ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ‘ಪ್ರಪಂಚಕ್ಕೆ ಧರ್ಮದ ಮೌಲ್ಯ, ಬದುಕಿನ ನೈತಿಕತೆ ತಿಳಿಸಿದವರು ಮಹರ್ಷಿ ವಾಲ್ಮೀಕಿ’ ಎಂದರು.
“ವಿಧಾನ ಸೌಧದಲ್ಲಿ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಇಡೀ ಪ್ರಪಂಚವನ್ನು ಒಳಗೊಂಡ ದೊಡ್ಡ ರಾಮಾಯಣವನ್ನು ರಚಿಸಿದವರು ವಾಲ್ಮೀಕಿ ಮಹರ್ಷಿಗಳು. ಜ್ಞಾನ ಶಕ್ತಿಯ ಮೂಲಕ ಮೇಧಾವಿಯಾದವರು. ರಾಮನನ್ನು ರಾಮಾಯಣದ ಮೂಲಕ ಸೃಷ್ಟಿ ಮಾಡಿದವರು ಹಾಗೂ ನೈತಿಕ ವಿಷಯವನ್ನು ರಾಮಾಯಣದಲ್ಲಿ ಧರ್ಮ ಪಾಲನೆ ಮಾಡಿದವರು. ಸಾಮಾಜಿಕ, ಆರ್ಥಿಕ, ಸಮಾನತೆಯ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬಿತ್ತಿದವರು” ಎಂದು ತಿಳಿಸಿದರು.
“ಮೂಡ ನಂಬಿಕೆಗಳಿಗೆ ಒಳಗಾಗದೆ , ಜಾತಿ ಜಾತಿ ಎಂದು ಹೊಡೆದಾಡದೇ ಎಲ್ಲರೂ ಸಮಾನವಾಗಿ ಬದುಕಬೇಕು. ಜಾತಿ ರಹಿತವಾದಂತಹ ಸಮಾಜವನ್ನು ಕಟ್ಟಬೇಕು ಎಂದವರು. ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ ಅವರು ಸಹ ನಮಗೆ ಅದನ್ನೇ ಹೇಳಿದ್ದಾರೆ. ಅದನ್ನು ನಾವು ನಮ್ಮ ಜೀವನದಲ್ಲಿ ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಬದುಕಬೇಕು. ಅವರು ಹೇಳಿರುವಂತಹ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು, ಮೂಢನಂಬಿಕೆಯಿಂದ ಹೊರಬರಬೇಕು” ಎಂದು ಹೇಳಿದರು.

ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಮಾತನಾಡಿ, “ಕೆಲವೇ ಜಾತಿ, ಧರ್ಮದ ಆದಾರಲ್ಲಿ ಮನುಷ್ಯ ಬದುಕಲು ಸಾಧ್ಯವಿಲ್ಲ. ಶಿಕ್ಷಣ ನಮ್ಮ ಮೂಲ ಮುದ್ರೆಯಾಗಬೇಕು ಶಿಕ್ಷಣ ಪಡೆದು ಸಮಾಜವನ್ನು ಮುನ್ನಡೆಸಬೇಕು. ಇತಿಹಾಸವನ್ನು ತಿಳಿದು ಬದುಕಿದಾಗ ಸಮುದಾಯವು ಮುಂದೆ ಬರುತ್ತದೆ. ಇದರ ಜೊತೆ ಸರ್ಕಾರದ ಯೋಜನೆಗಳನ್ನು ಸಮುದಾಯ ಜನರು ಪಡೆದುಕೊಳ್ಳಬೇಕು. ಸಮಾಜದಲ್ಲಿ ಸಮಾನತೆಗಾಗಿ ನಮ್ಮ ಸರಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ತಮ್ಮ ಏಳಿಗೆಗಾಗಿ ಯಾವ ಯೋಜನೆಯಿದೆ ಎಂಬುದನ್ನು ಅರಿತು, ಪಡೆದುಕೊಂಡರೆ ಮಾತ್ರ ಸಮುದಾಯಗಳ ಅಭಿವೃದ್ಧಿಯಾಗುತ್ತದೆ” ಎಂದು ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಮಾತನಾಡಿ, “ತಮ್ಮ ಜ್ಞಾನದ ಮೂಲಕ ಸುಜ್ಞಾನದ ಬೆಳಕನ್ನು ನೀಡಿದ ಮಹಾನ್ ಜ್ಞಾನಿ ಮಹರ್ಷಿ ವಾಲ್ಮೀಕಿ. ರಾಮಾಯಣ ಎಂಬ ಮಹಾ ಕಾವ್ಯವನ್ನು ಬರೆಯುವುದರ ಮೂಲಕ ಅಮರರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ಜಗದ ರತ್ನ. ಅವರು ತಮ್ಮ ಜ್ಞಾನದ ಮೂಲಕ ಲವ-ಕುಶ ರ ಜೀವನವನ್ನು ಹೇಗೆ ಪಾರಂಗತ ಮಾಡಿದ್ದಾರೆ ಹಾಗೆಯೇ, ನಮ್ಮ ಮಕ್ಕಳಿಗೂ ಶಿಕ್ಷಣವನ್ನು ನಾವು ನೀಡಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಒಬ್ಬ ಉತ್ತಮ ನಾಯಕನಾಗಿ ಮಾಡಬೇಕು” ಎಂದು ಹೇಳಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, “ಸದಾಚಾರದಿಂದ ಬದುಕುವಂತಹ ಮನುಕುಲಕ್ಕೆ ರಾಮಾಯಣ ಎಂಬ ಮಹಾಗ್ರಂಥವನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ. ಅವರ ಆದರ್ಶಗಳು ನಮಗೆ ಸ್ಪೂರ್ತಿ, ಅವರು ನಡೆದು ಬಂದ ಹಾದಿಯಲ್ಲಿ ನಾವು ಜೀವನವನ್ನು ನಡೆಸೋಣ” ಎಂದು ಹೇಳಿದರು.

ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹಿರಿಯ ಕಾನೂನು ಸಹಾಯಕ ಪ್ರಾಧ್ಯಾಪಕರಾದ ಡಾ.ಡಿ. ರಂಗಸ್ವಾಮಿ ಮಾತನಾಡಿ, “ಸಮಾಜದಲ್ಲಿ ಶ್ರೀಮಂತವಾದ ಹಿನ್ನೆಲೆಯನ್ನು ಹೊಂದಿರುವಂತಹ ಪರಂಪರೆ ಎಂದರೆ ಮಹರ್ಷಿ ವಾಲ್ಮೀಕಿ ಅವರ ಪರಂಪರೆ. ದುಷ್ಟ ಶಕ್ತಿಯನ್ನು ದೈವ ಶಕ್ತಿಯ ಮುಂದೆ ಸೋಲುವಂತಹ ಕೆಲಸ ಮಾಡಿದವರು ಮಹರ್ಷಿ ವಾಲ್ಮೀಕಿ. ಜಯಂತಿಯ ಮೂಲ ಉದ್ದೇಶ ಮಹಾನ್ ವ್ಯಕ್ತಿಗಳ ಜೀವನದ ಬಗ್ಗೆ ತಿಳಿದುಕೊಳ್ಳುವುದಾಗಿದ್ದು, ಜಯಂತಿ ಆಚರಣೆಯ ಉದ್ದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರು ನಡೆದುಬಂದ ಹಾದಿಯನ್ನು ನಾವು ಪಾಲಿಸಬೇಕು. ಅವರ ಸಾಧನೆಗಳನ್ನು ನಮ್ಮ ಬದುಕಿಗೆ ಆದರ್ಶವಾಗಬೇಕು” ಎಂದು ಹೇಳಿದರು
ಈ ವಿಶೇಷ ಸುದ್ದಿ ಓದಿದ್ದೀರಾ? ಅಂಗನವಾಡಿಗಾಗಿ ಜಾಗ ಗುರುತು: ಅನಧಿಕೃತವಾಗಿ ದೇವಾಲಯ ನಿರ್ಮಿಸಿ ಶಿಕ್ಷಣ ವಂಚಿತರನ್ನಾಗಿಸುವ ಹುನ್ನಾರ
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಶಾಸಕರಾದ ಡಾ ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್.ಎನ್ಮೈಸೂರು | ಪ್ರಪಂಚಕ್ಕೆ ಧರ್ಮದ ಮೌಲ್ಯ, ಬದುಕಿನ ನೈತಿಕತೆ ತಿಳಿಸಿದವರು ಮಹರ್ಷಿ ವಾಲ್ಮೀಕಿ : ಸಚಿವ ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಎಂ.ಕೆ. ಮಲ್ಲೇಶ್, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿ. ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರುಗಳು ಇದ್ದರು.





