ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಯಾವುದೇ ಕೆಲಸಗಳನ್ನು ನಿರ್ವಹಿಸದೆ ಸುಮಾರು ₹1.34 ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಜಿಲ್ಲಾ ಪಂಚಾಯಿತಿಯ ತನಿಖೆಯಲ್ಲಿ ಅಧಿಕೃತವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಹಗರಣಕ್ಕೆ ಕಾರಣರಾದ ಅಂದಿನ ಪಿಡಿಒ ಹಾಗೂ ವಿವಿಧ ಅವಧಿಯ ಐವರು ಅಧ್ಯಕ್ಷರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವಂತೆ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ ಆರ್ ನಂದಿನಿ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.
ಮದ್ದೂರು ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ವಿನೋದ್ ಬಾಬು ಟಿ ಎಲ್ ನೀಡಿದ ದೂರಿನನ್ವಯ 2025ರ ಫೆ.17ರಂದು ಈ ತನಿಖೆ ನಡೆಸಲಾಗಿತ್ತು. ಮದ್ದೂರು ತಾಲೂಕಿನ ಎಲ್ಲಾ ಪಂಚಾಯಿತಿಗಳ 15ನೇ ಹಣಕಾಸು ಯೋಜನೆಯ ಸಮಗ್ರ ತನಿಖೆಗೆ ಆಗ್ರಹಿಸಿ ಜಿಲ್ಲಾ ಪಂಚಾಯತ್ ಕದ ತಟ್ಟಿದ ನಂತರವಷ್ಟೇ ಈ ಹಗರಣ ಬಯಲಾಗಿದೆ. 2020-21 ರಿಂದ 2023-24ನೇ ಸಾಲಿನವರೆಗೆ 15ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸದೆ ಮತ್ತು ನಿಯಮಗಳನ್ನು ಪಾಲಿಸದೆ ಹಣ ಪಾವತಿಸಲಾಗಿದೆ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿವೆ.
ಮಂಡ್ಯದ ಸ್ಥಳೀಯ ಲೆಕ್ಕಪರಿಶೋಧನಾ ಅಧಿಕಾರಿ ಕೆಸ್ತೂರು ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಪರಿಶೋಧನೆ ಮಾಡಿ ಸಲ್ಲಿಸಿರುವ ವರದಿಯನ್ವಯ 2020-21ನೇ ಸಾಲಿನಲ್ಲಿ ₹51,703ಗಳನ್ನು ವಸೂಲಾತಿಗೆ ಮತ್ತು ₹13,07,326 ಗಳ ಆಕ್ಷೇಪಣೆಗೆ ಸೂಚಿಸಿರುತ್ತಾರೆ. 2021-22ನೇ ಸಾಲಿನಲ್ಲಿ ₹4,71,554 ಗಳನ್ನು ವಸೂಲಾತಿಗೆ ಮತ್ತು ₹6,03,205 ಗಳನ್ನು ಆಕ್ಷೇಪಣೆಗೆ ಸೂಚಿಸಿರುತ್ತಾರೆ. 2022-23ನೇ ಸಾಲಿನಲ್ಲಿ ₹52.86,141 ಗಳನ್ನು ವಸೂಲಾತಿಗೆ ಮತ್ತು ₹13,51,317 ಗಳನ್ನು ಆಕ್ಷೇಪಣೆಗೆ ಸೂಚಿಸಿರುತ್ತಾರೆ ಹಾಗೂ 2023-24ನೇ ಸಾಲಿನಲ್ಲಿ ₹11,28,468 ಗಳನ್ನು ವಸೂಲಾತಿಗೆ ಮತ್ತು ₹5,01,732 ಗಳನ್ನು ಆಕ್ಷೇಪಣೆಗೆ ಸೂಚಿಸಿರುವುದು ಸದರಿ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಕಂಡುಬಂದಿರುತ್ತದೆ.
ಕುಡಿಯುವ ನೀರಿನ ಸಾಮಗ್ರಿ ಮತ್ತು ವಿದ್ಯುತ್ ಉಪಕರಣಗಳ ಖರೀದಿಯಲ್ಲಿ ಕೆಟಿಪಿಪಿ (KTPP) ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಾಮಗ್ರಿಗಳನ್ನು ಅಳವಡಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಮತ್ತು ಖರೀದಿ ಪ್ರಕ್ರಿಯೆಯ ಮಾರ್ಗಸೂಚಿಗಳನ್ನು ಪಾಲಿಸದೆ ಹಣ ದುರುಪಯೋಗ ಮಾಡಲಾಗಿದೆ ಎನ್ನುವುದು ವರದಿಯಿಂದ ಸಾಬೀತಾಗಿದೆ. ವಿವಿಧ ಸಾಲುಗಳಲ್ಲಿ ಒಟ್ಟು ₹27,36,881, ₹81,86,901 ಮತ್ತು ₹22,03,072 ರಂತೆ ಭಾರೀ ಮೊತ್ತದ ಹಣ ದುರುಪಯೋಗವಾಗಿದ್ದು, ತನಿಖಾಧಿಕಾರಿಗಳು ಈ ಹಣವನ್ನು ವಸೂಲಿ ಮಾಡಲು ಶಿಫಾರಸು ಮಾಡಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ), 48(4) ಮತ್ತು 48(5)ರ ಅನ್ವಯ ಈ ಕೆಳಗಿನವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪ್ರಕಾಶ್ ಸೇರಿದಂತೆ, ವಿವಿಧ ಅವಧಿಯ ಅಧ್ಯಕ್ಷರುಗಳಾದ ಕೆ ಈಶ್ವರ್, ಬಿ ಜಿ ಮಂಜುಳಾ, ಎಂ ಆರ್ ಅನುಷಾ, ಹೇಮಲತಾ ಮತ್ತು ಕೆ ಪ್ರಕಾಶ್ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಇದನ್ನೂ ಓದಿ: ಮದ್ದೂರು | ಲೋಕಾಯುಕ್ತಕ್ಕೆ ನೀಡಿದ ದೂರಿನ ಫಲಶ್ರುತಿ; ಕಳಪೆ ರಸ್ತೆಗೆ ಮರುಜೀವ
ರೈತ ಸಂಘವು ಹಲವು ವರ್ಷಗಳ ಹಿಂದೆಯೇ ಈ ಬಗ್ಗೆ ದೂರು ನೀಡಿದ್ದರೂ, ತನಿಖೆಯ ವಿಳಂಬ ಧೋರಣೆಗೆ ತೀವ್ರ ಬೇಸರ ವ್ಯಕ್ತಪಡಿಸಿದೆ. ಕೇವಲ ಒಂದು ಗಂಟೆಯಲ್ಲಿ ಮುಗಿಸಬಹುದಾದ ಪರಿಶೀಲನೆಯನ್ನು ವರ್ಷಗಟ್ಟಲೆ ಎಳೆದಾಡಿರುವುದು ಇಲಾಖೆಗಳ ಉದಾಸೀನತೆಯನ್ನು ತೋರಿಸುತ್ತದೆ ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ. “ಭ್ರಷ್ಟರ ರಕ್ಷಣೆಗೆ ಇಲಾಖೆಗಳಿಲ್ಲ ಎಂಬ ಕಠಿಣ ಸಂದೇಶ ರವಾನೆಯಾಗಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಎಲ್ ವಿನೋದ್ ಬಾಬು, ತಾಲೂಕು ಅಧ್ಯಕ್ಷ ಉಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಉಪಾಧ್ಯಕ್ಷ ಜಿ ಎನ್ ಶಂಕರ್, ರವಿಕುಮಾರ್, ಸತೀಶ್ ಮತ್ತು ವೆಂಕಟೇಗೌಡ ಅವರು ಉಪಸ್ಥಿತರಿದ್ದರು.





