ಕೇವಲ 500 ಮಂದಿ ಮಹರ್ ಸೈನಿಕರು 30,000 ಮಂದಿ ಪೇಶ್ವೆ ಸೈನ್ಯವನ್ನು ಸೋಲಿಸಿದಂತೆ ಮಂಡ್ಯ ಬಾಡೂಟದ ಚಳವಳಿಯೂ ಸಸ್ಯಹಾರ ಶ್ರೇಷ್ಟತೆಯ ಕೋಮುವಾದಿ ಅಜೆಂಡಾವನ್ನು ಮುಂದೊಂದು ದಿನ ಸೋಲಿಸಲಿದೆ ಎಂದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲಾಧ್ಯಕ್ಷ ಬಿಟಿ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯದ ವಕೀಲರ ಕಚೇರಿ ಬಿಟಿವಿ ಕಾರ್ಯಾಲಯದಲ್ಲಿ 2025ರ ಹೊಸ ವರ್ಷದ ಆಚರಣೆಯ ಭಾಗವಾಗಿ ಹಾಗೂ ಭೀಮಾ ಕೋರೆಗಾಂವ್ ಯುದ್ಧ ವಿಜಯದ ಸ್ಮರಣೆಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸಮಾನ ಮನಸ್ಕ ಅನೇಕ ವಕೀಲರು ಭಾಗವಹಿಸಿದ್ದ ಈ ವೇಳೆ ಮಂಡ್ಯದ ಬಾಡೂಟ ಚಳವಳಿಯನ್ನು ಕೋರೆಗಾಂವ್ ಯುದ್ಧದ ವಿಜಯೋತ್ಸವಕ್ಕೆ ಸಮೀಕರಿಸಿ ಮಾತನಾಡಿದರು.
“ಬಿಜೆಪಿ ಕೋಮುವಾದದ ಕುಟಿಲ ನೀತಿಯ ಮೂಲಕ ದೇಶದ ರಾಜಕೀಯ ಅಧಿಕಾರವನ್ನು ಹಿಡಿದಿದ್ದು, ದೇಶವನ್ನು ಸುದೀರ್ಘವಾಗಿ ಆಳಿದ ಕಾಂಗ್ರೆಸ್ನ ಸೈದ್ಧಾಂತಿಕ ಮೌನವೇ ಅದಕ್ಕೆ ಕಾರಣವಾಯಿತು. ಇಂತಹ ರಾಜಕಾರಣದಿಂದಾಗಿ ದೇಶದಲ್ಲಿನ ಸಾಂವಿಧಾನಿಕ ಕೇಂದ್ರಗಳು ದುರ್ಬಲಗೊಳ್ಳಲು ಕಾರಣವಾಯಿತು. ದೇಶದಲ್ಲಿ ಚಾಲ್ತಿಯಲ್ಲಿರುವ ಕೋಮು ರಾಜಕಾರಣವು ಆಹಾರ ಅಸ್ಪೃಶ್ಯತೆಯನ್ನು ಸಸ್ಯಹಾರ ಶ್ರೇಷ್ಟತೆಯ ಹುಸಿವಾದವನ್ನು ದೇಶದ ಮೇಲೆ ಹೇರಿದೆ” ಎಂದರು.
“ಆ ಮೂಲಕ ಬಹುಸಂಖ್ಯಾತ ಮಾಂಸಾಹಾರಿಗಳಾದ ಶೂದ್ರ ದಲಿತ ಹಿಂದುಳಿದ ವರ್ಗಗಳ ಪ್ರಜೆಗಳನ್ನು ಆ ಸಮುದಾಯದ ರಾಜಕೀಯ ನಾಯಕರನ್ನು ಎರಡನೇ ದರ್ಜೆಗೆ ಇಳಿಸಿ ತಾನು ಸಸ್ಯಹಾರ ಶ್ರೇಷ್ಠತೆಯ ರಾಜಕೀಯದ ಮೂಲಕ ಅಧಿಕಾರ ಕಬಳಿಸಿದೆ. ಆ ಅಧಿಕಾರಕ್ಕಾಗಿ ಕೋಮು ರಾಜಕಾರಣ ಶತಮಾನ ಕಾಲ ಕಾದಿತ್ತು. ಆದರೆ ಈ ಅವಕಾಶವಾದಿ ರಾಜಕೀಯದ ಬುಡಕ್ಕೆ ಬಾಡೂಟದ ಚಳವಳಿಯ ಕಿಡಿಬಿದ್ದಿದೆ. ಆ ಕಾರಣಕ್ಕಾಗಿಯೇ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಬಾಡೂಟ ಚಳವಳಿಯ ಮುಂಚೂಣಿಯಲ್ಲಿದ್ದ ಸಂಘಟನೆಗಳೊಂದಿಗೆ ಜೊತೆಯಾಗಿದ್ದು” ಎಂದರು.
“ಭಾರತದಲ್ಲಿ ಕೋಮುಸಾಮರಸ್ಯವನ್ನು ಉಳಿಸಿಕೊಳ್ಳಲು ಭಾರತವನ್ನು ಬಹುಜನ ಭಾರತವನ್ನಾಗಿ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳಲು ಇರುವ ಮುಂಗಾಣಿಕೆಯನ್ನು ಬಾಡೂಟ ಚಳವಳಿ ಹೊಂದಿತ್ತು. ದೇಶದ ಬಹುಸಂಖ್ಯಾತರು ಮಾಂಸಹಾರಿಗಳೇ ಆಗಿದ್ದು, ಆಹಾರ ಅಸ್ಪೃಶ್ಯತೆಯ ಕೋಮುವಾದಿ ರಾಜಕೀಯ ಅಜೆಂಡಾವನ್ನು ಸೋಲಿಸಲು ಅವರೆಲ್ಲ ಒಂದಾಗಬೇಕಾದ ವರ್ತಮಾನದ ತುರ್ತಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಸಂಭ್ರಮ
“ಸರ್ಕಾರಿ ಪ್ರಾಯೋಜಿತ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾಂಸಹಾರ ಮತ್ತು ಸಸ್ಯಹಾರ ಎರಡಕ್ಕೂ ಸಮಗೌರವ ಸಲ್ಲುವಂತೆ ನೋಡಿಕೊಳ್ಳಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕೋರೆಗಾಂವ್ ಯುದ್ಧದ ವಿಜಯ ಸಂಭ್ರಮಾಚರಣೆಯಲ್ಲಿ ವಕೀಲರಾದ ನದೀಮ್, ಕಿಶೋರ್, ಚೇತನ್, ಪಲ್ಲವಿ, ಸಹನಾ, ರಶ್ಮಿತಾ, ಆಕಾಶ್, ಸಚಿನ್ ಮತ್ತು ಇತರರು ಇದ್ದರು.





