ಉಡಾನ್ (UDAN) ಯೋಜನೆಯಡಿ ಹಾಸನದಲ್ಲಿ ನಿರ್ಮಾಣವಾಗುತ್ತಿರುವ ‘ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ’ದ ಕಾಮಗಾರಿಯು ಅನುದಾನದ ಕೊರತೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ಅಡೆತಡೆಗಳಿಂದ ತೆವಳುತ್ತಿದೆ. ಟರ್ಮಿನಲ್ ಕಟ್ಟಡ, ಏರ್ ಟ್ರಾಫಿಕ್ ಕಂಟ್ರೋಲ್ ಟವರ್ (ATC), ರನ್-ವೇ ಹಾಗೂ ಏಪ್ರನ್ ಸೇರಿದಂತೆ 80%ಕ್ಕಿಂತ ಹೆಚ್ಚು ಕೆಲಸಗಳು ಪೂರ್ಣಗೊಂಡಿವೆ. ಆದರೂ, ಸದ್ಯದಲ್ಲೇ ಕಾಮಗಾರಿ ಪರಿಪೂರ್ಣವಾಗಿ ಪೂರ್ಣಗೊಳ್ಳುವ ಸೂಚನೆ ಇದ್ದಂತಿಲ್ಲ.
ವಿಮಾನ ನಿಲ್ದಾಣವು ಹಾಸನ ನಗರದಿಂದ 6 ಕಿಮೀ ದೂರದಲ್ಲಿರುವ ಭುವನಹಳ್ಳಿ ಬಳಿ 516 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು 2006ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗಿನ ಸರ್ಕಾರವು 244.33 ಎಕರೆ ಖರಾಬು ಜಮೀನು ಸೇರಿದಂತೆ ಒಟ್ಟು 1,224.16 ಎಕರೆ ಪ್ರದೇಶವನ್ನು ಈ ಉದ್ದೇಶಕ್ಕಾಗಿ ಮೀಸಲಿಟ್ಟಿತ್ತು. ಮೂಲ ಯೋಜನೆಯಲ್ಲಿ ವಾಯುಯಾನ ತರಬೇತಿ ಕೇಂದ್ರ, ಎಂಆರ್ಒ (MRO) ಸೌಲಭ್ಯ, ಇನ್ಲ್ಯಾಂಡ್ ಕಂಟೈನರ್ ಕೇಂದ್ರ, ಗಾಲ್ಫ್ ಕೋರ್ಸ್, ಹೋಟೆಲ್ ಮತ್ತು ಕಲ್ಯಾಣ ಸೌಲಭ್ಯಗಳು, ಟೆಕ್ ಪಾರ್ಕ್, ಕಾರ್ಗೋ ಟರ್ಮಿನಲ್ ಹಾಗೂ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ರಫ್ತುಗಾಗಿ ಬೃಹತ್ ಕೋಲ್ಡ್ ಸ್ಟೋರೇಜ್ಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ರಾಜ್ಯ ಸರ್ಕಾರವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲ ಯೋಜನೆಯನ್ನು ಕೈಬಿಟ್ಟು, ಕೇವಲ ಮೂಲಭೂತ ಸೌಲಭ್ಯಗಳಿರುವ ‘ನೋ-ಫ್ರಿಲ್’ (no-frill) ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಿತು.
ಆ ಬಳಿಕ, ಈ ಯೋಜನೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ‘ಉಡಾನ್’ ಯೋಜನೆಯಡಿ ತನ್ನ ವ್ಯಾಪ್ತಿಗೆ ತೆಗೆದುಕೊಂಡಿತು. ಆದರೆ, ವಿಮಾನ ನಿಲ್ದಾಣದ ಸಮೀಪವೇ ಹಾದುಹೋಗುವ ಹೈ-ಟೆನ್ಷನ್ ವಿದ್ಯುತ್ ತಂತಿಗಳಿಂದಾಗಿಯೂ ಯೋಜನೆ ವಿಳಂಬವಾಯಿತು. ಪಕ್ಕದ ಜಮೀನಿನ ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ನಿರ್ಮಿಸಲು ಮುಂಗಡವಾಗಿ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಅಂತಿಮವಾಗಿ ಅಧಿಕಾರಿಗಳು ರೈತರನ್ನು ವಿಶ್ವಾಸಕ್ಕೆ ಪಡೆದು ವಿದ್ಯುತ್ ಕಂಬಗಳನ್ನು ನಿರ್ಮಿಸಿ, ಹೈ-ಟೆನ್ಷನ್ ತಂತಿಗಳನ್ನು ಸ್ಥಳಾಂತರಿಸಿದ್ದಾರೆ.
ಆದಾಗ್ಯೂ, ಯೋಜನೆಗೆ ಸರಿಯಾದ ಸಮಯಕ್ಕೆ ಅನುದಾನ ಬಿಡುಗಡೆಯಾಗದೇ ಇರುವ ಕಾರಣ, ಕಾಮಕಾರಿ ಕುಂಟುತ್ತಿದೆ. ಜೊತೆಗೆ, ವಿಮಾನ ನಿಲ್ದಾಣ, ಸುತ್ತಲಿನ ಗ್ರಾಮಗಳು ಹಾಗೂ ಮತ್ತು ಹಾಸನ ನಗರದ ನಡುವೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ಅಗತ್ಯವಿರುವ ಹೊಸ ಭೂಸ್ವಾಧೀನಕ್ಕಾಗಿ 143.67 ಕೋಟಿ ರೂ.ಗಳು ಅಗತ್ಯವಿರುವುದಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಹೇಳಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಇನ್ನೂ 200 ಕೋಟಿ ರೂ.ಗಳ ಅವಶ್ಯಕತೆಯಿದೆ ಎಂದು ವರದಿಯಾಗಿದೆ.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸದಸ್ಯರ ಪ್ರಕಾರ, ಈ ಯೋಜನೆ ಪೂರ್ಣಗೊಂಡರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ರಾಜಕೀಯ ಇಚ್ಛಾಶಕ್ತಿಯಿದ್ದರೆ ಈ ವಿಮಾನ ನಿಲ್ದಾಣವು ದಶಕಗಳ ಹಿಂದೆಯೇ ಪೂರ್ಣಗೊಳ್ಳಬಹುದಿತ್ತು ಎಂದಿದ್ದಾರೆ.




