ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ ಮಹೇಶ್ ಜೋಶಿ ನೀಡಿದ್ದ ಆಹಾರ ತಾರತಮ್ಯದ ಹೇಳಿಕೆ ಮಂಡ್ಯದಲ್ಲಿ ಪ್ರತಿರೋಧದ ಕಿಡಿಹೊತ್ತಿಸಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸಲಾಗಿದೆ ಎಂಬ ಜೋಶಿ ಹೇಳಿಕೆಯನ್ನು ಖಂಡಿಸಿ, ಸಮ್ಮೇಳನದಲ್ಲಿ ಮಾಂಸಾಹಾರ ನೀಡಬೇಕೆಂದು ಒತ್ತಾಯಿಸಿ ಮಂಡ್ಯದ ಜನರು ಮತ್ತು ವಿವಿಧ ಸಂಘಟನೆಗಳು ಪಟ್ಟು ಹಿಡಿದಿದ್ದಾರೆ. ಸಮ್ಮೇಳನ ನಡೆಸುವವರೇ ಮಾಂಸಾಹಾರ ನೀಡಬೇಕು. ಇಲ್ಲದಿದ್ದರೆ, ನಾವೇ ‘ಮಾಂಸಾಹಾರ’ಬಾಡೂಟ’ ವಿತರಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಂಡ್ಯದಲ್ಲಿ ಡಿಸೆಂಬರ್ 19ರಿಂದ 22ರವೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆದರೆ, ಜೋಶಿ ಅವರ ಹೇಳಿಕೆಯು ಆಹಾರ ಪದ್ದತಿಯನ್ನು ಅವಹೇಳನ ಮಾಡುತ್ತಿದೆ. ಹೀಗಾಗಿ, ಅವರ ಹೇಳಿಕೆಯನ್ನು ಹಿಂಪಡೆದು, ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ -ಎರಡನ್ನೂ ನೀಡಬೇಕು. ಮಾಂಸಾಹಾರವನ್ನೂ ನೀಡುವ ಮೂಲಕ ಬಹುಜನರ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಮಂಡ್ಯದ ಜನರು ಆಗ್ರಹಿಸಿದ್ದಾರೆ.
ಸಮ್ಮೇಳನದಲ್ಲಿ ಮಾಂಸಾಹಾರ ನೀಡಬೇಂಕೆದು ಒತ್ತಾಯಿಸಿ ಹಲವಾರು ವಾಟ್ಸ್ಆ್ಯಪ್ ಗ್ರೂಪ್ಗಳನ್ನೂ ರಚಿಸಲಾಗಿದೆ. ಈ ಗ್ರೂಪ್ಗಳಲ್ಲಿ ಸಾವಿರಾರು ಮಂದಿ ಸೇರಿದ್ದಾರೆ. ಶಾಸಕ, ಸಚಿವರನ್ನೂ ಗುಂಪಿಗೆ ಸೇರಿಸಲಾಗಿದೆ. ಸಮ್ಮೇಳನದಲ್ಲಿ ಮಾಂಸಾಹಾರ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಶಾಸಕ, ಸಚಿವರಿಗೆ ಒತ್ತಾಯಿಸಲಾಗಿತ್ತು.
ವಾಟ್ಸ್ಆ್ಯಪ್ ಚರ್ಚೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಗಣಿಗ ರವಿ, “ಮಾಂಸಾಹಾರದ ಬಗ್ಗೆ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ಚರ್ಚಿಸೋಣ” ಎಂದು ಹೇಳಿದ್ದಾರೆ.
ಶಾಸಕರ ಪ್ರತಿಕ್ರಿಯೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಂಸಾಹಾರ ನೀಡುವ ಬಗ್ಗೆ ಶಾಸಕರು, ಸಚಿವರು ಹಾಗೂ ಅಧಿಕಾರಿಗಳ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಮಾಂಸಾಹಾರ ಕೇಳುತ್ತಿರುವವರಿಗೆ ಸಮ್ಮೇಳನ ಮುಗಿದ ಬಳಿಕ ‘ಮಾಂಸಾಹಾರ ಕೂಟ’ ಏರ್ಪಡಿಸುತ್ತೇವೆಂದು ಸಮ್ಮೇಳನ ಆಯೋಜಕರು ಹೇಳಿದ್ದಾರೆಂಬ ಮಾತುಗಳು ಕೇಳಿಬಂದಿವೆ. ಆದರೆ, ಇದು ಪಂಕ್ತಿಬೇಧದ ಸೂಚಕವಾಗಿದೆ. ಇಂತಹ ಪಂಕ್ತಿಬೇಧ ಸಲ್ಲದು. ಸಮ್ಮೇಳನದಲ್ಲಿಯೇ ಆಹಾರ ವಿತರಿಸುವಾಗಲೇ ಮಾಂಸಾಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮಂಡ್ಯ | ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಆಗ್ರಹ
ಕರ್ನಾಟಕವು ಬಹು ಸಂಸ್ಕೃತಿಯ ನಾಡು. ಬಹುಸಂಖ್ಯಾತರ ಆಹಾರವಾದ ಮಾಂಸಾಹಾರವನ್ನು ಸಮ್ಮೇಳನದಲ್ಲಿ ನೀಡುವುದು ಬಹುತ್ವವನ್ನು ಸೂಚಿಸುತ್ತದೆ. ಬಹುಸಂಖ್ಯಾತರ ಆಹಾರ ಪದ್ದತಿಯನ್ನು ಗೌರವಿಸಿದಂತಾಗುತ್ತದೆ. ಸಮ್ಮೇಳನದ ಇತಿಹಾಸದಲ್ಲಿ ಮಂಡ್ಯದಲ್ಲಿ ನಡೆಯುವ ಸಮ್ಮೇಳನವು ಹೊಸ ಅಧ್ಯಾಯವನ್ನು ಬರೆದಂತಾಗುತ್ತದೆ. ಈ ಹಿಂದೆ, 2018ರಲ್ಲಿ ಮಂಡ್ಯ ದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ ನಾಗೇಶ್ ಅವರು ಸಾವಿರಾರು ನೌಕರರಿಗೆ ಬಾಡೂಟ ಹಾಕಿಸಿದ್ದರು. ಕಾರ್ಯಕ್ರಮ ಆಯೋಜಿಸುವವರಿಗೆ ಬಾಡೂಟದ ಆಸಕ್ತಿ ಇದ್ದರೆ, ಎಲ್ಲವೂ ಸಾಧ್ಯ. ಸಾಹಿತ್ಯ ಸಮ್ಮೇಳನದ ಆಯೋಜಕರು ಬಹುಸಂಖ್ಯಾತರ ಆಹಾರದ ಬಗ್ಗೆ ಗೌರವ ತೋರಿಸಬೇಕು. ಮಾಂಸಾಹಾರ ನೀಡಲು ಮನಸ್ಸು ಮಾಡಬೇಕು ಎಂದು ಮಂಡ್ಯದ ನಾಗರಿಕರು ಒತ್ತಾಯಿಸಿದ್ದಾರೆ.
“ಮಾಂಸಾಹಾರವನ್ನು ಮದ್ಯ, ತಂಬಾಕಿಗೆ ಹೋಲಿಸಿದ್ದಾರೆ. ಇದು ಬಹುಸಂಖ್ಯಾತ ಶೂದ್ರ ಸಮುದಾಯಗಳಿಗೆ ಮಾಡುತ್ತಿರುವ ಅಪಮಾನ. ಈ ಶ್ರೇಷ್ಠತೆಯ ವ್ಯಸನ 86 ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ನಮ್ಮ ಮಕ್ಕಳ ಕಾಲಕ್ಕೂ ಈ ಪರಂಪರೆ ಮುಂದುವರಿಯುವುದು ಬೇಡ. ಕುವೆಂಪು, ನಾಲ್ವಡಿ ಅತಿ ಹೆಚ್ಚು ಪ್ರೀತಿಸಿದ ನಮ್ಮ ಮಂಡ್ಯದ ನೆಲದಲ್ಲಿ ಬ್ರಾಹ್ಮಣ್ಯ ಮೇಲುಗೈ ಸಾಧಿಸಲು ಬಿಡುವುದಿಲ್ಲ. ಸಮ್ಮೇಳನ ಆಯೋಜಕರು ಮಾಂಸಾಹಾರ ನೀಡದಿದ್ದರೆ, ಸಮ್ಮೇಳನದಲ್ಲಿ ನಾವೇ ಮಾಂಸಾಹಾರ ನೀಡುತ್ತೇವೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯ ಹೊಸ ಇತಿಹಾಸ ಬರೆಯಲಿದೆ” ಎಂದು ಮಂಡ್ಯ ಬಾಡೂಟ ಬಳಗ ತಿಳಿಸಿದೆ.




