ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೇಮಾವತಿ, ಕಾವೇರಿ, ಕಬಿನಿ ನದಿಗಳು ತುಂಬಿ ಹರಿಯುತ್ತಿವೆ. ಗೊರೂರು ಜಲಾಶಯದಿಂದ ಹೇಮಾವತಿ ನದಿಗೆ ಹೆಚ್ಚಿನ ನೀರು ಹರಿಬಿಡಲಾಗಿದೆ. ಕೆಆರ್ಎಸ್ ಕೂಡ ಭರ್ತಿಯಾಗಿದ್ದು, 90,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ. ಪರಿಣಾಮ, ನದಿ ತುಂಬಿ ಹರಿಯುತ್ತಿದ್ದು, ನದಿ ತೀರದ ಕೃಷಿ ಪ್ರದೇಶ ಜಲಾವೃತಗೊಂಡಿದೆ. ಹಲವೆಡೆ ಪ್ರವಾಹ ಭೀತಿ ಎದುರಾಗಿದೆ.
ಕಾವೇರಿ ನದಿಗೆ ಹೆಚ್ಚಿನ ಹರಿ ಹರಿಸಿರುವುದರಿಂದ ಶ್ರೀರಂಗಪಟ್ಟಣ ರಂಗನತಿಟ್ಟು ಪಕ್ಷಿಧಾಮ ಜಲಾವೃತಗೊಂಡಿದೆ. ಅಲ್ಲಿನ, ಅರಣ್ಯ ಇಲಾಖೆ ಕಚೇರಿಗೂ ಜಲಾವೃತಗೊಂಡಿದ್ದು, ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಬೋಂಟಿಂಗ್ಅನ್ನು ನಿಷೇಧಿಸಲಾಗಿದೆ.
ಇನ್ನು, ಗಂಜಾಂನಲ್ಲಿರುವ ನಿಮಿಷಾಂಬ ದೇಗುಲದ ಸ್ನಾನಘಟ್ಟವೂ ಮುಳುಗಡೆಯಾಗಿದೆ. ಭಕ್ತರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕಾವೇರಿ ನದಿ ತಂಡೆಯಲ್ಲಿನ ಹಳ್ಳಿಗಳ ಜನರು ಎಚ್ಚರಿಕೆಯಿಂದಿರಬೇಕು. ನದಿಗೆ ಜಾನುವಾರುಗಳನ್ನು ಇಳಿಸಬಾರದು ಎಂದು ಕಾವೇರಿ ನೀರು ನಿಗಮ ಮನವಿ ಮಾಡಿದೆ.
ಕೆಆರ್ಎಸ್ ಮಾತ್ರವಲ್ಲದೆ, ಕಬಿನಿ ಜಲಾಶಯದಿಂದಲೂ 30,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದ್ದು, ಟಿ ನರಸೀಪುರದಲ್ಲಿ ಕಬಿನಿ ನೀರು ಕಾವೇರಿ ಜೊತೆ ಸೇರುವುದರಿಂದ ಕೊಳ್ಳೇಗಾಲ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ತಾಲೂಕಿನ ಹಳೇ ಹಂಪಾಪುರ, ಮುಳ್ಳೂರು, ಹಳೇ ಅಣಗಳ್ಳಿ, ದಾಸನಪುರ ಸೇರಿದಂತೆ ಒಂಬತ್ತು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಈ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿವೆ.




