ಸರ್ಕಾರಿ ಶಾಲೆಯಲ್ಲಿ ಮಧ್ಯಹ್ನದ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ ಮಾಡುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಊಟದಲ್ಲಿ ಮೊಟ್ಟೆ ಕೊಟ್ಟರೆ, ಮಕ್ಕಳನ್ನು ಶಾಲೆ ಬಿಡಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಆಲಕೆರೆಯಲ್ಲಿ ನಡೆದಿದೆ.
ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗೆ ಮೊಟ್ಟೆ ವಿತರಣೆ ಮಾಡಲು ಸರ್ಕಾರ ಆದೇಶಿಸಿತ್ತು. ಅದರಂತೆ, ವಾರದಲ್ಲಿ ಮೂರು ದಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡಲಾಗುತ್ತಿದೆ. ಆದರೆ, ಅಲಕೆರೆ ಗ್ರಾಮದಲ್ಲಿ ಮೊಟ್ಟೆ ವಿತರಣೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಮೊಟ್ಟೆ ನೀಡಿದರೆ, 80 ವಿದ್ಯಾರ್ಥಿಗಳನ್ನು ಶಾಲೆ ಬಿಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಮೊಟ್ಟೆ ವಿತರಣೆಯು ಗ್ರಾಮದಲ್ಲಿನ ದೀರ್ಘಕಾಲದ ಧಾರ್ಮಿಕ (ಮೌಢ್ಯ) ರೂಢಿಗಳನ್ನು ಉಲ್ಲಂಘಿಸುತ್ತದೆ. ಶಾಲೆಯು ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ ಇರುವ ಕಾರಣ, ದೇವಾಲಯದ ಆಸುಪಾಸಿನಲ್ಲಿ ಮೊಟ್ಟೆ ಬೇಯಿಸುವುದು ಗ್ರಾಮದ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಗ್ರಾಮಸ್ಥರು ವಾದಿಸಿದ್ದಾರೆ.
ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದು, 80 ವಿದ್ಯಾರ್ಥಿಗಳು ಮೊಟ್ಟೆ ತಿನ್ನಲು ನಿರಾಕರಿಸಿದ್ದಾರೆ. ಶಾಲಾ ಆವರಣದಲ್ಲಿ ಮೊಟ್ಟೆ ಬೇಯಿಸುವುದನ್ನು ಮುಂದುವರಿಸಿದರೆ, ಆ 80 ಮಕ್ಕಳನ್ನು ಶಾಲೆಗೆ ಕಳಿಸುವುದನ್ನು ನಿಲ್ಲಿಸುತ್ತೇವೆ ಎಂದು ವಿದ್ಯಾರ್ಥಿಗಳ ಪೋಷಕರು ಶಿಕ್ಷಕರಿಗೆ ಬೆದರಿಕೆ ಹಾಕಕಿದ್ದಾರೆ ಎಂದು ವರದಿಯಾಗಿದೆ.
“ಶಾಲಾ ಆವರಣದಲ್ಲಿ ಮೊಟ್ಟೆಗಳನ್ನು ಬೇಯಿಸಲಾಗುತ್ತಿರುವುದರಿಂದ ನಾವು ನಮ್ಮ ಮಕ್ಕಳ ವರ್ಗಾವಣೆ ಪತ್ರ ಕೇಳಿದ್ದೇವೆ, ಮೊಟ್ಟೆ ನೀಡುವುದು ನಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ, ಬದಲಿಗೆ ಬಾಳೆಹಣ್ಣು ನೀಡುವಂತೆ ನಾವು ಶಾಲೆಯಲ್ಲಿ ವಿನಂತಿಸಿದ್ದೇವೆ” ಎಂದು ಪೋಷಕರಲ್ಲಿ ಒಬ್ಬರು ಹೇಳಿದರು.
ಈ ಲೇಖನ ಓದಿದ್ದೀರಾ?: ಅಣು ವಿದ್ಯುತ್ ಸ್ಥಾವರ ಈ ಕಾಲಘಟ್ಟದ ಪ್ರಸ್ತುತತೆಯೆ?
ನಾವು ಮೊಟ್ಟೆ ವಿತರಣೆಯನ್ನು ವಿರೋಧಿಸುತ್ತಿಲ್ಲ, ಬದಲಾಗಿ ಶಾಲೆಯಲ್ಲಿ ಬೇಯಿಸುವ ವಿಧಾನವನ್ನು ಮಾತ್ರ ವಿರೋಧಿಸುತ್ತಿದ್ದೇವೆ ಎಂದು ಪೋಷಕರು ಹೇಳಿದ್ದಾರೆ. ವರ್ಷಗಳಿಂದ ಪರಸ್ಪರ ಒಪ್ಪಂದವನ್ನು ಅನುಸರಿಸಲಾಗುತ್ತಿತ್ತು, ಅಲ್ಲಿ ಮೊಟ್ಟೆಗಳನ್ನು ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಿ, ಮೊಟ್ಟೆಗಳನ್ನು ಶಾಲಾ ಸಿಬ್ಬಂದಿಗೆ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಅವರು ಹೇಳುತ್ತಾರೆ.
“ಆದರೆ, ಇದ್ದಕ್ಕಿದ್ದಂತೆ ನಮ್ಮನ್ನು ಕೇಳದೆ ಶಾಲೆಯು ಆವರಣದಲ್ಲಿ ಮೊಟ್ಟೆ ಬೇಯಿಸುವುದನ್ನು ಪುನರಾರಂಭಿಸಿತು” ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಯು ಸರ್ಕಾರಿ ನೀತಿಯನ್ನು ಮಾತ್ರ ಅನುಸರಿಸುತ್ತಿದೆ ಎಂದು ಹೇಳುವ ಮೂಲಕ ಪ್ರಾಂಶುಪಾಲರು ಪೋಷಕರನ್ನು ಮರುಪರಿಶೀಲಿಸುವ ಪ್ರಯತ್ನ ಮಾಡಿದ್ದಾರೆ.
“ಓರ್ವ ವಿದ್ಯಾರ್ಥಿ ಮೊಟ್ಟೆ ಕೇಳಿದರೂ, ನಾವು ಅವುಗಳನ್ನು ಒದಗಿಸಬೇಕಾಗುತ್ತದೆ. ದಯವಿಟ್ಟು ಮೊಟ್ಟೆ ಮತ್ತು ಬಾಳೆಹಣ್ಣುಗಳಿಗಿಂತ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ” ಎಂದು ಪ್ರಾಂಶುಪಾಲರು ಹೇಳಿದರು.
ಶಿಕ್ಷಣ ಇಲಾಖೆ ಈಗ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯ ಸ್ವಾಮಿ, “ನಾವು ಶಿಕ್ಷಣ ಇಲಾಖೆ, ಶಾಲಾ ಮುಖ್ಯಸ್ಥರು ಮತ್ತು ಪೋಷಕರೊಂದಿಗೆ ಸಭೆಗೆ ಕರೆದಿದ್ದೇವೆ. ಸಮಸ್ಯೆಯನ್ನು ಚರ್ಚಿಸಿ ಪರಿಹರಿಸುತ್ತೇವೆ” ಎಂದು ಹೇಳಿದರು.




