ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಪಿಎಸ್ಐ ಆಗಿ ನೇಮಕಗೊಂಡ ಮಗಳಿಗೆ ಹೂಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿದ್ದು, ತಂದೆಯಿಂದಲೇ ಅಧಿಕಾರ ಸ್ವೀಕರಿಸಿದ ಅಪರೂಪದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದಲ್ಲಿ ಪಿಎಸ್ಐ ಆಗಿದ್ದ ತಂದೆಯು ತಾನು ನಿರ್ವಹಿಸುತ್ತಿದ್ದ ಹುದ್ದೆಯ ಚಾರ್ಜನ್ನು (ಕರ್ತವ್ಯ ಹೊಣೆಗಾರಿಕೆ) ತಮ್ಮ ಮಗಳಿಗೆ ನೀಡಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ ಎಸ್ ವೆಂಕಟೇಶ್ ಅವರು ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದರು. ಈವರೆಗೆ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದ ಹುದ್ದೆಗೆ ಅವರ ಪುತ್ರಿ ಬಿ ವಿ ವರ್ಷಾ ನೇಮಕಗೊಂಡಿದ್ದಾರೆ.
ಪಿಎಸ್ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡ 2022ರ ಬ್ಯಾಚ್ನಲ್ಲಿ ಪಿಎಸ್ಐ ಆಗಿರುವ ವರ್ಷಾ ಅವರು ಗುಲ್ಬರ್ಗಾದಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಅವರ ಮೊದಲ ನೇಮಕ ಕೂಡ ಮಂಡ್ಯದಲ್ಲೇ ಆಗಿದೆ. ಅದೂ ಕೂಡ ಅದೃಷ್ಟವೆಂಬಂತೆ ತನ್ನ ತಂದೆ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ಪಿಎಸ್ಐ ನೇಮಕಗೊಂಡಿದ್ದಾರೆ.
ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಬಿ ವಿ ವರ್ಷಾ ಅವರು ಮಂಗಳವಾರ ತಮ್ಮ ತಂದೆಯಿಂದಲೇ ಪಿಎಸ್ಐ ಚಾರ್ಚ್ ಪಡೆದುಕೊಂಡು ಪೊಲೀಸ್ ವೃತ್ತಿಜೀವನ ಆರಂಭಿಸಿದ್ದಾರೆ. ಇವರು ಅರ್ಥಶಾಸ್ತದಲ್ಲಿ ಎಂಎ ಪದವಿಯನ್ನೂ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಜ್ಞಾನ, ಏಕಾಗ್ರತೆಗೆ ಯೋಗ ಉತ್ತಮ ಚಿಕಿತ್ಸೆ : ಡಾ. ಅರುಂಧತಿ ಎಸ್ ಅಂಗಡಿ
ವರ್ಷಾ ಅವರ ತಂದೆ ವೆಂಕಟೇಶ್ ಅವರು ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರು. 16 ವರ್ಷಗಳ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನ, ಚೈನಾ, ಬಾಂಗ್ಲ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಜತೆಗೆ ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆ ಇದೆ. ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್ಐ ಪರೀಕ್ಷೆ ಪಡೆದು ಮಿಲಿಟರಿ ಕೋಟಾದಡಿ 2021ರ ಬ್ಯಾಚ್ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ 2ನೇ ವೃತ್ತಿ ಜೀವನ ಆರಂಭಿಸಿದ್ದರು.
ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸಿ, ಮತ್ತೆ ಮಂಡ್ಯ ಸೆಂಟ್ರಲ್ ಠಾಣೆಗೆ ಒಂದೂವರೆ ವರ್ಷದ ಹಿಂದೆ ವರ್ಗಾವಣೆಯಾಗಿ ಬಂದಿದ್ದರು. ಈಗ ತಾನು ನಿರ್ವಹಿಸುತ್ತಿದ್ದ ಹುದ್ದೆಯ ಚಾರ್ಜ್ ಪುತ್ರಿಗೆ ನೀಡಿ ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ. ತಂದೆಯೇ ಮಗಳಿಗೆ ಚಾರ್ಜ್ ನೀಡುವ ವಿಶೇಷ ಕ್ಷಣಗಳಿಗೆ ಪೊಲೀಸ್ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು.




