ಮಂಡ್ಯ ಜಿಲ್ಲೆಯ ಇಂಡುವಾಳು ಗ್ರಾಮ ಪಂಚಾಯತಿಯಲ್ಲಿ ವಿತರಿಸಲಾದ ಇ-ಖಾತೆಗಳ ಪೈಕಿ ಬರೋಬ್ಬರಿ 1,844 (96%) ಇ-ಖಾತೆಗಳು ಅಕ್ರಮವೆಂದು ಕಂಡುಬಂದಿದೆ. ಈ ಬೆನ್ನಲ್ಲೇ, ಮೂವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ಒಬ್ಬರು ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆದೇಶಿಸಿದ್ದಾರೆ.
ಇಂಡುವಾಳು ಗ್ರಾಮ ಪಂಚಾಯತಿಯು ಒಟ್ಟು 1,929 ಇ-ಖಾತೆಗಳನ್ನು ವಿತರಿಸಿದೆ. ಈ ಪೈಕಿ ಕೇವಲ 85 ಇ-ಖಾತೆಗಳು ಮಾತ್ರ ಕಾನೂನುಬದ್ಧವಾಗಿವೆ. ಉಳಿದ 96% ಅಂದರೆ, 1,844 ಇ-ಖಾತೆಗಳು ಅಕ್ರಮವಾಗಿವೆ ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಆದೇಶಿಸಿದ್ದರು. ಅವರ ಆದೇಶದ ಅನ್ವಯ ‘ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957’ರ ಅಡಿಯಲ್ಲಿ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಮಾನತುಗೊಂಡ ಮೂವರು ಪಿಡಿಒಗಳನ್ನು ಎ.ಎಸ್. ಸಿದ್ದರಾಜು, ದಯಾನಂದ ಹಾಗೂ ಮರಿಲಿಂಗಯ್ಯ ಎಸ್. ಎಂದು ಹೆಸರಿಸಲಾಗಿದೆ. ಈ ಮೂವರು ಪ್ರಸ್ತುತ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಮಾನತುಗೊಂಡ ಮತ್ತೋರ್ವ ಅಧಿಕಾರಿಯನ್ನು ದ್ವಿತೀಯ ದರ್ಜೆ ಸಹಾಯಕಿ ರಾಣಿ ಎಚ್.ಆರ್ ಎಂದು ಹೇಳಲಾಗಿದೆ. ಇವರೆಲ್ಲರ ವಿರುದ್ಧ ಇಲಾಖಾ ತನಿಖೆಯು ಬಾಕಿ ಉಳಿದಿದೆ.
2021 ಮತ್ತು 2025ರ ನಡುವೆ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಸಂಬಂಧಿಸಿದಂತೆ ಇಷ್ಟೊಂದು ದೊಡ್ಡ ಸಂಖ್ಯೆಯ ಅಕ್ರಮ ಇ-ಖಾತೆಗಳನ್ನು ಹೇಗೆ ನೀಡಲಾಯಿತು ಎಂಬುದರ ವಿವರಗಳನ್ನು ಒದಗಿಸುವಂತೆ ನ್ಯಾಯಮೂರ್ತಿ ವೀರಪ್ಪ ಅವರು ಜಿಲ್ಲಾ ಪಂಚಾಯತಿ ಸಿಇಒಗೆ ಸೂಚಿಸಿದ್ದಾರೆ. ಈ ಬಗ್ಗೆ ವರದಿ ಸಲ್ಲಿಸುವಂತೆಯೂ ಆದೇಶಿಸಿದ್ದಾರೆ.
“ಈ ಅಕ್ರಮಗಳ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು. ಸರ್ಕಾರದ ಯಾವುದೇ ಮಂಜೂರಾತಿ ಅಥವಾ ಅನುಮತಿಯಿಲ್ಲದೆ ಸರ್ಕಾರಿ ಅಥವಾ ಗೋಮಾಳ ಭೂಮಿಗೆ ಸಂಬಂಧಿಸಿದಂತೆ ಎಷ್ಟು ಇ-ಖಾತೆಗಳನ್ನು ನೀಡಲಾಗಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತದ ಮುಂದೆ ಹಾಜರುಪಡಿಸಬೇಕು” ಎಂದು ಆದೇಶಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅಫ್ಘಾನ್-ಪಾಕ್ ಸಂಘರ್ಷ | ತಾನೇ ಹುಟ್ಟುಹಾಕಿದ ತಾಲಿಬಾನ್ ಜೊತೆ ಪಾಕ್ ಘರ್ಷಣೆ ಏಕೆ?
“1,844 ಅಕ್ರಮ ಇ-ಖಾತೆಗಳನ್ನು ನೀಡಿರುವುದು ಗಂಭೀರ ವಿಷಯವಾಗಿದೆ. ಸಿಇಒ ಕೇವಲ ಇಲಾಖಾ ತನಿಖೆಯನ್ನು ಪ್ರಾರಂಭಿಸಿದರೆ ಸಾಲದು; ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಮಂಡ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯು ಈ ವಿಷಯವನ್ನು ಸಿಇಒ ಗಮನಕ್ಕೆ ತರಬೇಕು. 1,844 ಅಕ್ರಮ ಇ-ಖಾತೆಗಳನ್ನು ನೀಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವುದನ್ನು ಸಿಇಒ ಖಚಿತಪಡಿಸಿಕೊಳ್ಳಬೇಕು” ಎಂದು ಉಪ ಲೋಕಾಯುಕ್ತರು ಆದೇಶಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಕಿರಗಂದೂರು ಗ್ರಾಮದ ಸರ್ವೆ ನಂ. 26ರ ಗೋಮಾಳ ಭೂಮಿಯನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುವಲ್ಲಿ ತಹಶೀಲ್ದಾರ್ ಅವರು ನಿಷ್ಠೆಯಿಂದ ಕಾರ್ಯನಿರ್ವಹಿಸಿಲ್ಲ ಎಂದು ಉಪ ಲೋಕಾಯುಕ್ತರು ಅಸಮಧಾನ ವ್ಯಕ್ತಪಡಿಸಿದ್ದಾರೆ.
“ಮಂಡ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರು ಸಹ 12 ಅಕ್ರಮ ಖಾತೆಗಳ ರದ್ದತಿಯ ಬಗ್ಗೆ ವರದಿ ಮಾಡಿಲ್ಲ. ಪಂಚಾಯತ್ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಸೆಕ್ಷನ್ 232ರ ಅಡಿಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ಸಿಇಒ ಕ್ರಮ ಕೈಗೊಳ್ಳಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದ್ದಾರೆ.




