ಹೋರಾಟದ ಕರಪತ್ರಗಳನ್ನು ಹಂಚುತ್ತಿದ್ದ ಇಬ್ಬರು ಕಾರ್ಮಿಕ ನಾಯಕರನ್ನು ಬಂಧಿಸಿರುವ ಘಟನೆ ಬೆಂಗಳೂರು ನಗರದ ಬಿಟಿಎಂ ಲೇಔಟ್ ಸಮೀಪ ನಡೆದಿದೆ. ಬಂಧಿತರನ್ನು ಸಿಪಿಐ(ಎಂ) ಮುಖಂಡರು ಮತ್ತು ಕರ್ನಾಟಕ ಮಾಹಿತಿ ತಂತ್ರಜ್ಞಾನ ನೌಕರರ ಸಂಘದ(KITU) ನಾಯಕರುಗಳಾದ ಚಿತ್ರಾ ಮತ್ತು ಸುಹಾಸ್ ಅಡಿಗ ಎಂದು ಗುರುತಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ, ರೈತ -ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಡಿಸೆಂಬರ್ 21ರಂದು ಸಿಪಿಐಎಂ ಬೃಹತ್ ಹೋರಾಟವನ್ನು ಹಮ್ಮಿಕೊಂಡಿದೆ. ಈ ಹೋರಾಟದ ಪ್ರಚಾರದ ಭಾಗವಾಗಿ ಈ ಇಬ್ಬರು ನಾಯಕರು ಕರಪತ್ರವನ್ನು ಹಂಚುತ್ತಿದ್ದರು. ಈ ವೇಳೆ ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ವಿಜಯಪುರ | ಏಳು ಮಂದಿ ಕಾರ್ಮಿಕರ ಸಾವು; ಗೋದಾಮು ಮಾಲೀಕರ ಬಂಧನಕ್ಕೆ ಆಗ್ರಹ
ಇತ್ತೀಚೆಗೆ ಈ ಇಬ್ಬರು ನಾಯಕರು ಸೇರಿದಂತೆ ಕೆಐಟಿಯು ಸಂಘದ ನಾಯಕರುಗಳು ಟಿಸಿಎಸ್,ಇನ್ಫೋಸಿಸ್, ವಿಪ್ರೋ ಮೊದಲಾದ ಕಂಪನಿಗಳಲ್ಲಿ ಏಕಪಕ್ಷೀಯವಾಗಿ ಕೆಲಸದಿಂದ ವಜಾಗೊಳಿಸುವ ಕಾರ್ಮಿಕ ವಿರೋಧಿ ಕ್ರಮಗಳನ್ನು ಪ್ರಶ್ನಿಸಿ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕರಪತ್ರ ಹಂಚಿದ ಕಾರಣಕ್ಕೆ ಬಂಧನ ಸರಿಯಲ್ಲ ಎಂಬ ಆಕ್ರೋಶವನ್ನು ಕಾರ್ಮಿಕ ಮುಖಂಡರು ವ್ಯಕ್ತಪಡಿಸಿದ್ದು, ಕೂಡಲೇ ಇಬ್ಬರನ್ನೂ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.





