ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ಯಾರ್ಡ್ ಘಟಕದಲ್ಲಿ ಭಾರತದ ನೌಕಾ ಸೇನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳು ಹಾಗೂ ಹಡಗುಗಳ ಸಂಖ್ಯೆಗಳ ವಿವರಗಳನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಹಂಚಿಕೊಂಡ ಪ್ರಕರಣದಲ್ಲಿ ಇಬ್ಬರು ಉತ್ತರಪ್ರದೇಶ ಮೂಲದ ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ಅಧೀನದಲ್ಲಿರುವ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ M/S ಸೂಷ್ಮಾ ಮರೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಬ್ಕಾಂಟ್ರಾಕ್ಟಿನಡಿ ಕೆಲಸ ಮಾಡುತ್ತಿದ್ದ ಆರೋಪಿಗಳಲ್ಲಿ, ಇನ್ಸುಲೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ಅನಂತರಾಮ್ ಭಟ್ಪುರದ ರೋಹಿತ್ (29) ಮತ್ತು ಸುಲ್ತಾನ್ಪುರ ಜಿಲ್ಲೆಯ ಸಂತ್ರಿ (37) ಎಂದು ತಿಳಿದುಬಂದಿದೆ.
ಬಂಧಿತ ರೋಹಿತ್ ಹಿಂದಿನ ದಿನಗಳಲ್ಲಿ ಕೇರಳದ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದಾಗ, ನೌಕಾಸೇನೆಗೆ ಸಂಬಂಧಿಸಿದ ಹಡಗುಗಳ ಗೌಪ್ಯ ಸಂಖ್ಯೆಗಳು ಹಾಗೂ ಸೂಕ್ಷ್ಮ ಮಾಹಿತಿ ವಾಟ್ಸಪ್ ಮೂಲಕ ಅನಧಿಕೃತ ವ್ಯಕ್ತಿಗಳಿಗೆ ಹಂಚಿಕೊಂಡು ಅಕ್ರಮ ಲಾಭ ಪಡೆದುಕೊಂಡಿದ್ದಾನೆ. ಅಧಿಕೃತ ಮಾಹಿತಿ ಪ್ರಕಾರ ನೆರೆ ರಾಷ್ಟ್ರ ಪಾಕಿಸ್ತಾನಕ್ಕ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ತಿಳಿಸಿದ್ದಾರೆ.
ಮಲ್ಪೆಯಲ್ಲಿರುವ ಹೊಸ ಘಟಕಕ್ಕೆ ಹುದ್ದೆ ಬದಲಾವಣೆಗೊಂಡ ನಂತರವೂ, ಆತನು ಕೊಚ್ಚಿಯಲ್ಲಿರುವ ತನ್ನ ಸ್ನೇಹಿತರಿಂದ ನೌಕಾಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದು ಮತ್ತೆ ವಾಟ್ಸಪ್ ಮೂಲಕ ಅನಧಿಕೃತ ವ್ಯಕ್ತಿಗಳಿಗೆ ಹಂಚಿಕೊಂಡಿದ್ದಾನೆ. ಈ ಕೃತ್ಯವು “ಭಾರತದ ಸಾರ್ವಭೌಮತೆ, ಏಕತೆ, ಅಖಂಡತೆ ಹಾಗೂ ಆಂತರಿಕ ಭದ್ರತೆಗೆ ಗಂಭೀರ ಅಪಾಯ ತಂದೊಡ್ಡುವ” ಚಟುವಟಿಕೆ ಎಂದು ದೂರಿನಲ್ಲಿ ಸ್ಪಷ್ಟವಾಗಿದೆ.
ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ನ ಸಿಇಓ ನೀಡಿದ ದೂರಿನ ಆಧಾರದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಉಡುಪಿ ಪೊಲೀಸರು, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರ್ಷ ಪ್ರಿಯಂವದಾ, ಐಪಿಎಸ್ ಅವರ ನೇತೃತ್ವದಲ್ಲಿ ಮಲ್ಪೆ ಪಿಎಸ್ಐ ಅನೀಲ್ ಕುಮಾರ್ ಡಿ, ಎಎಸ್ಐ ಹರೀಶ್, ಪಿಸಿ ರವಿ ಜಾಧವ್ ಸೇರಿದಂತೆ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.





