ಕಬ್ಬು ಬೆಳೆಯಲು ಕೃಷಿ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಸರ್ಕಾರ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್ ಎಲ್ ಭರತ್ರಾಜ್ ಆಗ್ರಹಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಸೋಮವಾರ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, “ರಸಗೊಬ್ಬರದ ಬೆಲೆ ದುಪ್ಪಟ್ಟಾಗಿದೆ. ಕೂಲಿ ಮತ್ತು ಕಬ್ಬು ಸಾಗಣೆ ವೆಚ್ಚ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಟಾವು ಮತ್ತು ಸಾಗಣೆ ವೆಚ್ಚ ಕಳೆದು ಪ್ರತಿ ಟನ್ ಕಬ್ಬಿಗೆ ₹3,200ರಿಂದ ₹3,300 ಬೆಲೆ ನಿಗದಿ ಮಾಡಿದೆ” ಎಂದು ಹೇಳಿದರು.
“ಉತ್ತರ ಕರ್ನಾಟಕಕ್ಕೆ ಒಂದು ಬೆಲೆ ಮತ್ತು ದಕ್ಷಿಣ ಕರ್ನಾಟಕಕ್ಕೆ ಮತ್ತೊಂದು ಬೆಲೆ ನಿಗದಿ ಮಾಡಿ ರೈತರನ್ನು ಒಡೆದು ಆಳುವ ನೀತಿ ಅನುಸರಿಸಿದೆ. ಕೇಂದ್ರ ಸರ್ಕಾರ ಸಕ್ಕರೆ ಇಳುವರಿ ಆಧಾರದ ಮೇಲೆ ಎಫ್ಆರ್ಪಿ ನಿಗದಿ ಮಾಡುತ್ತಿದ್ದು, ರೈತರ ದ್ರೋಹ ಬಗೆಯುತ್ತಿದೆ” ಎಂದು ಆರೋಪಿಸಿದರು.
“ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ಎಸ್ಎಪಿ(ರಾಜ್ಯ ಸಲಹಾ ಬೆಲೆ) ನಿಗದಿಪಡಿಸಬೇಕು. 2022 ಮತ್ತು 2023ರಲ್ಲಿ ಪ್ರತಿ ಟನ್ ಕಬ್ಬಿಗೆ ₹150 ಪ್ರೋತ್ಸಾಹ ಧನ ಘೋಷಿಸಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಿಸ್, ಬಗಾಸ್ಸೆ, ಡಿಸ್ಟಿಲರಿ, ಕೋ ಜೆನ್ ಇತರ ಮೂಲಗಳಿಂದ ಬರುವ ಆದಾಯದಲ್ಲಿ ಶೇ 50ರಷ್ಟನ್ನು ಕಬ್ಬು ಬೆಳೆಗಾರರಿಗೆ ಕೊಡಬೇಕು. ಹೊಸದಾಗಿ ಕಬ್ಬು ಬೆಳೆಯುವವರಿಗೆ ₹10 ಸಾವಿರ ಪ್ರೋತ್ಸಾಹ ಧನ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ವರ್ಷಗಳಾದರೂ ಇಎಸ್ಐ ಆಸ್ಪತ್ರೆ ಕಾಮಗಾರಿ ಆರಂಭಿಸಿಲ್ಲ : ಸುರೇಶ್ ಕಲ್ಲಾಗರ
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಮಹದೇವಪುರ ವಲಯದ ಅಧ್ಯಕ್ಷರಾಗಿ ಬಿ ರಾಮಚಂದ್ರ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ನಂಜೇಗೌಡ, ಚುಂಚೇಗೌಡ, ಉಪಾಧ್ಯಕ್ಷರಾಗಿ ಚನ್ನಹಳ್ಳಿ ನಿಂಗೇಗೌಡ, ನಾಗೇಂದ್ರ, ಕಾರ್ಯದರ್ಶಿಯಾಗಿ ಎಂ ಸಿ ರವಿಕುಮಾರ್, ಸಹ ಕಾರ್ಯದರ್ಶಿಯಾಗಿ ರಾಜು, ಶಿವಕುಮಾರ್ ಆಯ್ಕೆಯಾದರು. ಸದಸ್ಯರಾಗಿ ಸತೀಶ್, ಚಂದ್ರಶೇಖರ್, ಜಿ ಮಾದೇಗೌಡ, ಕೇಬಲ್ ಜವನೇಗೌಡ, ಪ್ರಸನ್ನ, ಅಬ್ದುಲ್ ಸುಕೂರ್, ರಾಮಕೃಷ್ಣಪ್ಪ, ಎಂ ಬಿ ಪುಟ್ಟಸ್ವಾಮಿ, ಪಟೇಲ್ ಶಿವರಾಮೇಗೌಡ, ಎಸ್ ನಾಗರಾಜ್, ಎಂ ಜೆ ಮಹೇಶ್ ಅವರನ್ನು ಆಯ್ಕೆ ಮಾಡಲಾಯಿತು.





