ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಮಣ್ಣಿನ ಗುಣ ಹೋರಾಟ ರೂಪದ್ದು. ನಮ್ಮ ಗ್ರಾಮದ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಹೀಗಿರುವಾಗ ಗ್ರಾಮದ ಅಸ್ಮಿತೆ ಮತ್ತು ರೈತರ ಹಿತಾಸಕ್ತಿಯನ್ನು ಬಲಿಕೊಡುವ ಸರಕಾರದ ನಿರ್ಧಾರ ಖಂಡನೀಯ ಎಂದು ರೈತ ಹೋರಾಟಗಾರ್ತಿ ಸುನಂದಮ್ಮ ಜಯರಾಮ್ ಆಕ್ರೋಶ ವ್ಯಕ್ತಪಡಿಸಿದರು.
ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಿರುವ ಸರ್ಕಾರದ ನಿರ್ಣಯವನ್ನು ವಿರೋಧಿಸಿ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, “ಗೆಜ್ಜಲಗೆರೆ ಗ್ರಾಮಸ್ಥರ ಅಭಿಪ್ರಾಯವನ್ನು ಪಡೆಯದೆ, ಏಕಪಕ್ಷೀಯವಾಗಿ ಗ್ರಾಮವನ್ನು ನಗರಸಭೆಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ” ಎಂದು ಸುನಂದಮ್ಮ ಕಿಡಿಕಾರಿದರು.
“ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ ಸಿಗುತ್ತಿದ್ದ ಸೌಲಭ್ಯಗಳು ಮತ್ತು ರೈತಾಪಿ ವರ್ಗದ ಹಕ್ಕುಗಳು ನಗರಸಭೆ ವ್ಯಾಪ್ತಿಗೆ ಬಂದಾಗ ಮರೀಚಿಕೆಯಾಗಲಿವೆ. ಗ್ರಾಮವನ್ನು ನಗರಸಭೆಗೆ ಸೇರಿಸುವುದರಿಂದ ಸಾಮಾನ್ಯ ಜನರ ಮೇಲೆ ಹೆಚ್ಚಿನ ತೆರಿಗೆ ಹೊರೆ ಬೀಳಲಿದೆ. ಕೃಷಿ ಭೂಮಿಯನ್ನು ಹೊಂದಿರುವ ರೈತರಿಗೆ ಇದರಿಂದ ಯಾವುದೇ ಲಾಭವಿಲ್ಲ, ಬದಲಾಗಿ ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಅಥವಾ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ಇದರ ಹಿಂದಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಈ ನಿರ್ಣಯವನ್ನು ಕೈಬಿಡಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸಾಂಪ್ರದಾಯಿಕವಾಗಿ ಹಿಂದೂ ಮಹಿಳೆಯ ಅಂತ್ಯಕ್ರಿಯೆ: ಸೌಹಾರ್ದತೆ ಮೆರೆದ ಮುಸ್ಲಿಂ, ಕ್ರಿಶ್ಚಿಯನ್ನರು
ಧರಣಿ ಸತ್ಯಾಗ್ರಹದಲ್ಲಿ ಕುಳಿತಿರುವ ಹೋರಾಟಗಾರರನ್ನು ಹುರಿದುಂಬಿಸಿದ ಅವರು, “ಪಕ್ಷಭೇದ ಮರೆತು ಗ್ರಾಮದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡಬೇಕು. ನ್ಯಾಯ ಸಿಗುವವರೆಗೂ ಈ ಸತ್ಯಾಗ್ರಹ ನಿಲ್ಲಬಾರದು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಲಿಂಗಪ್ಪಾಜಿ, ಶಂಕರ್, ವಳಗೆರೆಹಳ್ಳಿ ಉಮೇಶ್, ರವಿ, ರಘು, ವಿನೋದ್ ಬಾಬು, ಸತ್ಯಪ್ಪ ವಕೀಲರು, ವೆಂಕಟೇಶ್ ಮುಟ್ಟನಹಳ್ಳಿ, ಪ್ರಸನ್ನ ಗೊರವನಹಳ್ಳಿ ಸೇರಿದಂತೆ ಹಲವಾರು ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಇದ್ದರು.





