ಕುಮಟಾ: ಪಟ್ಟಣದಲ್ಲಿ ಇತ್ತೀಚೆಗೆ ಬ್ಯಾಟರಿ ಅಂಗಡಿ ಕಳ್ಳತನ ಮಾಡಿದ ಅಪರಾಧಿಗಳನ್ನು 48 ಗಂಟೆಗಳಲ್ಲಿ ಬಂಧಿಸುವ ಮೂಲಕ ಕುಮಟಾ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ. ಅಪರಾಧಿಗಳು ಕುಖ್ಯಾತ ಅಂತರಾಜ್ಯ ಕಳ್ಳರಾಗಿದ್ದು ಅವರಿಂದ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಕಳವು ಮಾಡಿದ್ದ ಬ್ಯಾಟರಿಗಳು ಸೇರಿದಂತೆ ಸುಮಾರು ₹5 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ : ದಿನಾಂಕ 08-10-2025ರ ಮಧ್ಯರಾತ್ರಿ ಪಟ್ಟಣದ ಗಿಬ್ ಸರ್ಕಲ್ ಬಳಿಯ ಅಮ್ರಾನ್ ಬ್ಯಾಟರಿ ಶೋರೂಮ್ನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ₹96,000 ಮೌಲ್ಯದ 12 ಬ್ಯಾಟರಿಗಳನ್ನು ಕಳವು ಮಾಡಿದ್ದರು. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು.
ಪೊಲೀಸ್ ನಿರೀಕ್ಷಕ ಯೋಗೇಶ್ ಕೆ.ಎಂ. ಅವರ ನೇತೃತ್ವದಲ್ಲಿ ತನಿಖಾಧಿಕಾರಿ ಮಯೂರ ಪಟ್ಟಣಶೆಟ್ಟಿ ಹಾಗೂ ಸಿಬ್ಬಂದಿಗಳಾದ ಗಣೇಶ ಜಿ. ನಾಯ್ಕ, ದಯಾನಂದ ನಾಯ್ಕ, ಚಿದಾನಂದ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯ್ಕ ಮತ್ತು ಜಿಲ್ಲಾ ಸಿ.ಡಿ.ಆರ್. ಸೆಲ್ನ ಉದಯ ಗುನಗಾ ಅವರನ್ನೊಳಗೊಂಡ ತಂಡವು ತನಿಖೆಯನ್ನು ಚುರುಕುಗೊಳಿಸಿತು. ಭಟ್ಕಳ ಮೂಲದ ಇಬ್ಬರು ಆರೋಪಿಗಳು ಸೆರೆ : ತಾಂತ್ರಿಕ ಮಾಹಿತಿ ಮತ್ತು ಖಚಿತ ಸುಳಿವಿನ ಆಧಾರದ ಮೇಲೆ ತಂಡವು ದಿನಾಂಕ 10-10-2025 ರಂದು ಭಟ್ಕಳ ಮೂಲದ ಪೌಜಾನ್ ಅಹಮದ್ (20) ಮತ್ತು ಮೊಹಮ್ಮದ್ ಸುಪಿಯಾನ್ (19) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮುರುಡೇಶ್ವರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರದಲ್ಲೇ ಸ್ಥಾಪನೆ: ಸಚಿವ ಮಂಕಾಳ ವೈದ್ಯ ಹೇಳಿಕೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ₹4 ಲಕ್ಷ ಮೌಲ್ಯದ ಮಾರುತಿ ರಿಟ್ಜ್ ಕಾರು ಹಾಗೂ ಕಳವು ಮಾಡಲಾಗಿದ್ದ ₹96,000 ಮೌಲ್ಯದ 12 ಬ್ಯಾಟರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ವಿಚಾರಣೆ ವೇಳೆ, ಆರೋಪಿ ಪೌಜಾನ್ ಅಹಮದ್ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ಕೃತ್ಯಕ್ಕೆ ಬಳಸಿದ ಕಾರನ್ನು ಹಾಸನ ಜಿಲ್ಲೆಯ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.ಅಷ್ಟೇ ಅಲ್ಲದೆ, ಭಟ್ಕಳ, ಬೈಂದೂರು, ಗಂಗೊಳ್ಳಿ ಮತ್ತು ಬೇಲೂರಿನ ಅನೇಕ ಕಳ್ಳತನ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿಯನ್ನು ನೀಡಿದ್ದಾನೆ ಎಂದು ತಿಳಿದುಬಂದಿದೆ.
ಎರಡು ದಿನಗಳಲ್ಲಿ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿ, ಕಳವು ಸ್ವತ್ತುಗಳನ್ನು ವಶಪಡಿಸಿಕೊಂಡ ಕುಮಟಾ ಪೊಲೀಸರ ದಕ್ಷ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಜಿಲ್ಲಾ ಹಾಗೂ ಉಪ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.





