ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗುರುವಾರ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಬಟಗೆರೆ ಗ್ರಾಮದ ಮಜರೆ ಗ್ರಾಮವಾದ ಚನ್ನಗಿರಿಪಾಳ್ಯ ಗ್ರಾಮದ ಸ್ಮಶಾನ ಭೂಮಿಯ ಬೇಡಿಕೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಚನ್ನಗಿರಿಪಾಳ್ಯದ ಗ್ರಾಮಸ್ಥರು ಬಟಗೆರೆ ಗ್ರಾಮದ ಸರ್ವೆ ನಂಬರ್ 71ರಲ್ಲಿ ಸುಮಾರು 2 ಎಕರೆ ಜಮೀನನ್ನು ಹಲವು ವರ್ಷಗಳ ಹಿಂದೆ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಕಾಯ್ದಿರಿಸಲಾಗಿತ್ತು. ಆದರೆ ವರ್ಷಗಳು ಕಳೆದರೂ ಈ ಜಮೀನಿನಲ್ಲಿ ಯಾವುದೇ ಮನೆಗಳು ನಿರ್ಮಾಣವಾಗಿಲ್ಲ, ಇದರ ನಡುವೆ ಚನ್ನಗಿರಿಪಾಳ್ಯವನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಉದೇಶವನ್ನು ಹೊಂದಿದ್ದು, ಗ್ರಾಮಸ್ಥರಿಗೆ ಅಂತ್ಯಸAಸ್ಕಾರ ಮಾಡಲು ಸ್ಮಶಾನದ ಜಾಗವಿಲ್ಲದೆ ತೊಂದರೆಯಾಗುತ್ತಿದೆ. ಹಾಗಾಗಿ ಆಶ್ರಯ ಯೋಜನೆಗೆ ಬಳಕೆಯಾಗದ ಜಮೀನನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿಕೊಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಇಟ್ಟರು.
ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಚನ್ನಗಿರಿಪಾಳ್ಯವನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಪ್ರಸ್ತಾವನೆ ಈಗಾಗಲೇ ಪ್ರಕ್ರಿಯೆಯಲ್ಲಿದೆ. ಹೊಸ ಕಂದಾಯ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಜೊತೆಗೆ ಸ್ಮಶಾನದ ಅಗತ್ಯತೆ ಬಹಳಷ್ಟಿದೆ. ಗ್ರಾಮಸ್ಥರ ಈ ಬೇಡಿಕೆಯ ಬಗ್ಗೆ ಪರಿಶೀಲಿಸಿ, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಂತರ ಬಟಗೆರೆ ಗ್ರಾಮದಲ್ಲಿ ಈಗಾಗಲೇ ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸ್ಮಶಾನದ ಆವರಣವು ಸರಿಯಾದ ನಿರ್ವಹಣೆ ಇಲ್ಲದೆ ಇರುವುದನ್ನು ಗಮನಿಸಿ, ತಕ್ಷಣವೇ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಮಶಾನದ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು, ಅಂತ್ಯಸಂಸ್ಕಾರಕ್ಕೆ ಬರುವವರಿಗೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ ಕಲ್ಪಿಸುವುದು, ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡುವುದು ಹಾಗೂ ಸ್ಮಶಾನದ ಗುರುತಿಗಾಗಿ ಅಧಿಕೃತ ನಾಮಫಲಕ ಅಳವಡಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಅವರಿಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ಸಂದರ್ಭ ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಪ್ರಭಾರ ತಹಶೀಲ್ದಾರ್ ರವಿ ವೈ., ಎಡಿಎಲ್ಆರ್ ಮಂಜುನಾಥ್, ಸ್ಥಳೀಯ ಮಟ್ಟದ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.





