ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಕಳೆದ 36 ದಿನಗಳಿಂದ ನಡೆಸುತ್ತಿರುವ ಅಹೊರಾತ್ರಿ ಧರಣಿಯಲ್ಲಿ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, ಗಾಂಧೀಜಿಯವರ ಗ್ರಾಮೀಣ ಅಭಿವೃದ್ಧಿ ಕನಸನ್ನು ನನಸಾಗಿಸುವಂತೆ ಒತ್ತಾಯಿಸಿದರು.
ಮಂಗಳವಾರ ತಾಲ್ಲೂಕು ಕಚೇರಿ ಅವರಣದಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಸುಮಾರು 50 ರಿಂದ 60 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಪಡೆಯಲು ಅರಣ್ಯ ಇಲಾಖೆಯಿಂದ ಎನ್ಓಸಿ ನೀಡುವುದು. ಸಾಗುವಳಿ ನೀಡುವ ರೈತರಿಗೆ ಪಹಣಿ ನೀಡಿ, ಹದ್ದು ಬಸ್ತು ದುರಸ್ತಿ ಮಾಡುವುದರ ಜೊತೆಗೆ ರೈತರ ಕೃಷಿ ಭೂಮಿ ಉಳಿಸಿ, ಬರಡು ಪ್ರದೇಶವನ್ನು ಸಮಗ್ರ ಅಭಿವೃದ್ಧಿಪಡಿಸಲು ಗಾಂಧೀಜಿಯವರ ಗ್ರಾಮೀಣ ಅಭಿವೃದ್ಧಿಯ ಕನಸು ನನಸಾಗಿಸುವಂತೆ ಬಹಿರಂಗ ಪ್ರತಿಭಟನಾ ಸಮಾವೇಶದಲ್ಲಿ ಒತ್ತಾಯ ಮಾಡಿದರು.
ಬೆಂಗಳೂರಿನಲ್ಲಿ ಭೂಸ್ವಾದೀನ ವಿರೋಧಿಸುವುದು ಸೇರಿ ಸಂಯುಕ್ತ ಹೋರಾಟ ಕರ್ನಾಟಕ ಆಶ್ರಯದಲ್ಲಿ ನಡೆದ ಹೋರಾಟಗಳಿಗೂ ಯಶ ಸಿಕ್ಕಿದೆ. ಇದು ರೈತ ಸಂಘ ಮತ್ತು ಹೋರಾಟಕ್ಕೆ ಇರುವ ಬೆಲೆ ಎಂದರು. ಹರವೆ ಹೋಬಳಿ ಮತ್ತು ಗುಂಡ್ಲುಪೇಟೆ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಅಂತರ್ಜಲ ಆಶ್ರಯಿಸಿ ಕೃಷಿ ಮಾಡಲಾಗುತ್ತಿದೆ. ಹೀಗಾಗಿ, ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ವೃದ್ದಿ, ಜನ, ಜಾನುವಾರುಗಳಿಗೆ ನೀರು, ಕೃಷಿ ಚಟುವಟಿಕೆ ಹೆಚ್ಚಳ, ಜನರಿಗೆ ಕೆಲಸ ಸಿಕ್ಕಿ ಅಭಿವೃದ್ಧಿಯಾಗುತ್ತದೆ ಎಂದರು.
ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳವಾಗಿದ್ದು, ನಮ್ಮೂರಿನ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಸರಗೂರು ತಾಲೂಕಿನಲ್ಲಿ ಮೂವರನ್ನ ಹುಲಿ ಬಲಿ ಪಡೆದುಕೊಂಡಿವೆೆ. ಭೂ ಸುಧಾರಣೆ ಕಾಯ್ದೆಗೆ ತಂದ ತಿದ್ದುಪಡಿಯಿಂದ ಹಣವಂತರು ರೈತರ ಭೂಮಿ ಕಿತ್ತುಕೊಳ್ಳುತ್ತಿದ್ದಾರೆ. ಆದರೆ, ಬಡ ರೈತರಿಗೆ ಸಾಗುವಳಿ ನೀಡುತ್ತಿಲ್ಲ. ನಮ್ಮ ರೈತರು ಐದು ನ್ಯಾಯಯುತ ಬೇಡಿಕೆಗಳನ್ನು ಇಟ್ಟು ಧರಣಿ ನಡೆಸುತ್ತಿದ್ದಾರೆ ಈಗಾಗಲೇ ಚಳುವಳಿ ಸ್ವರೂಪ ಜಿಲ್ಲೆ, ರಾಜ್ಯ ಮಟ್ಟದ ಚಳುವಳಿಯಾಗಿ ಬದಲಾಗಲಿದೆ.
ಈ ದಿನ ಟ್ರ್ಯಾಕ್ಟರ್ ರ್ಯಾಲಿ ಮತ್ತು ಪ್ರತಿಭಟನಾ ಮೆರವಣಿಗೆಯಿಂದ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಆದ್ದರಿಂದ, ಹೊಸ ಮೋಟಾರು ಖರೀದಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಭರವಸೆಯಲ್ಲದೇ ತಕ್ಷಣ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಆಗಬೇಕು. ಇಲ್ಲವಾದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನ.26 ರಂದು ನಡೆಯುವ ಬೆಂಗಳೂರು ಚಲೋದಲ್ಲಿ ಹೆಚ್ಚಿನ ರೈತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವ ಎಂತಹ ಪ್ರಭಾವಿಯಾದರು ಸರಿ ತೆರವು ಮಾಡಿ ಸ್ಮಶಾನಕ್ಕೆ ಜಾಗ ನೀಡಬೇಕು. 60-70 ವರ್ಷ ಉಳುಮೆ ಮಾಡುವ ರೈತರಿಗೆ ಒನ್ ಟು ಪೈವ್ ಕೊಡಲ್ಲ ಆದರೆ ಜಿಪಿಎಯನು ಉದ್ಯಮಿಗಳಿಗೆ ಹಣ ಕೊಟ್ಟರೆ ಮಾಡಿಕೊಡುತ್ತಾರೆ ಎಂದು ಆರೋಪಿಸಿದರು. ತಾಲ್ಲೂಕಿನಲ್ಲಿ ಎಷ್ಟು ಮಳೆಯಾಗಿದೆ ಎಂದರೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲಾ ಎಂದರೆ ಯಾವ ರೀತಿ ಆಡಳಿತ ಮಾಡುತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್. ಎಂ. ಗಣೇಶ್ ಪ್ರಸಾದ್ ಮಾತನಾಡಿ, ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದರು ಅದನ್ನು ಅರಣ್ಯ ಇಲಾಖೆ ಎಂದು ಅಧಿಕಾರಿಗಳು ಗುರುತು ಮಾಡಿದ್ದಾರೆ. ಒನ್ ಟು ಪೈವ್ ಆಗಿರೋದನ್ನು ಕ್ಲಿಯರ್ ಮಾಡಲು ಸೂಚಿಸಲಾಗಿದೆ. ಜನರ ಹಿತದೃಷ್ಟಿಯಿಂದ ಕಾಡಿನ ಪ್ರಾಣಿಗಳು ನಾಡಿನತ್ತ ಬರದಂತೆ ನೋಡಿಕೊಳ್ಳುವುದು ನಮ್ಮ ಕೆಲಸ. ಹುಲಿಗಳ ಸಂತತಿ ಹೆಚ್ಚುತ್ತಿರುವುದರಿಂದ ವ್ಯಾಪ್ತಿ ಮೀರಿ ಬರುತ್ತದೆ. ನುಗುನಿಂದ ನೀರು ತರಲು ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ಅದರೆ, ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡಲು ಪೈಪ್ ಲೈನ್ ಮಾಡಲು ಕಷ್ಟವಾಗುತ್ತದೆ, ಕೇರಳ ಸಂಚಾರಕ್ಕೆ ಅರಣ್ಯ ವ್ಯಾಪ್ತಿಯಲ್ಲಿ ಪ್ಲೈ ಓವರ್ ಮಾಡುವುದಕ್ಕೆ ವಿರೋಧವಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕನ್ನಡ ನೆಲ, ಜಲ, ಭಾಷೆ ಉಳಿವಿಗೆ ಕನ್ನಡಪರ ಸಂಘಟನೆಗಳ ಪಾತ್ರ ಮಹತ್ವದ್ದು: ಡಾ ಜಯಪ್ಪ ಹೊನ್ನಾಳಿ
ಮೋಟರ್ ಗಳು ಅಳವಡಿಸಿ 12 ವರ್ಷವಾಗಿದೆ. ನೀರಾವರಿ ಇಲಾಖೆಗೆ ಟೆಕ್ನಿಕಲ್ ಟೀಂ ಇಲ್ಲ, ಮೋಟರ್ ಕೆಟ್ಟರೆ ಏನು ಮಾಡಬೇಕು?. ಮೋಟರ್ ರೀ ಪ್ಲೇಸ್ ಮಾಡಿ ಹೊಸ ಬಜೆಟ್ ನಲ್ಲಿ ಅವಕಾಶ ಮಾಡಿದರೆ ಸಮಸ್ಯೆಯೇ ಆಗುವುದಿಲ್ಲ. ಕೆಟ್ಟಿರುವ ಮೋಟರ್ ಹಳೆಯ ಟೆಕ್ನಾಲಜಿಯಾಗಿದ್ದು ಸಲಕರಣೆ ಬರಲು ನಿಧಾನವಾಗಿದೆ. ಆದ್ದರಿಂದ, ಡಿಸೆಂಬರ್ ಮೊದಲ ವಾರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಪುರಾತತ್ವ ಇಲಾಖೆಯ ನಿರ್ಲಕ್ಷ್ಯ; ಕೋಟೆ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯ ಆರೋಪ
ಪ್ರತಿಭಟನಾ ಸಮಾವೇಶದಲ್ಲಿ ರಾಜ್ಯ ಸಂಘಟನಾ ಕಾರ್ಯಾಧ್ಯಕ್ಷ ಮಹೇಶ್ ಪ್ರಭು, ರಾಜ್ಯ ಖಾಯಂ ಆಹ್ವಾನಿತ ಸದಸ್ಯ ಹೆಗ್ಗುವಾಡಿ ಮಹೇಶ್ ಕುಮಾರ್, ವಿಭಾಗೀಯ ಸಂಘಟನೆ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ತಾಲೂಕು ಅಧ್ಯಕ್ಷ ದಿಲೀಪ್, ಮಾಜಿ ಕಾಡ ಅಧ್ಯಕ್ಷ ಹಂಗಳ ನಂಜಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕಬ್ಬಹಳ್ಳಿ ಮಹೇಶ್, ಎಪಿಎಂಸಿ ಅಧ್ಯಕ್ಷ ರಂಗೂಪುರ ನಾಗರಾಜ್, ಪಿ ರಾಜಶೇಖರ್ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ರೈತ ಮುಖಂಡರು ಹಾಗೂ ಸ್ಥಳೀಯ ರೈತ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.





