ಕುಮಟಾ ಪುರಸಭೆಯ ಮುಖ್ಯಾಧಿಕಾರಿಗಳು ಕಿರುಕುಳ ಮತ್ತು ಅಕ್ರಮವಾಗಿ ಖಾತಾ ಬದಲಾವಣೆ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆಯ ಕಂದಾಯ ನಿರೀಕ್ಷಕ (Revenue Inspector) ವೆಂಕಟೇಶ್ ಆರ್. ಅವರು ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಭಟ್ಕಳ ಮೂಲದವರಾದ ವೆಂಕಟೇಶ್ ಆರ್. ಅವರು ತಮ್ಮ ತಂದೆಯ ನಿಧನದ ನಂತರ ಅನುಕಂಪ ನೇಮಕಾತಿ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಿಕೊಂಡಿದ್ದರು. ಕಳೆದ ರಾತ್ರಿ ಮನೆಯಿಂದ ನಾಪತ್ತೆಯಾಗುವ ಮುನ್ನ ವೆಂಕಟೇಶ್ ಅವರು ತಮ್ಮ ಸಹೋದ್ಯೋಗಿಗಳ ವಾಟ್ಸಾಪ್ ಗ್ರೂಪ್ಗೆ ಒಂದು ಪತ್ರ ಕಳುಹಿಸಿದ್ದು, ಅದರಲ್ಲಿ ಕುಮಟಾ ಪುರಸಭೆಯ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪತ್ರದ ಪ್ರಕಾರ, ಮುಖ್ಯಾಧಿಕಾರಿ ಎಂ. ಆರ್ ಸ್ವಾಮಿ ಅವರು ಒಂದು ಕಟ್ಟಡದ ಅಧಿಕೃತ ‘ಬಿ’ ಖಾತೆಯನ್ನು ‘ಎ’ ಖಾತೆಗೆ ಬದಲಿಸಲು ನನ್ನ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದ 4 ಲಕ್ಷ ಲಂಚ ಸಿಗಲಿದೆ ಎಂದು ಹೇಳಿದ್ದರು. ಅಕ್ರಮಕ್ಕೆ ಸಹಕರಿಸಲು ನಿರಾಕರಿಸಿದ ವೆಂಕಟೇಶ ಅವರ ಮೇಲೆ ಅಶ್ಲೀಲ ಪದ ಬಳಕೆ ಮಾಡಿ, ಮಾನಸಿಕ ಹಿಂಸೆ, ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ವೆಂಕಟೇಶ ಅವರು ಪತ್ರದಲ್ಲಿ ಮುಖ್ಯಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼದೀಕ್ಷಾ ಬ್ರ್ಯಾಂಡ್ʼ ಮೂಲಕ ಸ್ವಾವಲಂಬನೆ ಬದುಕು; PMFME ಯೋಜನೆಯಿಂದ ಯಶಸ್ಸು ಕಂಡ ಮಹಿಳಾ ಉದ್ಯಮಿ
ಇದು ಶಾಸಕ ದಿನಕರ ಶೆಟ್ಟಿ ಅವರ ಕೆಲಸ, ನನಗೆ ಮೇಲಿನಿಂದ ಒತ್ತಡ ಇದೆ” ಎಂದು ಹೇಳುತ್ತಾ, ಎಲ್ಲರ ಎದುರೇ ನನ್ನನ್ನು ಹಿಯಾಳಿಸುತ್ತಿದ್ದರು ಎಂದು ವೆಂಕಟೇಶ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರ ಕಳುಹಿಸಿದ ಕೆಲವೇ ಸಮಯದ ನಂತರ ಅವರು ನಾಪತ್ತೆಯಾಗಿದ್ದು, ಈ ಘಟನೆ ಪುರಸಭೆ ವಲಯದಲ್ಲಿ ಆತಂಕ ಮೂಡಿಸಿದೆ.
ಮುಖ್ಯಾಧಿಕಾರಿಯು ತನ್ನ ಸಹೋದ್ಯೋಗಿ ಮೇಲೆ ಕಿರುಕುಳ ಮತ್ತು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಕುಮಟಾ ಪುರಸಭೆ ಸಿಬ್ಬಂದಿಗಳು ಒಟ್ಟಾಗಿ ಅಧ್ಯಕ್ಷರಿಗೆ ಮನವಿ ನೀಡಿದ್ದಾರೆ. ಇಲ್ಲಿಂದ ಮುಖ್ಯಾಧಿಕಾರಿಯನ್ನು ತಕ್ಷಣವೇ ವರ್ಗಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವೆಂಕಟೇಶ ಅವರ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.





