ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮಂಜು ಜೈನ್ ಅವರು ಕುಮಟಾ ಪೊಲೀಸ್ ಇಲಾಖೆಗೆ ವಿನೂತನ ಮನವಿಯೊಂದನ್ನು ಸಲ್ಲಿಸಿ ಇಲಾಖೆಯನ್ನೇ ಗಲಿಬಿಲಿಗೊಳಿಸಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ “ಅನಾದಿಕಾಲದಿಂದಲೂ” ನಡೆದುಕೊಂಡು ಬಂದಿರುವ ಆಟಗಳಾದ ‘ಹೊಂಡೆ ಆಟ’, ‘ಅಂದರ್-ಬಾಹರ್’, ‘ಸೋಲಕಾಯಿ’ ಮತ್ತು ‘ಕುಟುಕುಟೆ’ ಆಟಗಳಿಗೆ ದಿನಾಂಕ 19-10-2025 ರಿಂದ 22-10-2025 ರವರೆಗೆ ಅನುಮತಿ ನೀಡಬೇಕು ಹಾಗೂ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘವು ಮನವಿ ಮಾಡಿಕೊಂಡಿದೆ.
ಸಂಘದ ಪ್ರಕಾರ, ಕುಮಟಾದಲ್ಲಿ ದೀಪಾವಳಿ ಹಬ್ಬವು ಪರಿಪೂರ್ಣವಾಗಬೇಕಂದರೆ ಈ ಆಟಗಳಿಗೆ ಅನುಮತಿ ನೀಡುವುದು ಅತ್ಯಗತ್ಯ! ಇವು ಕೇವಲ ಆಟಗಳಲ್ಲ, ಬದಲಿಗೆ ಶತಮಾನಗಳ ಸಂಸ್ಕೃತಿಯ ಪ್ರತೀಕ ಎಂದು ಸಂಘದ ಮುಖಂಡರು ಮನವಿ ನೀಡುವ ಸಂದರ್ಭದಲ್ಲಿ ಹೇಳಿದರು.

ಎಚ್ಚರಿಕೆ ಕೇಳಿ ದಂಗಾದ ಇಲಾಖೆ: ಸಂಘದ ವಾದ ಇಲ್ಲಿಗೇ ನಿಂತಿಲ್ಲ. ಒಂದು ವೇಳೆ ಈ ಮಹೋನ್ನತ ಆಟಗಳಿಗೆ ಅನುಮತಿ ನೀಡದೇ ಇದ್ದರೆ, ಕುಮಟಾ ತಾಲ್ಲೂಕಿನಲ್ಲಿ ಬೇರೆ ಯಾವುದೇ ಮನೋರಂಜನೆ ಕಾರ್ಯಕ್ರಮಕ್ಕೆ, ಹಬ್ಬ, ಜಾತ್ರೆ ಮತ್ತು ಉತ್ಸವಗಳಿಗೆ ಅನುಮತಿ ನೀಡಬಾರದು ಎಂದು ಸಂಘದವರು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಅನುಮತಿ ನಿರಾಕರಿಸಿದರೆ “ಉಗ್ರ ಹೋರಾಟ” ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುಮಟಾ | ದ.ಸಂ.ಸಮಿತಿ ಸಮಾಲೋಚನೆ ಸಭೆ: ಸಂಘಟನೆಯ ಬಲವರ್ಧನೆಗೆ ತೀರ್ಮಾನ
ಸಂಘದ ಈ ಬೇಡಿಕೆ ಕೇಳಿ ತಲೆ ಕೆಡಿಸಿಕೊಂಡಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು, “ನಾವು ಈ ಆಟಗಳನ್ನು ‘ಸಾಂಸ್ಕೃತಿಕ ಕಾರ್ಯಕ್ರಮ’ ಎಂದು ಪರಿಗಣಿಸಬೇಕೋ ಅಥವಾ ಬೇರೆ ರೀತಿಯಲ್ಲಿ ಪರಿಗಣಿಸಬೇಕೋ ಹಾಗೂ ಕಾನೂನಿನಲ್ಲಿ ಇದಕ್ಕೆ ಏನಾದರೂ ಅವಕಾಶ ಇದಿಯಾ ಅಥವಾ ಇಲ್ಲವೇ” ಎಂಬುದನ್ನು ನಿರ್ಧರಿಸಲಾಗದೆ ಗಲಿಬಿಲಿಗೊಂಡಿದ್ದಾರೆ ಎನ್ನಲಾಗಿದೆ.





