ಕುಮಟಾ: ಐತಿಹಾಸಿಕ ಮಿರ್ಜಾನ ಕೋಟೆ ರಸ್ತೆಯಲ್ಲಿ ಅಕ್ರಮವಾಗಿ ಗೇಟ್ ಅಳವಡಿಸಿ ಸುಂಕ ವಸೂಲಿ ಮಾಡಲು ಮುಂದಾಗಿದ್ದ ಪಂಚಾಯತ್ ನಿರ್ಧಾರಕ್ಕೆ ಈಗ ಭಾರಿ ಹಿನ್ನಡೆಯಾಗಿದೆ.
ಗ್ರಾಮಸ್ಥರ ತೀವ್ರ ಪ್ರತಿಭಟನೆ ಹಾಗೂ ಮಾಧ್ಯಮಗಳ ನಿರಂತರ ವರದಿಗಾರಿಕೆಯ ಫಲವಾಗಿ ಎಚ್ಚೆತ್ತ ಮಿರ್ಜಾನ ಗ್ರಾಮ ಪಂಚಾಯತ್ ಆಡಳಿತವು ಗೇಟ್ ನಿರ್ಮಾಣದ ತನ್ನ ವಿವಾದಾತ್ಮಕ ನಿರ್ಧಾರವನ್ನು ಅಧಿಕೃತವಾಗಿ ಕೈಬಿಟ್ಟಿದೆ.
ಈ ಸಂಬಂಧ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರಿಗೆ ಲಿಖಿತವಾಗಿ ‘ಹಿಂಬರಹ’ ನೀಡುವ ಮೂಲಕ ಸೃಷ್ಟಿಯಾಗಿದ್ದ ಆತಂಕ ಮತ್ತು ವಿವಾದಕ್ಕೆ ತೆರೆ ಎಳೆದಿದ್ದಾರೆ. ಮಿರ್ಜಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಛತ್ರಕೂರ್ವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಸಾರ್ವಜನಿಕ ರಸ್ತೆಯಲ್ಲಿ ಪ್ರವಾಸಿಗರಿಂದ ಸುಂಕ ವಸೂಲಿ ಮಾಡುವ ಉದ್ದೇಶದಿಂದ ಗೇಟ್ ಅಳವಡಿಸಲು ಪಂಚಾಯತ್ ಈ ಹಿಂದೆ ತಯಾರಿ ನಡೆಸಿತ್ತು.

ಸಾರ್ವಜನಿಕ ರಸ್ತೆಯನ್ನು ಈ ರೀತಿ ಬಂದ್ ಮಾಡುವುದು ಅಕ್ರಮ ಎಂದು ಖಂಡಿಸಿದ್ದ ಗ್ರಾಮಸ್ಥರು, ಪಂಚಾಯತ್ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಈ ಗಂಭೀರ ವಿಷಯದ ಕುರಿತು ಮಾಧ್ಯಮಗಳಲ್ಲಿ ವಿಸ್ತೃತ ವರದಿಗಳು ಪ್ರಕಟವಾಗುವ ಮೂಲಕ ಸರ್ಕಾರದ ಮತ್ತು ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.
ಈ ಸುದ್ದಿ ಓದಿದ್ದೀರಾ? ಕಾರವಾರ-ಅಂಕೋಲಾ ಕ್ಷೇತ್ರ ಜೆಡಿಎಸ್ ಪಾಲಾಗದು: ಮೈತ್ರಿ ವದಂತಿಗಳಿಗೆ ಬಿಜೆಪಿ ವಕ್ತಾರ ಮೊಗಟಾ ತಿರುಗೇಟು
ಮಾಧ್ಯಮಗಳ ವರದಿ ಹಾಗೂ ಸಾರ್ವಜನಿಕರ ಹೋರಾಟಕ್ಕೆ ಮಣಿದ ಮಿರ್ಜಾನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಫೆಬ್ರವರಿ 17, 2026 ರಂದು ಅಧಿಕೃತ ಪತ್ರವನ್ನು ಹೊರಡಿಸಿದ್ದಾರೆ. “ಸಾರ್ವಜನಿಕ ಹಿತದೃಷ್ಟಿಯಿಂದ ಮಿರ್ಜಾನ ಕೋಟೆಯ ಹತ್ತಿರ ಛತ್ರಕೂರ್ವೆ ಮುಖ್ಯ ರಸ್ತೆಗೆ ಅಡ್ಡಲಾಗಿ ಯಾವುದೇ ಗೇಟ್ ಅಳವಡಿಸಲಾಗುವುದಿಲ್ಲ” ಎಂದು ಪತ್ರದಲ್ಲಿ ಸ್ಪಷ್ಟವಾದ ಭರವಸೆ ನೀಡಿದ್ದಾರೆ.
ಪಂಚಾಯತ್ನ ಈ ನಿರ್ಧಾರದಿಂದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ತಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
“ನಮ್ಮೂರಿನ ರಸ್ತೆಗೆ ಗೇಟ್ ಹಾಕದಂತೆ ನಾವು ಮಾಡಿದ ಮನವಿಗೆ ಪಂಚಾಯತ್ ಸ್ಪಂದಿಸಿ ಲಿಖಿತ ಭರವಸೆ ನೀಡಿದೆ. ನಮ್ಮ ಸಮಸ್ಯೆಯನ್ನು ಸಮಾಜಕ್ಕೆ ತಿಳಿಸಿ, ನ್ಯಾಯ ಒದಗಿಸಿಕೊಡಲು ಸಹಕರಿಸಿದ ಎಲ್ಲಾ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಿಗೆ ಛತ್ರಕೂರ್ವೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ,” ಎಂದು ಗ್ರಾಮದ ಪ್ರಮುಖರಾದ ವಿನಾಯಕ ಪಟಗಾರ, ದಾಮೋದರ, ಲಕ್ಷ್ಮಣ, ಲೋಕೇಶ, ಚೆನ್ನಪ್ಪ, ದಯಾನಂದ ಹಾಗೂ ನವೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





