ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಮಾಡುವ ಕಾರ್ಮಿಕನ ಮೇಲೆ ನಡೆದಿರುವ ಹಲ್ಲೆ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದ್ದು, ವಿವಿಧ ಕಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಘಟನೆಯನ್ನು ತೀವ್ರವಾಗಿ ಖಂಡಿಸಿ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿವೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ 26 ಗುರುವಾರ ಬೆಳಗ್ಗೆ 7:30 ಸುಮಾರಿಗೆ ಮಲ್ಪೆ ಬಂದರಿನಲ್ಲಿ ಮೀನು ಏಲಂ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆದಿದ್ದು, ಹಲ್ಲೆಗೆ ಒಳಗಾದವರನ್ನು ಅಂಬಲಪಾಡಿಯ ಶೇಕ್ ಅಯ್ಯಬ್(52) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯ ಗೊಂಡಿರುವ ಅವರು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಹಲ್ಲೆಗೊಳಗಾದ ಶೇಖ್ ಅಯ್ಯುಬ್, “ನಾನು ಕಳೆದ ಹಲವಾರು ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಫೆ 26, 2026ರಂದು ಒಬ್ಬ ವ್ಯಕ್ತಿ ನನಗೆ ಮೀನು ಏಲಂ ಮಾಡಲು ಕೊಟ್ಟಿದ್ದರಿಂದ ಎಂದಿನಂತೆ ನೆಲದಲ್ಲಿ ಇಟ್ಟು ಏಲಂ ಪ್ರಾರಂಭಿಸಿದ್ದೆ. ಬೆಳಿಗ್ಗೆ ಸುಮಾರು 7.45ರ ಸುಮಾರಿಗೆ ಪರಿಚಿತರಾದ ಮಿಥುನ್ ಕರ್ಕೇರಾ ಬಂದು ‘ನೀನು ಏಕೆ ಏಲಂ ಮಾಡುತ್ತಿದ್ದೀಯ, ಈ ಮೀನು ಎಲ್ಲಿ ತಂದೆ?’ ಎಂದು ಏಕಾಏಕಿ ಪ್ರಶ್ನಿಸಿ ತಡೆದರು. ಬಳಿಕ ಯಾವುದೇ ಕಾರಣವಿಲ್ಲದೆ ಮುಷ್ಟಿಯಿಂದ ಕೆನ್ನೆ, ಕಣ್ಣಿನ ಬಲಭಾಗ, ಹೊಟ್ಟೆಯ ಬಲಬದಿ ಹಾಗೂ ತಲೆಗೆ ಹೊಡೆದು, ಕಾಲಿನ ಮೊಣಕಾಲಿಗೆ ತುಳಿದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದರು” ಎಂದು ದೂರಿದರು.
ನಾನು ಉಪವಾಸದಲ್ಲಿದ್ದೇನೆ, ಹೊಡೆಯಬೇಡಿ ಎಂದು ಮನವಿ ಮಾಡಿದರೂ ಆರೋಪಿಯು ಕೇಳದೆ ನಿರಂತರವಾಗಿ ಹಲ್ಲೆ ನಡೆಸಿದ್ದರಿಂದ ದೈಹಿಕವಾಗಿ ತೀವ್ರ ತೊಂದರೆ ಅನುಭವಿಸಬೇಕಾಯಿತು. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಿದ್ದು, ತನಗೆ ನ್ಯಾಯ ದೊರಕಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಾನೂನು ಬಾಹಿರ ಹಿಂಸೆಗೆ ಉಡುಪಿ ಸಹಬಾಳ್ವೆ ಖಂಡನೆ
ಘಟನೆ ಕುರಿತು ಸಹಬಾಳ್ವೆ ಉಡುಪಿ ಸಮಿತಿಯ ಪ್ರಧಾನ ಸಂಚಾಲಕ ಕೆ. ಫಣಿರಾಜ್ ಪತ್ರಿಕಾ ಹೇಳಿಕೆ ನೀಡಿದ್ದು, “ಫೆ.26ರಂದು ಬೆಳಿಗ್ಗೆ ಸುಮಾರು 7.30ರ ಹೊತ್ತಿಗೆ ಅಯ್ಯುಬ್ ಅವರು ಎಂದಿನಂತೆ ತಮ್ಮ ಜೀವನೋಪಾಯವಾದ ಮೀನು ಏಲಂ ಮಾಡುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಮಿಥುನ್ ಕರ್ಕೇರಾ ಎಂಬ ವ್ಯಕ್ತಿ ತನ್ನ ಬೋಟಿನಿಂದ ಕದ್ದ ಮೀನುಗಳನ್ನು ಏಲಂ ಮಾಡುತ್ತಿದ್ದೀಯೆಂದು ಆರೋಪಿಸಿ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಯ್ಯುಬ್ ತಮಗೆ ಬಂದ ಸರಕನ್ನು ಮಾತ್ರ ಏಲಂ ಮಾಡುತ್ತಿದ್ದೇನೆ, ಕಳ್ಳತನದ ವಿಷಯ ತಿಳಿದಿಲ್ಲವೆಂದು ಸ್ಪಷ್ಟಪಡಿಸಿದರೂ ಬಿಡದೆ ಹಲ್ಲೆ ನಡೆಸಿರುವುದು ಖಂಡನೀಯ” ಎಂದು ತಿಳಿಸಿದ್ದಾರೆ.
ಮಲ್ಪೆ ಬಂದರು ವಿವಿಧ ಜಾತಿ-ಮತಗಳ ದುಡಿಯುವ ಜನರ ಬದುಕಿನ ಆಧಾರವಾಗಿರುವ ಸ್ಥಳವಾಗಿದ್ದು, ದುರ್ಬಲ ಕಾರ್ಮಿಕರ ಮೇಲೆ ಈ ರೀತಿಯ ದಬ್ಬಾಳಿಕೆ ಹಾಗೂ ಕಾನೂನುಬಾಹಿರ ಹಿಂಸೆ ನಡೆಯುತ್ತಿರುವುದು ಜಿಲ್ಲೆಯ ಕಾನೂನಿನ ಆಳ್ವಿಕೆಗೆ ಸವಾಲು ಹಾಕುವಂತಾಗಿದೆ. ದುಡಿಯುವ ಜನರ ಬದುಕಿನ ಹಕ್ಕಿನ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಜಿಲ್ಲಾ ಪೊಲೀಸ್ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಸಿಐಟಿಯು ಖಂಡನೆ
ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ (ಸಿಐಟಿಯು) ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಅವರು ಹೇಳಿಕೆ ನೀಡಿದ್ದು, “ಮಲ್ಪೆ ಬಂದರಿನಲ್ಲಿ ದಿನನಿತ್ಯ ಮೀನು ಏಲಂ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕಾರ್ಮಿಕ ಶೇಖ್ ಅಯ್ಯುಬ್ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಹಾಗೂ ಹೊರ ಜಿಲ್ಲೆಗಳಿಂದ ಬಂದ ಬಡ ಕಾರ್ಮಿಕರ ಮೇಲೆ ಹಲ್ಲೆ, ದಬ್ಬಾಳಿಕೆ ಹಾಗೂ ದೌರ್ಜನ್ಯ ಹೆಚ್ಚುತ್ತಿರುವುದು ಗಂಭೀರ ಸಂಗತಿ” ಎಂದು ತಿಳಿಸಿದ್ದಾರೆ.
ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ವೆಲ್ಫೇರ್ ಪಾರ್ಟಿ ಖಂಡನೆ
ಉಡುಪಿ ಜಿಲ್ಲಾ ವೆಲ್ಫೇರ್ ಪಾರ್ಟಿ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಮಲ್ಪೆ ಬಂದರಿನಲ್ಲಿ ಸಾವಿರಾರು ಜನರು ವಿವಿಧ ವೃತ್ತಿಗಳ ಮೂಲಕ ಜೀವನ ನಡೆಸುತ್ತಿದ್ದಾರೆ. ಮೀನು ಏಲಂ ಮಾಡುವ ವೃತ್ತಿಯೂ ಅದರಲ್ಲಿ ಪ್ರಮುಖವಾಗಿದೆ. ಈ ವೃತ್ತಿಯ ಕಾರ್ಮಿಕನ ಮೇಲೆ ದುರುದ್ದೇಶಪೂರ್ವಕವಾಗಿ ಕ್ರೂರ ಹಲ್ಲೆ ನಡೆಸಿರುವುದು ಮಾನವ ಘನತೆಯ ಮೇಲಿನ ಧಾಳಿ ಹಾಗೂ ಜೀವನೋಪಾಯ ಹಕ್ಕಿನ ಮೇಲಿನ ದೌರ್ಜನ್ಯವಾಗಿದೆ” ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಂದರಿನ ಒಳಗೆ ಕಾರ್ಮಿಕರ ರಕ್ಷಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿ ಶಾಂತಿಯುತ ಕೆಲಸದ ವಾತಾವರಣವನ್ನು ಕಾಪಾಡಬೇಕು. ಬಂದರಿನೊಳಗೆ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಕಾನೂನು ವ್ಯವಸ್ಥೆಯ ಪಾಲಕರಲ್ಲಿ ವೆಲ್ಫೇರ್ ಪಾರ್ಟಿ ಆಗ್ರಹಿಸಿದೆ.

ಹಲ್ಲೆಗೆ ಖಂಡನೆ ವ್ಯಕ್ತಪಡಿಸಿದ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ
ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ ಯು ಮಲ್ಪೆ ಬಂದರಿನಲ್ಲಿ ಕಾರ್ಮಿಕನ ಮೇಲೆ ನಡೆದ ಕ್ರೂರ ಹಲ್ಲೆ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಸಾರ್ವಜನಿಕ ಸ್ಥಳದಲ್ಲಿ ನಡೆದ ದಾಳಿ ಮಾನವ ಗೌರವ, ಜೀವನೋಪಾಯ ಹಕ್ಕು ಮತ್ತು ಸಂವಿಧಾನಿಕ ಭದ್ರತೆಯ ಮೇಲಿನ ನೇರ ದಾಳಿ ಎಂದು ವೇದಿಕೆ ತಿಳಿಸಿದೆ. ಆರೋಪಿಯನ್ನು ತಕ್ಷಣ ಬಂಧಿಸಿ, ಕೊಲೆ ಯತ್ನ ಸೇರಿದಂತೆ ಗಂಭೀರ ವಿಧಿಗಳಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ವೇಗವಾದ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಪೀಡಿತ ಮತ್ತು ಸಾಕ್ಷಿದಾರರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು. ಮಲ್ಪೆ ಬಂದರಿನಲ್ಲಿ ಶಾಶ್ವತ ಪೊಲೀಸ್ ಮೇಲ್ವಿಚಾರಣೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದೆ.
ಪೀಡಿತರೊಂದಿಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಜಿಲ್ಲಾ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಮಲ್ಪೆ ಬಂದರಿನಲ್ಲಿ ದುಡಿಯುವ ಕಾರ್ಮಿಕರ ಸುರಕ್ಷತೆ ಹಾಗೂ ಬದುಕಿನ ಹಕ್ಕು ಪ್ರಶ್ನೆಯಾಗಿ ಪರಿಣಮಿಸಿರುವ ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯ ಒದಗಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.





