ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪಥ ಕಾಮಗಾರಿ ಹಾಗೂ ಕುಮಟಾ-ಶಿರಸಿ (ರಾ.ಹೆ. 767(ಇ)) ರಸ್ತೆ ಕಾಮಗಾರಿಗಳ ವಿಳಂಬದ ಬಗ್ಗೆ ಶಾಸಕ ದಿನಕರ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಮಗಾರಿಗಳನ್ನು ತಕ್ಷಣ ಚುರುಕುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ತಾಲೂಕು ಸೌಧದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್ಬಿ, ಆರ್ಎನ್ಎಸ್ ಕಂಪನಿ, ಅರಣ್ಯ ಇಲಾಖೆ ಹಾಗೂ ಬಿಎಸ್ಎನ್ಎಲ್ ಅಧಿಕಾರಿಗಳೊಂದಿಗೆ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಒಂದು ತಿಂಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದರೆ ಟೋಲ್ ಅನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಅವರು ಐಆರ್ಬಿ ಕಂಪನಿಗೆ ಎಚ್ಚರಿಕೆ ನೀಡಿದರು.
ಕಳೆದ ಸಭೆಯ ಬಳಿಕ ಕೇವಲ 100 ಮೀಟರ್ ಚರಂಡಿ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ ಎಂಬ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕನ್ಸಲ್ಟಂಟ್ ಇಂಜಿನಿಯರ್ ದಯಾನಂದ ಅವರ ಉತ್ತರದಿಂದ ಕೋಪಗೊಂಡ ಶಾಸಕರು.“ಐಆರ್ಬಿಯ ಕಾಮಗಾರಿ ನಿಗಾವಹಣೆ ಸಮರ್ಪಕವಾಗಿಲ್ಲ. ನಿಮ್ಮೊಳಗೆ ಹೊಂದಾಣಿಕೆ ಇದ್ದಂತಿದೆ. ಟೋಲ್ ಆರಂಭಿಸಲು ಅನುಮತಿ ನೀಡಿದ್ದೇ ನಮ್ಮ ತಪ್ಪು,” ಎಂದು ತರಾಟೆಗೆ ತೆಗೆದುಕೊಂಡರು.
ಒಂದು ತಿಂಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರದಿದ್ದರೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಟೋಲ್ ಬಂದ್ ಮಾಡಲು ಸೂಚಿಸಲಾಗುವುದು. ಇಂದೇ ನೀವು ಲಿಖಿತವಾಗಿ ಕಾಮಗಾರಿ ಯಾವಗ ಮುಗಿಸುತ್ತೀರಿ ಎಂಬ ವಿವರ ನೀಡಬೇಕು. ಮುಂದಿನ ಸಭೆಗೆ ಮೇಲಾಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಪ್ರಗತಿ ಇಲ್ಲದಿದ್ದರೆ ನಿಮ್ಮನ್ನು ಉಪವಿಭಾಗಾಧಿಕಾರಿಯ ಕೊಠಡಿಯಲ್ಲೇ ಕೂರಿಸುತ್ತೇವೆ,” ಎಂದು ಎಚ್ಚರಿಕೆ ನೀಡಿದರು. ಐಆರ್ಬಿ ಇಂಜಿನಿಯರ್ ಮಲ್ಲಿಕಾರ್ಜುನ ಅವರು, ಹೊನ್ನಾವರ ಸಮೀಪ ಕಾಂಡ್ಲಾ ಗಿಡಗಳ ಕಟಾವು ಪೂರ್ಣಗೊಂಡ ಕೂಡಲೇ ಸೇತುವೆ ಕಾಮಗಾರಿ ಆರಂಭಿಸುವುದಾಗಿ ಹೇಳಿದರು. ತಕ್ಷಣ ಕಾಂಡ್ಲಾ ಕಟಾವಿಗೆ ಕ್ರಮ ವಹಿಸುವಂತೆ ಆರ್ಎಫ್ಒ ರಾಜು ನಾಯ್ಕ ಮತ್ತು ಡಿಆರ್ಎಫ್ಒ ರಾಘವೇಂದ್ರ ಅವರಿಗೆ ಶಾಸಕರು ಸೂಚಿಸಿದರು. ಅಳ್ವೆಕೋಡಿಯಲ್ಲಿ ಭೂ ಪರಿಹಾರ ವಿತರಣೆ ಪೂರ್ಣಗೊಂಡಿದೆ ಎಂದೂ ಮಲ್ಲಿಕಾರ್ಜುನ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಕೆಡಿಸಿಸಿ ಬ್ಯಾಂಕ್ ಚುನಾವಣೆ: ನಾಮಪತ್ರ ಸಲ್ಲಿಕೆ ಆರಂಭ
ಕುಮಟಾ–ಶಿರಸಿ (ರಾ.ಹೆ. 767(ಇ)) ರಸ್ತೆ ಕಾಮಗಾರಿ ನಿಧಾನಗತಿಯಲ್ಲಿದೆ ಎಂದು ಶಾಸಕರು ಖಂಡಿಸಿದರು. ಆರ್ಎನ್ಎಸ್ ಕಂಪನಿಯು ತನ್ನ ವಿಶ್ವಾಸ ಕಳೆದುಕೊಂಡಿದೆ ಎಂದು ಅವರು ಟೀಕೆ ಮಾಡಿದರು. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಸಂಪೂರ್ಣಗೊಳಿಸಲೇಬೇಕು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಿತೀಶ್ ಶೆಟ್ಟಿ ಮತ್ತು ಇಂಜಿನಿಯರ್ ಆರ್. ಬಿ. ಪಾಟೀಲ ಅವರಿಗೆ ಸ್ಪಷ್ಟ ಸೂಚನೆ ನೀಡಿದರು.ಆರ್.ಬಿ. ಪಾಟೀಲ ಅವರು ಯೋಜಿತ ಪ್ರದೇಶದಲ್ಲಿ 526 ಮರಗಳ ಕಟಾವು ಬಾಕಿಯಿದೆ ಎಂದು ತಿಳಿಸಿದಾಗ, ಶಾಸಕರು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ತಕ್ಷಣ ಕಟಾವು ಆರಂಭಿಸಲು ಸೂಚಿಸಿದರು. ಬಾಕಿ ಇರುವ 7 ಕಿ.ಮೀ. ರಸ್ತೆ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿದರು. “ಮುಂದಿನ ಸಭೆಯಲ್ಲಿ ಇದೇ ಕಾರಣಗಳು ಪುನರಾವರ್ತನೆಯಾದರೆ ಸಹಿಸುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು. ಕಾಮಗಾರಿಯ ದಿನನಿತ್ಯದ ಪ್ರಗತಿಯನ್ನು ನಿಗಾದಲ್ಲಿ ಇರಿಸಲು ತಹಸೀಲ್ದಾರ್ ಕಚೇರಿಯ ಅಧಿಕಾರಿಯನ್ನು ನಿಯೋಜಿಸಲು ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ ಅವರಿಗೆ ಸೂಚಿಸಿದರು.
ಬಿಎಸ್ಎನ್ಎಲ್ ಟವರ್ ವಿಳಂಬಕ್ಕೆ ಆಕ್ರೋಶ: ಬಿಎಸ್ಎನ್ಎಲ್ ಟವರ್ ಸ್ಥಾಪನೆ ವಿಳಂಬವಾಗಿರುವುದಕ್ಕೆ ಯಲವಳ್ಳಿ ಗ್ರಾಮಸ್ಥರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಬಿಎಸ್ಎನ್ಎಲ್ ಇಂಜಿನಿಯರ್ ಮಾತನಾಡಿ, “ಯಲವಳ್ಳಿಯಲ್ಲಿ ಮುಂದಿನ 10 ದಿನಗಳಲ್ಲಿ ಟವರ್ ಕಾರ್ಯಾರಂಭಗೊಳ್ಳಲಿದೆ,” ಎಂದು ಭರವಸೆ ನೀಡಿದರು. ನಾಗೂರಿನಲ್ಲಿ ಸ್ಥಳ ಹಸ್ತಾಂತರದ ವಿಳಂಬವೇ ಸಮಸ್ಯೆ ಎಂದು ಅವರು ಸ್ಪಷ್ಟಪಡಿಸಿ, “ಇನ್ನೂ 2 ತಿಂಗಳಲ್ಲಿ ಟವರ್ ಕಾರ್ಯಾರಂಭಗೊಳ್ಳುತ್ತದೆ,” ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ಗ್ರೇಡ್-2 ತಹಸೀಲ್ದಾರ್ ಸತೀಶ ಗೌಡ, ಆರ್ಎಫ್ಒ ಪ್ರೀತಿ ನಾಯ್ಕ, ಪಿಎಸ್ಐ ಮಂಜುನಾಥ ಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





