“ಸರ್ಕಾರ ಮತ್ತು ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಪ್ರಜೆಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಹಳ್ಳಿಗಳನ್ನು ನಗರಸಭೆಗೆ ಸೇರಿಸುವ ಹಠಕ್ಕೆ ಬಿದ್ದರೆ ಜನರ ಆಕ್ರೋಶದ ಎದುರು ತಕ್ಕ ಬೆಲೆ ತೆರಬೇಕಾಗುತ್ತದೆ” ಎಂದು ರೈತ ಸಂಘದ ಹಿರಿಯ ಹೋರಾಟಗಾರ್ತಿ ಸುನಂದಮ್ಮ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಮದ್ದೂರು ಪಟ್ಟಣದಲ್ಲಿ ಫೆ.12ರ ಗುರುವಾರ ಸಂಜೆ ನಡೆದ ಪಂಜಿನ ಮೆರವಣಿಗೆಯ ನೇತೃತ್ವ ವಹಿಸಿ ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿರುವುದನ್ನು ಖಂಡಿಸಿ, ಉಭಯ ಗ್ರಾಮಗಳ ಗ್ರಾಮಸ್ಥರು ಮದ್ದೂರು ಪಟ್ಟಣದಲ್ಲಿ ನಡೆಸಿದ ಬೃಹತ್ ಪಂಜಿನ ಮೆರವಣಿಗೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಶಿವಪುರದ ಐತಿಹಾಸಿಕ ಧ್ವಜ ಸತ್ಯಾಗ್ರಹ ಸೌಧದಿಂದ ಆರಂಭವಾದ ಈ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಐಬಿ ವೃತ್ತದವರೆಗೆ ಸಾಗಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಗ್ರಾಮಸ್ಥರು, ಕೈಯಲ್ಲಿ ಪಂಜುಗಳನ್ನು ಹಿಡಿದು ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.


ಸರ್ಕಾರ, ಜಿಲ್ಲಾಡಳಿತ ಮತ್ತು ಕ್ಷೇತ್ರದ ಶಾಸಕರು ಜನರ ವಿರೋಧವಿದ್ದರೂ ಬಲವಂತವಾಗಿ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡುತ್ತಿರುವುದು ಅನ್ಯಾಯ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು.
ಈ ಚಳವಳಿಯು ಈಗಾಗಲೇ 50 ದಿನಗಳನ್ನು ಪೂರೈಸಿದೆ. ರಸ್ತೆ ತಡೆ ಸೇರಿದಂತೆ ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಈಗ ಪಂಜಿನ ಮೆರವಣಿಗೆಯ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. “ನಮಗೆ ಸುಂದರವಾದ ಮೇಕಪ್ನಿಂದ ಕೂಡಿದ ಅಥವಾ ಆಧುನಿಕ ಆಡಂಬರದ ನಗರ ಜೀವನ ಬೇಡ. ನಾವು ಹಳ್ಳಿಯ ಬದುಕಿನಲ್ಲಿ ಸಂತೋಷವಾಗಿದ್ದೇವೆ, ಹಳ್ಳಿಗಳು ಹಳ್ಳಿಗಳಾಗಿಯೇ ಉಳಿಯಲಿ” ಎಂದು ಅವರು ಭಾವನಾತ್ಮಕವಾಗಿ ನುಡಿದರು.
ಇದನ್ನೂ ಓದಿ: ಮಂಡ್ಯ | ಮೈಶುಗರ್ ಭ್ರಷ್ಟಾಚಾರ; ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ರೈತ ಸಂಘ
ಗಾಂಧೀಜಿ ಅವರ ಮಾರ್ಗದಲ್ಲೇ ನಾವು ಈ ಹೋರಾಟವನ್ನು ನಡೆಸುತ್ತಿದ್ದೇವೆ. ಪಟ್ಟಣದ ಧ್ವಜ ಸತ್ಯಾಗ್ರಹ ಸೌಧದಿಂದ ಐಬಿ ವೃತ್ತದವರೆಗೆ ನಡೆಯುವ ಈ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹೋರಾಟಗಾರರು ಶಿಸ್ತು ಕಾಪಾಡಿ ಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸುನಂದಮ್ಮ ಅವರ ಭಾಷಣದ ನಂತರ, “ಪಂಚಾಯಿತಿ ಉಳಿಯಲಿ, ನಗರಸಭೆ ತೊಲಗಲಿ” ಎಂಬ ಘೋಷಣೆಗಳೊಂದಿಗೆ ಮೆರವಣಿಗೆ ಮುಂದುವರಿಯಿತು. ಹೋರಾಟಕ್ಕೆ ಜಯವಾಗಲಿ ಎಂಬ ಒಕ್ಕೊರಲ ದನಿಯೊಂದಿಗೆ ಗ್ರಾಮಸ್ಥರು ಪಂಜಿನ ಬೆಳಕಿನಲ್ಲಿ ತಮ್ಮ ಹಕ್ಕೊತ್ತಾಯ ಮಂಡಿಸಿದರು.





