ಮೈಸೂರು ನಗರದ ದೇವರಾಜ ಮಾರ್ಕೆಟ್ ನಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ, ಕೆ.ಎಂ.ಪಿ.ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ‘ ಪ್ಲಾಸ್ಟಿಕ್ ಬ್ಯಾಗ್ ಬಿಡಿ, ಬಟ್ಟೆ ಬ್ಯಾಗ್ ಹಿಡಿ ‘ ಎಂಬ ಜಾಗೃತಿ ಅಭಿಯಾನದ ಮೂಲಕ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಉಚಿತ ಬಟ್ಟೆ ಬ್ಯಾಗ್ ವಿತರಿಸಿ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಲಾಯಿತು.
ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿಸಲು ಮನೆಗೊಂದು ಮರ ಬೆಳೆಸುವ ಮೂಲಕ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ, ಬೆಳೆಸಬೇಕು. ಪ್ಲಾಸ್ಟಿಕ್ ಮುಕ್ತ ಭಾರತ ಪ್ರತಿಯೊಬ್ಬರ ಕರ್ತವ್ಯವಾಗಲಿ, ಅಂಗಡಿ, ಮಾರುಕಟ್ಟೆಗೆ ತೆರಳುವಾಗ ಪ್ಲಾಸ್ಟಿಕ್ ಕವರ್ ಬದಲಾಗಿ ಪರಿಸರಸ್ನೇಹಿ ವಸ್ತುಗಳಿಂದ, ಬಟ್ಟೆಗಳಿಂದ ಮಾಡಿದ ಚೀಲಗಳನ್ನು ಬಳಸಬೇಕು, ಕಸದ ನಿರ್ವಹಣೆ ಮನೆಯಿಂದಲೇ ಆರಂಭವಾಗಬೇಕು, ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸುವ ಮೂಲಕ ಮಾಲಿನ್ಯವನ್ನು ತಡೆಯಬೇಕು. ನಾವು ನೆಟ್ಟ ಗಿಡವನ್ನು ಪೋಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎನ್ನುವುದು ಮರೆಯಬಾರದು. ಹತ್ತಿರದ ಸ್ಥಳಗಳಲ್ಲಿ ವಾಹನ ಬಿಟ್ಟು ನಡೆದುಕೊಂಡು ಹೋಗುವುದು ಹಾಗೂ ಬೈಸಿಕಲ್ ಬಳಕೆ ಮಾಡಬೇಕು ಎಂದು ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಸಲಹೆ ನೀಡಿದರು.
ಮಾಜಿ ನಗರಪಾಲಿಕ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ವಿದ್ಯಾವಂತರೇ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಪರಿಸರದ ಮಹತ್ವ ತಿಳಿದಿದ್ದರೂ ಅನಕ್ಷರಸ್ಥರ ರೀತಿಯಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಕಾಪಾಡಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಗಿಡ ಬೆಳೆಸಿ, ನಾಡು ಬೆಳೆಸಿ ఎంబ ಘೋಷಣೆ ವಾಸ್ತವದಲ್ಲಿ ಜಾರಿಯಾಗಬೇಕು. ನಾವು ಇರುವ ಜಾಗದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸುತ್ತಮುತ್ತ ಇರುವ ಜಾಗದಲ್ಲಿ ಹಸಿರು ಇರುವ ರೀತಿಯಲ್ಲಿ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.
ಈ ವಿಶೇಷ ವರದಿ ಓದಿದ್ದೀರಾ?ಮೈಸೂರು | ಶವಾಗಾರದಲ್ಲಿ ಕೆಲಸ ಮಾಡುವ ಏಕಮೇವ ಮಹಿಳೆ ರಾಜಮ್ಮ

ಅಭಿಯಾನದಲ್ಲಿ ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಸಂಚಾಲಕ ರವಿಶಂಕರ್, ಎಸ್ ಎನ್ ರಾಜೇಶ್, ಚರಣ್, ಪರಿಸರ ಅಭಿಯಂತೆ ಮೈತ್ರಿ, ಹೆಲ್ತ್ ಇನ್ಸ್ಪೆಕ್ಟರ್ ಮಂಜು ಕುಮಾರ್ ಎಸ್, ಸೂಪರ್ ವೈಸರ್ ಗಳು , ದೇವರಾಜ ಮಾರ್ಕೆಟ್ ನ ಬೀದಿ ಬದಿ ವ್ಯಾಪಾರಿಗಳು ಇದ್ದರು.





