ಮದ್ದೂರು ನಗರಸಭೆಗೆ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಳೆದ 51 ದಿನಗಳಿಂದ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳ ಮುಂದೆ ನಡೆಯುತ್ತಿದ್ದ ನಿರಂತರ ಧರಣಿಯ ಹಿನ್ನೆಲೆಯಲ್ಲಿ, ಸಚಿವ ಎನ್ ಚಲುವರಾಯಸ್ವಾಮಿಯವರು ಮದ್ದೂರು ಪ್ರವಾಸಿ ಮಂದಿರದಲ್ಲಿ ಹೋರಾಟಗಾರರು ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಅಜೆಂಡಾವಿಲ್ಲ ನಿರ್ಧಾರಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದಾಖಲೆ ಸಮೇತ ಸರ್ಕಾರದ ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ರೈತ ಹೋರಾಟಗಾರ್ತಿ ಸುನಂದಮ್ಮ ಮತ್ತು ಗ್ರಾಮಸ್ಥರು, ನಗರಸಭೆಗೆ ಪಂಚಾಯಿತಿಗಳನ್ನು ಸೇರಿಸುವ ನಿರ್ಧಾರವು ಪ್ರಜಾಸತ್ತಾತ್ಮಕವಾಗಿ ನಡೆದಿಲ್ಲವೆಂದು ಕಿಡಿಕಾರಿದರು.
ಸಚಿವರ ಮುಂದೆ ಪುರಾವೆಗಳನ್ನು ಮಂಡಿಸಿದ ಅವರು, ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು. ಅವುಗಳೆಂದರೆ ʼಗ್ರಾಮ ಪಂಚಾಯಿತಿಗಳಲ್ಲಿ ಅಜೆಂಡಾ ಇಡದೆ, ವಾರ್ಡ್ ಸಭೆ ಅಥವಾ ಗ್ರಾಮ ಸಭೆಗಳ ಮೂಲಕ ಜನರ ಅನಿಸಿಕೆಯನ್ನು ಪಡೆಯದೆ ಏಕಪಕ್ಷೀಯವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಗರಸಭೆ ವ್ಯಾಪ್ತಿಗೆ ಸೇರಿದರೆ ಸುಮಾರು 5,000 ಎಕರೆಗಳಷ್ಟು ಹಸಿರು ವಲಯದ ಕೃಷಿ ಭೂಮಿ ನಾಶವಾಗುವ ಭೀತಿ ಇದೆ. ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರು ತೃಪ್ತಿಕರ ಸೌಲಭ್ಯಗಳನ್ನು ಪಡೆಯುತ್ತಿದ್ದು, ನಗರಸಭೆಗೆ ಸೇರ್ಪಡೆಯಾದಲ್ಲಿ ಸಾಮಾನ್ಯ ಜನರ ಬದುಕು ದುಸ್ತರವಾಗಲಿದೆʼ ಎಂದು ಸಭೆಗೆ ಮಾಹಿತಿ ನೀಡಿದರು.
ಹೋರಾಟಗಾರರ ತರ್ಕಬದ್ಧ ವಾದ ಮತ್ತು ದಾಖಲೆಗಳನ್ನು ಗಮನಿಸಿದ ಸಚಿವ ಚಲುವರಾಯಸ್ವಾಮಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಈ ಮೊದಲು ನಾಲ್ಕು ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದೀಗ ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳು ಈ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತಿವೆ. ಜನರ ಒತ್ತಾಯ ಹಾಗೂ ಪ್ರತಿಭಟನೆಯ ತೀವ್ರತೆಯನ್ನು ಗಮನಿಸಿರುವ ಸರ್ಕಾರವು, ಈ ಬಗ್ಗೆ ಮತ್ತೊಮ್ಮೆ ಕಾನೂನಾತ್ಮಕವಾಗಿ ಪರಾಮರ್ಶೆ ನಡೆಸಲು ನಿರ್ಧರಿಸಿದೆ” ಎಂದು ಸ್ಪಷ್ಟಪಡಿಸಿದರು.
”ಈ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿರುವುದರಿಂದ ಕಾನೂನು ಚೌಕಟ್ಟಿನೊಳಗೆ ಏನು ಮಾಡಲು ಸಾಧ್ಯ ಎಂಬುದರ ಕುರಿತು ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಇಲಾಖಾ ಸಚಿವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರದ ಮುಂದಿನ ನಡೆ ತಿಳಿಯುವವರೆಗೆ ಸಮಾಧಾನದಿಂದ ಕಾಯಬೇಕು. ಅಲ್ಲಿಯವರೆಗೆ ಸಾರ್ವಜನಿಕರು ಶಾಂತಿ ಕಾಪಾಡಬೇಕು ಮತ್ತು ತಮ್ಮ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಹಿಂಪಡೆಯಬೇಕು” ಎಂದು ಗ್ರಾಮಸ್ಥರಲ್ಲಿ ಕೋರಿದರು.
ಈ ಸುದ್ದಿ ಓದಿದ್ದೀರಾ? ಕರಾವಳಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತೆ ಜನಪ್ರತಿನಿಧಿಗಳ ಆಗ್ರಹ
ಸಚಿವರ ಭರವಸೆಯ ಮೇರೆಗೆ ಧರಣಿನಿರತರು ತಮ್ಮ ತೀವ್ರ ಸ್ವರೂಪದ ಚಳವಳಿಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಲು ನಿರ್ಧರಿಸಿದ್ದಾರಾದರೂ, ಸರ್ಕಾರ ಅಧಿಕೃತವಾಗಿ ಆದೇಶ ಹಿಂಪಡೆಯುವವರೆಗೂ ನಿರಂತರ ಧರಣಿ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಶಾಸಕ ಉದಯ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ರೈತ ಸಂಘದ ಶಂಕರಣ್ಣ, ಲಿಂಗಪ್ಪಾಜಿ, ಜಿಎಚ್ ವೀರಪ್ಪ, ಬಿಟಿ ಚಂದ್ರಶೇಖರ್, ಜಿಸಿ ಚಂದ್ರಶೇಖರ್, ಆತ್ಮನಂದ, ಪ್ರಸನ್ನ ಗೊರವನಹಳ್ಳಿ ಹಾಗೂ ಹಲವು ಹೋರಾಟಗಾರರು, ಗ್ರಾಮಸ್ಥರುಗಳು ಇದ್ದರು.





