ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಸಲ್ಲಿಸಿದ ದೂರಿನನ್ವಯ, ಕರ್ತವ್ಯ ಲೋಪ ಹಾಗೂ ಹಣಕಾಸು ಅಕ್ರಮ ಎಸಗಿದ ಆರೋಪದ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸುವರ್ಣ ಧರಣನವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕೆ ಆರ್ ನಂದಿನಿ ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1) ರಡಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ಅಮಾನತು ಆದೇಶ ನೀಡಲಾಗಿದೆ.
ಕರ್ನಾಟಕ ವಂಚಾಯತ್ ರಾಜ್ ಕಾಯ್ದೆ 1993ರ ಪ್ರಕರಣ 213ರಲ್ಲಿ ಗ್ರಾಮ ಪಂಚಾಯಿತಿ ನಿಧಿಯಲ್ಲಿ ಯಾವುದೇ ವೆಚ್ಚವನ್ನು ಬಜೆಟ್ ಏರ್ಪಾಟನ್ನು ಮಾಡಿದ ಇಲ್ಲವೇ ವಿದ್ಯುಕ್ತವಾಗಿ ಪುನರ್ ವಿನಿಯೋಗದ ಮೂಲಕ ನಿಧಿಯನ್ನು ಪಡೆಯದ ಹೊರತು ಖರ್ಚು ಮಾಡತಕ್ಕದಲ್ಲವೆಂದು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪೂರ್ವ ಮಂಜೂರಾತಿಯೊಂದಿಗೆ ನಿಧಿ ಸ್ವತ್ತನ್ನು ಬಳಸಬಹುದಾಗಿರುತ್ತದೆ. 2024-25 ಹಾಗೂ 2025-26ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ ಲಕ್ಷಾಂತರ ರೂಪಾಯಿಗಳನ್ನು ನಿಯಮ ಬಾಹಿರವಾಗಿ ವೆಚ್ಚ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಅಂದಾಜು ₹26,36,711 ಮೊತ್ತದ ಸಾಮಗ್ರಿಗಳನ್ನು ಖರೀದಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ದಾಸ್ತಾನು ವಹಿ, ವಿತರಣಾ ದಾಖಲೆ ಇಲ್ಲವೇ ವೋಚರ್ಗಳನ್ನು ನಿಯಮಾನುಸಾರ ನಿರ್ವಹಿಸದೆ ಹಣ ಪಾವತಿಸಲಾಗಿದೆ. ಗ್ರಾಮ ಪಂಚಾಯಿತಿಯ ಅನುಮೋದನೆ ಪಡೆಯದೆ ಕುಡಿಯುವ ನೀರಿನ ಸಾಮಗ್ರಿಗಳ ಅಳವಡಿಕೆ ಹಾಗೂ ಮೋಟಾರ್ ದುರಸ್ತಿ ಹೆಸರಿನಲ್ಲಿ ನಕಲಿ ಬಿಲ್ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಪಡಿಸಿಕೊಂಡಿರುವುದು ತನಿಖಾ ವರದಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಮಂಡ್ಯ | ರೈತರು ಸಮಗ್ರ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ
ಪಿಡಿಒ ಸುವರ್ಣ ಧರಣ್ಣನವರ್ 2024ರ ಏಪ್ರಿಲ್ 1ರಂದು ಗ್ರಾಮ ಪಂಚಾಯಿತಿಗೆ ಕರ್ತವ್ಯಕ್ಕೆ ಹಾಜರಾಗಿದ್ದು, ದಿನಾಂಕ 2024ರ ಮಾರ್ಚ್ 16ರಿಂದಲೇ ಗ್ರಾಮ ಪಂಚಾಯಿತಿ ಹಾಜರಾತಿ ವಹಿಯಲ್ಲಿ ಸಹಿ ಮಾಡಿರುವುದು ಕಂಡು ಬಂದಿದ್ದು, ಸದರಿಯವರು ಕರ್ತವ್ಯಕ್ಕೆ ಹಾಜರಾದ ದಿನದ ಬದಲಾಗಿ, ಅದರ ಹಿಂದಿನಿಂದಲೇ ಹಾಜರಾಗಿರುವಂತೆ ಸಹಿ ಮಾಡಿರುವುದು ನಿಯಮ ಉಲ್ಲಂಘನೆಯಾಗಿದೆ. ಏಕೆಂದರೆ, ಈಗಾಗಲೇ ಪ್ರಭಾರದಲ್ಲಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೂಡ ಹಾಜರಾತಿ ವಹಿಯಲ್ಲಿ ಸಹಿ ಮಾಡಿರುವುದು ಕಂಡುಬಂದಿರುತ್ತದೆ. ಕರ್ತವ್ಯಕ್ಕೆ ಹಾಜರಾಗದ ದಿನಗಳಿಗೂ ಹಾಜರಾತಿ ದಾಖಲಿಸಿರುವುದು ಗಂಭೀರ ನಿಯಮ ಉಲ್ಲಂಘನೆಯೆಂದು ಪರಿಗಣಿಸಲಾಗಿದೆ.
ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ತೊರೆಯಬಾರದು ಎಂದು ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಮಾನತ್ತಿನಲ್ಲಿರುವ ಅವಧಿಯಲ್ಲಿ ನಿಯಮಾನುಸಾರ ಜೀವನೋಪಾಯ ಭತ್ಯೆ (Subsistence Allowance) ಪಡೆಯಲು ಇವರು ಅರ್ಹರಿರುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳ ತನಿಖಾ ತಂಡ ನೀಡಿದ ವರದಿಯನ್ನಾಧರಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮಗಳು-1957ರ ಅಡಿಯಲ್ಲಿ ಈ ಶಿಸ್ತು ಕ್ರಮ ಜರುಗಿಸಲಾಗಿದೆ.





