ಮಂಡ್ಯ | ಹೇಮಾವತಿ ನಾಲೆ ಅಕ್ರಮ; ಸರ್ಕಾರಿ ಗೋಮಾಳ ಒತ್ತುವರಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

Date:

ಮಂಡ್ಯ ಜಿಲ್ಲೆ, ಕೃಷ್ಣರಾಜ ಪೇಟೆ ತಾಲ್ಲೂಕು ಕಚೇರಿ ಅವರಣ ದಲ್ಲಿಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ರೈತರ ಶೋಷಣೆ, ಹೇಮಾವತಿ ಎಡದಂಡೆಯ ನಾಲೆಯ ಆಧುನಿಕರಣದಲ್ಲಿ ಎಸಗಲಾದ ನೂರಾರು ಕೋಟಿ ಅಕ್ರಮ ಮತ್ತು ಸರ್ಕಾರಿ ಗೋಮಾಳದ ಕೆರೆಯನ್ನು ಪ್ರಭಾವಿ ಖಾಸಗಿ ವ್ಯಕ್ತಿಯೋರ್ವ ಅತಿಕ್ರಮಿಸಿಕೊಂಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುವುದರ ಜೊತೆಗೆ ಕೆಳಕಂಡಂತೆ ನಿರ್ಣಯಗಳನ್ನು ಕೈಗೊಂಡು ತಹಶೀಲ್ದಾರ್ ಅಶೋಕ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಿಸಿಕೊಡುವಂತೆ ಮನವಿ ಸಲ್ಲಿಸಿದರು.

  • ಕೃಷ್ಣರಾಜಪೇಟೆ ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ನಿರಂತರವಾಗಿ ರೈತರನ್ನು ಶೋಷಣೆ ಮಾಡುತ್ತಿದ್ದು, ಈ ಕುರಿತು ಸಾಕಷ್ಟುಬಾರಿ ತಹಶೀಲ್ದಾರ್‌ರವರ ಗಮನ ಸೆಳೆದ ಹೊರತಾಗಿಯೂ ಸಹ ಗಮನಹರಿಸಿರುವುದಿಲ್ಲ. ಕಂದಾಯ ಇಲಾಖೆಯ ಸಿಬ್ಬಂದಿ, ನೌಕರರು, ಅಧಿಕಾರಿ ವರ್ಗದವರು ಸಾರ್ವಜನಿಕರ ಪೌತಿ ಖಾತೆ ಹಾಗೂ ಆ‌ರ್.ಟಿ.ಸಿ.ಗಳಲ್ಲಿ ಆಗಿರುವ ಲೋಪಗಳು, ವ್ಯತ್ಯಾಸಗಳನ್ನು ಸರಿಪಡಿಸಿಕೊಡಲು ಮತ್ತು ಕ್ರಯ ಪತ್ರದಂತೆ ಖಾತೆ ವರ್ಗಾವಣೆ ಮಾಡಿಕೊಡಲು ಹಾಗೂ ಅಕ್ರಮ – ಸಕ್ರಮ ಸಾಗುವಳಿಯ ಕಡತಗಳನ್ನು ತಯಾರಿಸಿ ದರಖಾಸ್ತು ಸಮಿತಿ ಮುಂದೆ ಮಂಡಿಸಲು ನಿರಂತರವಾಗಿ ಖಾಸಗಿ ಏಜಂಟರ ಮುಖೇನ ಶುಲ್ಕ ನಿಗಧಿಮಾಡಿಕೊಂಡು ರೈತರನ್ನು ಲೂಟಿ ಮಾಡುತ್ತಿದ್ದಾರೆ. ಈ ಕುರಿತು ತ್ವರಿತವಾಗಿ ಅಧಿಕಾರಿ, ನೌಕರರು, ಸಿಬ್ಬಂದಿಗಳಿಗೆ ಸೂಚನೆ ನೀಡಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
  • ಕೃಷ್ಣರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮದ ನಂ. 3 ಹೇಮಾವತಿ ಎಡದಂಡೆ ನಾಲಾ ವಿಭಾಗ ಕಛೇರಿಯ ಉಸ್ತುವಾರಿಗೆ ಒಳಪಟ್ಟಿರುವ ಸುಮಾರು 5373 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿರುವ ವಿತರಣಾ ನಾಲಾ 54ರ ಆಧುನೀಕರಣ ಕಾಮಗಾರಿಯು ತೀರಾ ಕಳಪೆಯಿಂದ ಕೂಡಿರುತ್ತದೆ. ಆಧುನೀಕರಣ ಕಾಮಗಾರಿಗೆ ಕಾಮಗಾರಿಯನ್ನು ಪ್ರಾರಂಭಕ್ಕೂ ಮುನ್ನವೇ ₹64.00 ಲಕ್ಷ ಮುಂಗಡ ಬಿಲ್ ಪಾವತಿಸಿದ್ದು, ಈ ರೀತಿ ಪಾವತಿಸಿರುವ ಬಿಲ್‌ನಲ್ಲಿ ನಾಲೆಯಲ್ಲಿ ಹೂಳನ್ನು ತೆಗೆಯದೇ ಮುಂಗಡವಾಗಿ ಬಿಲ್ ಪಡೆದಿರುವ ಸಂಬಂಧ ಈ ಹಿಂದೆಯೇ ಸಂಘಟನೆವತಿಯಿಂದ ತೀವ್ರ ಪ್ರತಿಭಟನೆ ಕೈಗೊಂಡ ಸಂದರ್ಭದಲ್ಲಿ ಹೂಳು ಮತ್ತು ನಾಲೆಯಲ್ಲಿನ ಗಿಡಗಂಟೆಗಳನ್ನು ತೆಗೆಯುವ ಮುನ್ನವೇ ಬಿಲ್ ಪಡೆದಿರುವುದು ಸ್ವತಃ ಇಲಾಖೆಯ ಅಧಿಕಾರಿ ವರ್ಗದವರ ಜಂಟಿ ಸ್ಥಳ ತನಿಖೆಯಿಂದ ಕಂಡು ಬಂದರೂ ಸಹ, ಗುತ್ತಿಗೆದಾರರ ವಿರುದ್ಧ ಮತ್ತು ಅಕ್ರಮವಾಗಿ ಬಿಲ್ ಪಾವತಿಸಿರುವ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವುದಿಲ್ಲ.
  • ವಿತರಣಾ ನಾಲಾ 54ರ ಆಧುನೀಕರಣ ಕಾಮಗಾರಿಯು ತೀರಾ ಕಳಪೆಯಿಂದ ಕೂಡಿದ್ದು ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ರೈತರ ನಿರಂತರ ಹೋರಾಟದ ಹೊರತಾಗಿಯೂ ಸಹ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುತ್ತಿಲ್ಲ. ನಾಲೆಯ 23.00 ಕಿಮೀ ನಿಂದ ಮುಂದೆ ಹೂಳನ್ನು ತೆಗೆಯದಿರುವ ಕಾರಣದಿಂದ, ನಾಲೆಯ ಮೇಲ್ಬಾಗದಲ್ಲಿ ನಿರ್ಮಿಸಿರುವ ಮೇಲ್ಗಾವಲೆ ನೀರು ಹೊರ ಹೋಗುತ್ತಿದೆ.
  • ಬಿಲ್ ಪಡೆದಿರುವ ಮತ್ತು ಕಳಪೆ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿರುವುದಿಲ್ಲ. ಜೊತೆಗೆ, ಈ ಆಧುನೀಕರಣ ಕಾಮಗಾರಿಯಲ್ಲಿ ಲಕ್ಷಾಂತರ ಸೈಜು ಕಲ್ಲುಗಳು, ನಾಲೆಯ ಬದಿಯಿಂದ ಕಿತ್ತು ಹಾಕಿರುವ ಬೌಲರ್ ಕಲ್ಲುಗಳು ಮತ್ತು ಕಿತ್ತುಹಾಕಿರುವ ಹಳೆಯ ಕಬ್ಬಿಣದ ಗೇಟ್ಗಳನ್ನು ಇಲಾಖೆ ಸ್ಪಾಕ್‌ಗೆ ತೆಗೆದುಕೊಂಡು ಸರ್ಕಾರಕ್ಕೆ ಲಾಭದಾಯಕವಾಗುವಂತೆ ನಿಯಮಾನುಸಾರ ಹರಾಜು ಮಾಡಬೇಕಾಗಿದ್ದು, ಈ ರೀತಿಯ ಹಳೆಯ ಬೆಲೆ ಬಾಳುವ ವಸ್ತುಗಳು ಎಲ್ಲೂ ಕಾಣುತ್ತಿರುವುದಿಲ್ಲ. ರೈತರಿಗೆ ಜೀವನಾಡಿಯಾಗಿರುವ ನಾಲೆಯ ಕಳಪೆ ಆಧುನೀಕರಣ ಕಾಮಗಾರಿಯ ಸಂಬಂಧ ತಕ್ಷಣ ಕ್ರಮ ಕೈಗೊಳ್ಳುವುದು.
  • ತೇಗನಹಳ್ಳಿ ಗ್ರಾಮದ ಸರ್ವೆ ನಂಬರ್ 77ರ ಗೋಮಾಳ ಜಮೀನಿನಲ್ಲಿ ಸುಮಾರು 8-00 ಎಕರೆ ವಿಸ್ತೀರ್ಣದಲ್ಲಿ ಸರ್ಕಾರಿ ಕಟ್ಟೆ ಇದ್ದು, ಈ ಗೋಮಾಳದ ಜಮೀನಿನ ಕಟ್ಟೆಯನ್ನು ಅಭಿವೃದ್ಧಿಪಡಿಸಲು ಪುರ ಗ್ರಾಮದ ಪಿ. ಕೆ. ಜಯಕೃಷ್ಣಗೌಡ ಮತ್ತು ಇವರ ಸಹೋದರ ಪಿ. ಕೆ. ಶಿವರಾಮ್ ರವರು ನೀರಾವರಿ ಇಲಾಖೆಯಿಂದ ₹20.00 ಲಕ್ಷ ಅನುದಾನ ಪಡೆದು ಅಭಿವೃದ್ಧಿಪಡಿಸಿಕೊಂಡು ತದ ನಂತರದಲ್ಲಿ ತಮ್ಮ ಪಿತ್ರಾರ್ಜಿತ ಆಸ್ತಿ ಎಂದು ಬಿಂಬಿಸುತ್ತಾ, ಕಟ್ಟೆಯ ಸುತ್ತಾ ಬೇಲಿ ನಿರ್ಮಿಸಿಕೊಂಡು ಸಾರ್ವಜನಿಕ ಪ್ರವೇಶಕ್ಕೆ ಸ್ವಯಂ ನಿರ್ಭಂಧವನ್ನು ಹೇರಿದ್ದು, ಈ ರೀತಿ ಗೋಮಾಳ ಜಮೀನಿನಲ್ಲಿರುವ ಕಟ್ಟೆಯನ್ನು ಸ್ವಾಧೀನಪಡಿಸಿಕೊಂಡು ಸಾರ್ವಜನಿಕ ಉಪಯೋಗಕ್ಕೆ ಮುಕ್ತಗೊಳಿಸಿಕೊಡುವಂತೆ ತಾಲ್ಲೂಕು ತಹಸಿಲ್ದಾರ್, ಜಿಲ್ಲಾಧಿಕಾರಿಗಳಿಗೆ ಪೂರಕ ದಾಖಲೆಗಳೊಂದಿಗೆ ದೂರು ನೀಡಿದಾಗ್ಯೂ ಸಹ ತಾಲ್ಲೂಕು ಅಡಳಿತ, ಜಿಲ್ಲಾಡಳಿತ ಮತ್ತು ನೀರಾವರಿ ಇಲಾಖೆಯು ಪ್ರಭಾವಿ ವ್ಯಕ್ತಿಗೆ ಸರ್ಕಾರಿ ಗೋಮಾಳ ಜಮೀನಿನಲ್ಲಿರುವ ಕಟ್ಟೆಯಲ್ಲಿ ಆಕ್ರಮವಾಗಿ ರೆಸಾರ್ಟ್ ನಿರ್ಮಿಸಿಕೊಂಡು ಬೋಟಿಂಗ್ ವ್ಯವಸ್ಥೆ ಮತ್ತು ಮೀನುಗಾರಿಕೆ ನಡೆಸುತ್ತಿರುವ ಇಲ್ಲಿ ನಿರ್ದಿಷ್ಟವಾಗಿ ಹೆಸರಿಸಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಭೆಯು ತೀವ್ರ ಒತ್ತಾಯವನ್ನು ಮಾಡುತ್ತಿದೆ. ಇದರ ಜೊತೆಗೆ ಇದೇ ಪ್ರಭಾವಿ ವ್ಯಕ್ತಿಯು ಸರ್ವೆ ನಂಬರ್ 77ರಲ್ಲಿನ ಗೋಮಾಳ ಜಮೀನಿನಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪ ಸಂಖ್ಯಾತರಿಗೆ ಮಂಜೂರಾಗಿರುವ ಜಮೀನನ್ನು ತನ್ನ ಕಪಿಮುಷ್ಟಿಯಲ್ಲಿರಿಸಿಕೊಂಡು ದಬ್ಬಾಳಿಕೆಯಿಂದ ನಿಯಮಾನುಸಾರ ದರಖಾಸ್ತು ಮಂಜೂರಿದಾರರನ್ನು ಸ್ವಾಧೀನಕ್ಕೆ ಸೇರಿಸದೇ ದೌರ್ಜನ್ಯ ಎಸಗುತ್ತಿದ್ದು, ಈ ಸಂಬಂಧ ಸಹ ಕ್ರಮ ಕೈಗೊಳ್ಳುವಂತೆ ಸಭೆಯು ಸರ್ಕಾರವನ್ನು ಒತ್ತಾಯಿಸುತ್ತಿದೆ.
  • ಕೃಷ್ಣರಾಜಪೇಟೆ ತಾಲ್ಲೂಕಿನ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ 0-19 ಗುಂಟೆ ಜಮೀನನ್ನು ಅಕ್ರಮವಾಗಿ ಖಾಸಗಿಯವರಿಗೆ ಖಾತೆ ಮಾಡಿಸಿಕೊಂಡು ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಿರುವ ವಿಚಾರವನ್ನು ಈ ಹಿಂದೆ ಪಾಂಡವಪುರ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದಿದ್ದೆವು. ಈವರೆಗೂ ಸಹ ಯಾವುದೇ ಕ್ರಮ ವಹಿಸಿರುವುದಿಲ್ಲ. ಈ ಅಕ್ರಮದ ಕುರಿತು ಶೀಘ್ರವಾಗಿ ಕ್ರಮ ಕೈಗೊಂಡು ಸರ್ಕಾರಿ ಜಾಗವನ್ನು ಸ್ವಾಧೀನ ಪಡೆಯುವಂತೆ ತಾಲ್ಲೂಕು ಆಡಳಿತವನ್ನು ಒತ್ತಾಯಿಸುತ್ತದೆ.
  • ನೀರಾವರಿಗಾಗಿ ರೈತರಿಗೆ ಸಮರ್ಪಕ ನೀರು ಒದಗಿಸುತ್ತೇವೆ. ದುಸ್ಥಿತಿಯಲ್ಲಿರುವ ನಾಲೆಯನ್ನು ಸಮಗ್ರವಾಗಿ ಆಧುನೀಕರಣ ಮಾಡಿ ರೈತರ ಕೃಷಿ ಜೀವನವನ್ನು ಹಸನು ಮಾಡುತ್ತೇವೆ ಎಂಬೆಲ್ಲಾ ಹುಸಿ ಭರವಸೆಗಳನ್ನು ನೀಡಿ ಬರೊಬ್ಬರಿ ₹1000 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಹೇಮಾವತಿ ಎಡದಂಡೆ ನಾಲೆಯ (ಸಾಹುಕಾರ್ ಚನ್ನಯ್ಯ ನಾಲೆ) ಆಧುನೀಕರಣ ಕಾಮಗಾರಿಯಲ್ಲಿ ನೇರಾನೇರ ₹500 ಕೋಟಿಯಷ್ಟು ಭ್ರಷ್ಟಾಚಾರ-ಅಕ್ರಮ-ಅವ್ಯವಹಾರ ನಡೆದಿರುವುದು ದಾಖಲೆಗಳ ಸಹಿತ ಕೈಗನ್ನಡಿಯಂತೆ ಗೋಚರಿಸುತ್ತಿದ್ದರೂ ಸಹ ಈ ಸಂಬಂಧವಾಗಿ ಪೂರಕ ದಾಖಲೆಗಳೊಂದಿಗೆ ಈ ಹಿಂದಿನ ಸರ್ಕಾರದ ಮುಖ್ಯ ಮಂತ್ರಿಗಳಿಗೆ ನೀಡಿದ ದೂರಿನನ್ವಯ ಕೇವಲ ಒಂದು ವಾರದೊಳಗೆ ಕ್ರಮ ಕೈಗೊಳ್ಳುವ ಭರವಸೆಯ ಹೊರತಾಗಿಯೂ ಸಹ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಪ್ರಸಕ್ತ ಸರ್ಕಾರ ವಿವಿಧ ಹಗರಣಗಳಿಗೆ ರಚಿಸುತ್ತಿರುವಂತೆ ವಿಶೇಷ ತನಿಖಾ ತಂಡಗಳಂತೆ, ಸರ್ಕಾರದ ಯಾವುದಾದರೊಂದು ಸಾರ್ವಜನಿಕ ಬೃಹತ್ ಯೋಜನೆಗೆ ಹಣ ಭರಿಸುವಷ್ಟು ₹500 ಕೋಟಿಯಷ್ಟು ಭಾರಿ ಮೊತ್ತದ ಅಕ್ರಮ ತನಿಖೆಯ ಸಲುವಾಗಿ ವಿಶೇಷ ತನಿಖಾ ತಂಡವನ್ನು (ಎಸ್.ಐ.ಟಿ) ರಚಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ.
  • ಈ ಸುದ್ದಿ ಓದಿದ್ದೀರಾ?ಮೈಸೂರು | ಆಗಸ್ಟ್. 24 ರಂದು ಬನವಾಸಿ ತೋಟದಲ್ಲಿ ‘ ಪ್ರೂನಿಂಗ್ – ಗ್ರಾಫ್ಟಿಂಗ್ ‘ ಕುರಿತಾದ ಒಂದು ದಿನದ ಕಾರ್ಯಗಾರ

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಪುಟ್ಟೇಗೌಡ, ಹಿರಿಯ ಮುಖಂಡರಾದ ರಾಜೇಗೌಡ, ಜಯರಾಮ್, ಕರೋಟಿ ತಮ್ಮೆಗೌಡ, ಜಗದೀಶ್, ಬೂಕನಕೆರೆ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಶಂಕರ್, ಮಹಿಳಾ ಅಧ್ಯಕ್ಷೆ ಲತಾ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...