ಮಂಡ್ಯದ ಸಂಜಯ ವೃತ್ತದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ, ಮೈಶುಗರ್ ಕಾರ್ಖಾನೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರತಿಭಟನೆ ನಡೆಸಿದರು.
ಕಬ್ಬಿನ ಬಾಕಿ ಹಣ ₹1.40 ಕೋಟಿ ರೂಪಾಯಿಯನ್ನು ರೈತರಿಗೆ ನೀಡಬೇಕು. ಈಗಾಗಲೇ ಕಾರ್ಖಾನೆಯಲ್ಲಿ ಕಬ್ಬು ಅರೆಯುವುದು ನಿಲ್ಲಿಸಲಾಗಿದೆ. ಕೂಡಲೇ ಸ್ವಚ್ಛತೆ ಹಾಗೂ ದುರಸ್ಥಿ ಕಾರ್ಯ ನಡೆಸಬೇಕು, ಇದುವರೆಗೆ ಮಾಡದೆ ಇರುವುದು ಸರಿಯಲ್ಲ, ಕೂಡಲೇ ಕ್ರಮ ವಹಿಸಿ ಎಂದು ಆಗ್ರಹಿಸಿದರು.
ಭ್ರಷ್ಟಾಚಾರ ಸಂಬಂಧ ತನಿಖೆಗೆ ನೇಮಕವಾಗಿರುವ ಸಮಿತಿಯಲ್ಲಿ ಜಿಲ್ಲೆಯಾದ್ಯಂತ ಒಬ್ಬರೇ ಒಬ್ಬರು ರೈತರು ಇಲ್ಲದಿರುವುದು ಶೋಚನಿಯ. ಭ್ರಷ್ಟಾಚಾರದ ಪ್ರಮುಖ ಆರೋಪಿ ಮೈಶುಗರ್ ಕಾರ್ಖಾನೆ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ರನ್ನು
ಪದಚ್ಯುತಿಗೊಳಿಸದೆ ನಿಸ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರದಿಂದಾಗಿ ಕಾರ್ಖಾನೆ ನಷ್ಟದ ಸುಳಿಯಲ್ಲಿದೆ, ಭ್ರಷ್ಟಾಚಾರ ನಡೆಸಿದವರ ವಿರುದ್ಧ ತನಿಖೆ ಕೈಗೊಳ್ಳಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಬೇಕು. ಹಿಂದಿನ ಅಧ್ಯಕ್ಷ ನಾಗರಾಜಪ್ಪ ಅವರ ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ ನೀಡಿದ್ದರು ಇದುವರೆಗೆ ಸರ್ಕಾರ ಆದೇಶ ಹೊರಡಿಸಿಲ್ಲ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹೆಣ್ಣುಮಕ್ಕಳ ಸುರಕ್ಷತೆ, ಹಕ್ಕು, ಆಶಯಗಳಿಗೆ ‘ಅಪ್ತಗೆಳತಿ’ ಪೂರಕ: ಶಾಸಕ ಎ ಆರ್ ಕೃಷ್ಣಮೂರ್ತಿ
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುನಂದಾ ಜಯರಾಮ್, ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್, ಬನ್ನೂರು ನಾರಾಯಣ, ಕೆ. ಬೋರಯ್ಯ, ಬೂದನೂರು ಪುಟ್ಟಸ್ವಾಮಿ, ಕೀಳಘಟ್ಟ ನಂಜುಂಡಯ್ಯ, ಎಸ್. ಕೆ. ರಾಜುಗೌಡ, ರಾಜೇಂದ್ರ, ಮಂಜೇಶ್ ಗೌಡ, ಎಂ. ಬಿ. ನಾಗಣ್ಣಗೌಡ, ಎಂ. ಎನ್. ಚಂದ್ರು, ಸಾತನೂರು ವೇಣುಗೋಪಾಲ್ ಸೇರಿದಂತೆ ಹಲವರು ಇದ್ದರು.





