ರಾಜ್ಯ ಸರ್ಕಾರ ಘೋಷಿಸಿದ ಒಳಮೀಸಲಾತಿ ಇನ್ನೂ ಸರಿಯಾಗಿ ಜಾರಿಯಾಗಿಲ್ಲ. ಆ ಕಾರಣಕ್ಕಾಗಿ ಆದರೂ ಅಲೆಮಾರಿಗಳಿಗಾಗಿ ಮಾತ್ರ ಇದ್ದ 1% ಒಳಮೀಸಲನ್ನು ಸಿ ಗುಂಪಿನೊಂದಿಗೆ ವಿಲೀನಗೊಳಿಸಿದ್ದನ್ನು ವಿರೋಧಿಸಿ, 49 ಹಾಗೂ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ 10 ಅಂದರೆ ಒಟ್ಟು 59 ಅಲೆಮಾರಿ ಸಮುದಾಯಗಳಿಗೆ ಆ 1% ಮೀಸಲಾತಿಯನ್ನು ಕೂಡಲೇ ಪರಿಷ್ಕೃತಗೊಳಿಸಿ ಪ್ರತ್ಯೇಕಗೊಳಿಸಲು ಮುಂದಾಗಬೇಕಾಗಿದೆ. ಆದ್ದರಿಂದ ತಾಲೂಕು ಮಟ್ಟದ ಬೃಹತ್ ಹೋರಾಟವನ್ನು ಲಿಂಗಸೂಗೂರು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಲೆಮಾರಿ ಜಾಗೃತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಹಟ್ಟಿ ತಿಳಿಸಿದರು.
ರಾಯಚೂರು ಜಿಲ್ಲೆಯ ಲಿಂಗಸೂಗೂರು ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, “ಜನಾಂದೋಲನಕ್ಕೆ ಯಾವುದೇ ಸರ್ಕಾರವಾದರೂ ತಲೆ ಬಾಗಲೇಬೇಕು. ಚಳವಳಿಯೇ ಅಂತಿಮ ದಾರಿಯಾಗಿರುವುದರಿಂದ ಅಲೆಮಾರಿ ನಿಯೋಗ ಈಗಾಗಲೇ ದೆಹಲಿ ಮಟ್ಟದಲ್ಲಿ ದೌಢಾಯಿಸಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಗಮನಕ್ಕೆ ತಂದರೂ ಕೂಡ ಈವರೆಗೆ ಸ್ಪಷ್ಟ ನಿರ್ಧಾರಕ್ಕೆ ಬಂದು ಒಳಮೀಸಲಾತಿ ಘೋಷಿಸದೇ ಮೀನಾಮೇಷ ಎಣಿಸುತ್ತಿರುವ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನ್ಯಾಯ ಸಿಗುವವರೆಗೂ ಚಳವಳಿ ಮುಂದುವರೆಸುತ್ತೇವೆ. 49 ನೈಜ ಅಲೆಮಾರಿ ಜನಾಂಗಗಳಿಗಾಗಿ ಮಾತ್ರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಹಾಗೂ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ ʼಸಿʼ ಗುಂಪಿನಿಂದ 1% ಹಾಗೂ ಹೆಚ್ಚುವರಿಯಾಗಿ 1% ಸೇರಿಸಿ ಒಟ್ಟು 2% ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ನಮಗೆ ನೈತಿಕವಾಗಿ ಒದಗಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಿಲ್ ಪಾವತಿಯಲ್ಲಿ ವಿಳಂಬ ; ಎನ್ಡಿ ವಡ್ಡರ್ ಕಂಪನಿ ವಿರುದ್ದ ಗುತ್ತಿಗೆದಾರರ ಅನಿರ್ದಿಷ್ಟಾವಧಿ ಧರಣಿ
“ಅಲೆಮಾರಿಗಳ ನ್ಯಾಯಬದ್ಧ ಹೋರಾಟಕ್ಕೆ ಜಯವಾಗಲಿ. ಜನರನ್ನು ಜಾಗೃತಗೊಳಿಸುವುದು ಚಳವಳಿಯಿಂದ ಮಾತ್ರ ಸಾಧ್ಯ. ಈಗ ಚಳವಳಿಯೇ ನಮಗಿರುವ ಒಂದೇ ಒಂದು ಕೊನೆಯ ದಾರಿ. ಹಾಗಾಗಿ ಹೋರಾಟದ ಕಾವು ಆರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸಮುದಾಯದ ಮೇಲಿದೆ. ಈ ಹೋರಾಟಕ್ಕೆ ತಾಲೂಕಿನ ಎಲ್ಲ ಹೋರಾಟಗಾರರು, ಚಳವಳಿಕಾರರು ಭಾಗವಹಿಸಿ ಬೆಂಬಲಿಸಬೇಕು” ಎಂದು ಕೋರಿದರು.





