ಗಾಂಧೀಜಿಯ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶಗಳು ಇಂದು ವಿಶ್ವದ ಅನೇಕ ದೇಶಗಳ ಸಂವಿಧಾನಗಳಲ್ಲಿ ಸ್ಥಾನ ಪಡೆದಿವೆ. ಆ ಮೂಲಕ ಗಾಂಧಿ ಅಲ್ಲೆಲ್ಲವೂ ಜೀವಂತವಾಗಿದ್ದಾರೆ ಎಂದು ಮಣಿಪಾಲ ಗಾಂಧಿ ಕೇಂದ್ರದ ಸ್ಥಾಪಕ ನಿರ್ದೇಶಕ ಪ್ರೊಫೆಸರ್ ವರದೇಶ್ ಹಿರೇಗಂಗೆಯವರು ಅಭಿಪ್ರಾಯಪಟ್ಟರು.
ಅವರು ಇಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಗಾಂಧಿ ಹುತಾತ್ಮ ದಿನದಂದು ಆಯೋಜಿಸಲಾದ “ಮಹಾತ್ಮ ಹುತಾತ್ಮ” ಕಾರ್ಯಕ್ರಮದಲ್ಲಿ ಮಾತನಾಡಿದರು. ಸತ್ಯಕ್ಕೆ ವಿವೇಕದ ಶಕ್ತಿ ಇದೆ; ಅದಕ್ಕೆ ಅಳಿವು ಇಲ್ಲ ಎಂದ ಅವರು, ಗಾಂಧೀಜಿ ಸನಾತನವಾದಿ ಹಿಂದೂ ಆಗಿದ್ದರೂ ಎಲ್ಲಾ ಧರ್ಮಗಳನ್ನು ಗೌರವಿಸುವ ತಾತ್ವಿಕತೆಯನ್ನು ಹೊಂದಿದ್ದರು. ‘ನನ್ನ ಧರ್ಮವೇ ಶ್ರೇಷ್ಠ’ ಎನ್ನುವ ಮನೋಭಾವ ಗಾಂಧೀ ತತ್ತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಅಮೆರಿಕದ ಟ್ರಂಪ್ ಮಾದರಿಯ ಅಭಿವೃದ್ಧಿಯನ್ನು ಇಂದು ನಮ್ಮ ದೇಶದಲ್ಲಿ ಅನುಸರಿಸಲಾಗುತ್ತಿದ್ದು, ಅದು ಪರಿಸರ ನಾಶ, ಸಂಪನ್ಮೂಲ ಲೂಟಿ ಹಾಗೂ ಖಾಸಗೀಕರಣದ ಮೂಲಕ ಕೆಲವರಷ್ಟೇ ಲಾಭಪಡುವ ವಿನಾಶಕಾರಿ ಅಭಿವೃದ್ಧಿಯಾಗಿದೆ ಎಂದು ಅವರು ಟೀಕಿಸಿದರು.
1949ರಲ್ಲಿ ಗಾಂಧೀಜಿಯ ದೇಹ ಹತ್ಯೆ ನಡೆದರೂ, ಇಂದಿಗೂ ಅವರ ಸಿದ್ಧಾಂತಗಳ ಹತ್ಯೆ ನಡೆಯುತ್ತಲೇ ಇದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಗಾಂಧೀಜಿಗೆ ಭಿನ್ನಾಭಿಪ್ರಾಯಗಳಿದ್ದರೂ ದ್ವೇಷ ಎಂದಿಗೂ ಇರಲಿಲ್ಲ. ದ್ವೇಷದಿಂದ ಹತ್ಯೆ ನಡೆದರೂ ಅಂತಿಮವಾಗಿ ಪ್ರೀತಿ, ಶಾಂತಿ ಮತ್ತು ಸಹಬಾಳ್ವೆಯೇ ಗೆಲ್ಲುತ್ತದೆ ಎಂದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸಿ ಹೊಸ ಯೋಜನೆಗಳ ಮೂಲಕ ಉದ್ಯೋಗ ನಿರಾಕರಣೆ ಮಾಡುವುದು ಶ್ರೀರಾಮನಿಗೂ ಒಪ್ಪಲಾರದ ಸಂಗತಿ ಎಂದು ಹೇಳಿದರು. ಇಂದಿನ ಭಾರತದ ಅಭಿವೃದ್ಧಿ ಪ್ರಶ್ನಾರ್ಹ ಹಾಗೂ ವಿನಾಶಕಾರಿ ಅಭಿವೃದ್ಧಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ವೇದಿಕೆಯಲ್ಲಿ ಕುಂದಾಪುರದ ಪ್ರಗತಿಪರ ಚಿಂತಕರಾದ ಪ್ರೊಫೆಸರ್ ಹಾಯವದನ ಮೂಡುಸಗ್ರಿಯವರು ಉಪಸ್ಥಿತರಿದ್ದು ಮಾತನಾಡಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಕುಂದಾಪುರ ಘಟಕದ ಆಶಾ ಕರ್ವಾಲೋ ತಂಡದವರು ಸೌಹಾರ್ದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕುಂದಾಪುರದ ವಿವಿಧ ಸಂಘಟನೆಗಳ ಶಾಂತಿಪ್ರಿಯ ನಾಗರಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕೊನೆಯಲ್ಲಿ ಗಾಂಧೀಜಿಯವರ “ಎಲ್ಲರ ನೋವನ್ನು ಬಲ್ಲೆನಾದರೆ” ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.





