ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿರುವ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಆಫ್ ಮೈಸೂರಿನ ಅಧ್ಯಕ್ಷ ಮತ್ತಿಘಟ್ಟ ವಾಸು ತಿಳಿಸಿದ್ದಾರೆ.
ಕೆ.ಆರ್ ಪೇಟೆ ತಾಲೂಕಿನ ಮಡವಿನಕೋಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು, ಚಿರಾಗ್ ಮೋಟಾರ್ಸ್ ಸಹಯೋಗದಲ್ಲಿ ನೆಡೆದ ವಾಕ್ (ಮಾತು), ಶ್ರವಣ (ಕಿವಿ), ಕಣ್ಣು ಹಾಗೂ ದಂತ(ಹಲ್ಲು) ದೋಷಗಳ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಈಗಿನ ಕಾಲಘಟ್ಟದಲ್ಲಿ ಮನುಷ್ಯ ತಮ್ಮ ಒತ್ತಡದ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆಗಳಿಗಗೆ ತುತ್ತಾಗುತ್ತಾರೆ. ಕಾಲ ಕಾಲಕ್ಕೆ ತಪಾಸಣೆ ಹಾಗೂ ವೈದ್ಯರ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಗುಣಪಡಿಸಬಹುದು. ಗ್ರಾಮಾಂತರ ಭಾಗದ ಜನರಿಗೆ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಇಂತಹ ಉಪಯುಕ್ತ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಆ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ” ಎಂದು ಹೇಳಿದರು.
ಶಿಬಿರದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ ಲೋಕೇಶ್, “ಮನುಷ್ಯನಿಗೆ ಆರೋಗ್ಯವೇ ಮುಖ್ಯ. ನಮ್ಮ ಪೂರ್ವಜರ ದಿನಗಳಲ್ಲಿ ವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ” ಎಂದರು.
ಆರೋಗ್ಯ ಶಿಬಿರದಲ್ಲಿ ಮಡುವಿನಕೊಡಿ ಪ್ರಾಥಮಿಕ ಅರೋಗ್ಯ ಕೇಂದ್ರ ಡಾ. ವಿಶ್ವನಂದ್, ಲಯನ್ ಮಹಾದೇವ ಮೂರ್ತಿ,ಲಯನ್ ಡಾ. ರವಿ ಕಿರಣ್, ಲಯನ್ ಪುಟ್ಟಸ್ವಾಮಿ ಗೌಡ, ಲಯನ್ ಕಾಳಯ್ಯ, ಲಯನ್ ಮೇಲ್ವಿನ್, ಲಯನ್ ಶಿವಕುಮಾರ್, ಲಯನ್ ಡಿ ಪಿ ಪ್ರಕಾಶ್, ಕೆ.ಎಸ್ ಪ್ರಕಾಶ್ ಜೈಕುಮಾರ್, ಡಾ. ಎಸ್ ಆರ್ ಚಂದ್ರಶೇಖರ ಬೆಂಗಳೂರು, ವಾಕ್ ಮತ್ತು ಶ್ರಾವಣ ಸಂಸ್ಥೆ ಸೇರಿದಂತೆ ಉಪಸ್ಥಿತರಿದ್ದರು.




