ಕರ್ನಾಟಕ ದಲಿತ ಸಂಘರ್ಷ ಸಮಿತಿ (DSS) ಕುಮಟಾ ತಾಲ್ಲೂಕು ಶಾಖೆಯ ವತಿಯಿಂದ ಕುಮಟಾದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು. ಸಭೆಯಲ್ಲಿ ತಾಲ್ಲೂಕಿನಾದ್ಯಂತ ಸಂಘಟನೆಯನ್ನು ಬಲಿಷ್ಠವಾಗಿ ರೂಪಿಸುವ ಕುರಿತು ಚರ್ಚೆ ನಡೆಯಿತು. ತಾಲ್ಲೂಕಿನ ಅಡಿ ಬರುವ ಎಸ್ಸಿ/ಎಸ್ಟಿ ಜನರು ಹೆಚ್ಚು ವಾಸಿಸುವ ಗ್ರಾಮಗಳಿಗೆ ತಾಲ್ಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳು ಭೇಟಿ ನೀಡಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಮತ್ತು ಅವರಿಗೆ ಅನ್ಯಾಯವಾದಾಗ ಯಾವ ರೀತಿಯಲ್ಲಿ ಕಾನೂನು ಹೋರಾಟ ಮಾಡಬೇಕು ಮತ್ತು ಸಂಘಟಿತರಾದರೆ ನಮ್ಮ ಹಕ್ಕುಗಳನ್ನು ನಾವು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಬಿ. ಕೃಷ್ಣಪ್ಪ ಅವರ ಜೀವನಪರಂಪರೆ, DSS ಹೋರಾಟದ ಇತಿಹಾಸ, ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ಗ್ರಾಮಸ್ತರಿಗೆ ಪರಿಚಯಿಸಬೇಕು ಮತ್ತು ನಮ್ಮ ಇತಿಹಾಸದ ಬಗ್ಗೆ ನಮ್ಮ ಜನಕ್ಕೆ ಜ್ಞಾನ ನೀಡಬೇಕು. ಸಾಮಾಜಿಕ ಹಕ್ಕುಗಳು, ಸಂವಿಧಾನದಲ್ಲಿ ನೀಡಿರುವ ರಕ್ಷಣೆಗಳು, ಹಾಗೂ ಸರ್ಕಾರದ ಸಹಾಯ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಆರಂಭಿಸಿದ್ದೆವೆ ಆದ್ದರಿಂದ ಎಲ್ಲರೂ ಸಹಕರಿಸಲು ಕೋರಿದಾಗ ಎಲ್ಲರೂ ಸಹಕರಿಸಲು ಸಿದ್ದರಿದ್ದೇವೆ ಎಂದು ಹೇಳಿದರು.

ಸಭೆಯನ್ನು ದ.ಸಂ.ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಎಸ್. ಫಕ್ಕೀರಪ್ಪ ಉದ್ಘಾಟಿಸಿದರು. ಜಿಲ್ಲಾ ಸಂಚಾಲಕರಾದ ಗೋಪಾಲ ನಡಕಿನಮನಿ ಸಭೆಯ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಬೊಮ್ಮಯ್ಯ ಕ್ಕೆ ಹಳ್ಳೆರ್ (ಕುಮಟಾ), ಮಂಜುನಾಥ ಎನ್. ಹಳ್ಳೆರ್ (ಹೊನ್ನಾವರ), ಕಲ್ಲಪ್ಪ ಎಂ. ಹೋಳಿ (ಯಲ್ಲಾಪುರ), ಹಾಗೂ ಮುಂಡಗೋಡ ಸಂಚಾಲಕರಾದ ಲಕ್ಷ್ಮಣ ಬೋವಿವಡ್ಡರ ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಮಳೆ ಬಂದರೆ ಹೊಂಡ, ಬಿಸಿಲಾದ್ರೆ ಧೂಳು: ಭೀಮಘರ್ಜನೆಯ ವಿಡಿಯೋ ವೈರಲ್
ಸಭೆಯಲ್ಲಿ ಹೊನಲು ಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಘಟನೆಯ ಬಲವರ್ಧನೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ತಾಲ್ಲೂಕು ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು.





