾಗ್ಗಳಲ್ಲಿ ಬಟ್ಟೆಗಳಷ್ಟೇ ಇದ್ದು, ಯಾವುದೇ ನಗದು ಅಥವಾ ಚಿನ್ನಾಭರಣ ಇರಲಿಲ್ಲ. ಪ್ರಾಣಾಪಾಯದಿಂದ ಪಾರಾದ ಕುಟುಂಬವು ದೂರು ನೀಡದೆ ನೇರವಾಗಿ ಕುಮಟಾಕ್ಕೆ ಪ್ರಯಾಣ ಮುಂದುವರಿಸಿತು.
ಪ್ರವಾಸಿಗರಿಗೆ ಎಚ್ಚರಿಕೆ: ಈ ಹೆದ್ದಾರಿಯಲ್ಲಿ ಇಂತಹ ದರೋಡೆ ಯತ್ನಗಳು ಹೊಸದೇನಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಇದರ ಹಿಂದೆ ಮೈಸೂರು ಮತ್ತು ಮಂಗಳೂರು ಭಾಗಗಳಿಂದ ಬಂದ ಪ್ರವಾಸಿಗರೂ ಇದೇ ರೀತಿಯ ದರೋಡೆಗೆ ಬಲಿಯಾಗಿದ್ದಾರೆ. ರಾತ್ರಿ ವೇಳೆ ಸಂಚರಿಸುವ ಪ್ರವಾಸಿ ವಾಹನಗಳೇ ಈ ಗ್ಯಾಂಗ್ಗಳ ಗುರಿಯಾಗಿದ್ದು, “ಅಪಘಾತವಾದಂತೆ ನಟಿಸಿ ವಾಹನ ನಿಲ್ಲಿಸಿ ದರೋಡೆ ಮಾಡುವುದು” ಇವರ ಸಂಚು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಕುಮಟಾ ಕಂದಾಯ ನಿರೀಕ್ಷಕ ಬೆಳಗಾವಿಯಲ್ಲಿ ಪತ್ತೆ
ಸುರಕ್ಷತಾ ಸಲಹೆಗಳು: ಸಾಧ್ಯವಾದಷ್ಟು ರಾತ್ರಿ ವೇಳೆ ದೂರ ಪ್ರಯಾಣವನ್ನು ತಪ್ಪಿಸಿ. ನಿರ್ಜನ ಪ್ರದೇಶಗಳು ಅಥವಾ ಅಪರಿಚಿತ ಸ್ಥಳಗಳಲ್ಲಿ ವಾಹನ ನಿಲ್ಲಿಸಬೇಡಿ. ಅಪಘಾತದ ನೆಪದಲ್ಲಿ ವಾಹನ ತಡೆಯಲು ಪ್ರಯತ್ನಿಸಿದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಪ್ರಯಾಣದ ಸಮಯದಲ್ಲಿ ವಾಹನದ ಬಾಗಿಲುಗಳನ್ನು ಲಾಕ್ ಮಾಡಿ ಇರಿಸಿ. ಯಾರಾದರೂ ಅನುಮಾನಾಸ್ಪದವಾಗಿ ಹಿಂಬಾಲಿಸುತ್ತಿದ್ದರೆ, ವೇಗ ಹೆಚ್ಚಿಸಿ ಜನನಿಬಿಡ ಪ್ರದೇಶದತ್ತ ಚಲಿಸಿ.
ಮಹಾರಾಷ್ಟ್ರದ ಸೊಲ್ಲಾಪುರ ಭಾಗದಲ್ಲಿ ರಾತ್ರಿ ವೇಳೆಯಲ್ಲಿ ಪ್ರಯಾಣಿಸುವವರು ವಿಶೇಷ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. ಚಾಲಕನ ಧೈರ್ಯದಿಂದ ತಪ್ಪಿದ ಈ ಘಟನೆ ಪ್ರವಾಸಿಗರಿಗೆ ವಾಹನ ಚಾಲಕರಿಗೆ ಎಚ್ಚರಿಕೆಯ ಗಂಟೆ ಆಗಿದೆ.





