ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿ ಪಡೆಯುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಡೆಸುತ್ತಿರುವ ಆರೋಪ-ಪ್ರತ್ಯಾರೋಪಗಳನ್ನು ತೀವ್ರ ಖಂಡನೀಯ. ಜಿಲ್ಲೆಯ ನಿರುದ್ಯೋಗಿ ಯುವಜನರ ಭವಿಷ್ಯದ ಜತೆ ರಾಜಕೀಯ ಮಾಡುವುದನ್ನು ಬಿಟ್ಟು, ಕೈಗಾರಿಕೆ ಸ್ಥಾಪನೆಯ ಕುರಿತು ನಿರ್ದಿಷ್ಟ ಮಾಹಿತಿಯನ್ನು ಜನರ ಮುಂದಿಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಒತ್ತಾಯಿಸಿದೆ.
ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ ಎಲ್ ಕೃಷ್ಣೇಗೌಡ, ಎನ್ ಎಲ್ ಭರತ್ರಾಜ್, ಬಿ ಹನುಮೇಶ್ ಮತ್ತು ಚಂದ್ರಶೇಖರ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಜಿಲ್ಲೆಯ ಯುವಜನತೆ ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಈ ವೇಳೆ ಸಾರ್ವಜನಿಕ ವಲಯದಲ್ಲಿ ಆಧುನಿಕ ತಂತ್ರಜ್ಞಾನದ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶ ನೀಡುವ ಕೆಲಸವಾಗಬೇಕಿದೆ” ಎಂದರು.
“ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೇವಲ ರಾಜಕೀಯ ಭಾಷಣ ಮಾಡದೆ, ಯಾವ ಕಂಪನಿ ಬರಲಿದೆ? ಎಷ್ಟು ಬಂಡವಾಳ ಹೂಡಿಕೆಯಾಗಲಿದೆ? ಎಷ್ಟು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ? ಎಂಬ ನೀಲ ನಕ್ಷೆಯನ್ನು ಜನರ ಮುಂದೆ ಮಂಡಿಸಬೇಕು” ಎಂದು ಆಗ್ರಹಿಸಿದರು.
”ಈಗಾಗಲೇ ಇರುವ ಕೆಐಎಡಿಬಿ(KIADB) ನಿವೇಶನಗಳಲ್ಲಿ ಕೈಗಾರಿಕೆ ಆರಂಭಿಸಲಾಗುವುದೇ ಅಥವಾ ಹೊಸದಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದೇ ಎಂಬ ಬಗ್ಗೆ ಸ್ಪಷ್ಟತೆ ನೀಡಬೇಕು” ಎಂದು ಒತ್ತಾಯಿಸಿದರು.
ಜವಾಬ್ದಾರಿಯುತ ರಾಜಕಾರಣ: ʼರಾಜ್ಯ ಸರ್ಕಾರ ಭೂಮಿ ನೀಡುತ್ತಿಲ್ಲʼವೆಂಬ ಕೇಂದ್ರದ ಆರೋಪ ಮತ್ತು ʼಯಾವುದೇ ಪ್ರಸ್ತಾವನೆ ಬಂದಿಲ್ಲʼವೆಂಬ ರಾಜ್ಯದ ಪ್ರತ್ಯಾರೋಪಗಳ ನಡುವೆ ಜಿಲ್ಲೆಯ ಅಭಿವೃದ್ಧಿ ಬಲಿಯಾಗಬಾರದು ಎಂದರು.
ಸಾರಿಗೆ ವ್ಯವಸ್ಥೆ ಖಾಸಗೀಕರಣಕ್ಕೆ ವಿರೋಧ: “ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಗುಪ್ತ ಕಾರ್ಯಸೂಚಿಯನ್ನು ಸಿಪಿಐಎಂ ವಿರೋಧಿಸಿದೆ. ಹೊಸ ವಿದ್ಯುತ್ ಬಸ್ ಖರೀದಿಸಲು ನೀಡಲಾಗುತ್ತಿರುವ ₹2,000 ಕೋಟಿ ಸಬ್ಸಿಡಿಯನ್ನು ಟಾಟಾ, ವೋಲ್ವೋದಂತಹ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ ಘರ್ಷಣೆ ತನಿಖೆಗೆ ಗೃಹ ಸಚಿವ ಜಿ. ಪರಮೇಶ್ವರ ಸೂಚನೆ
“ಈ ಹಣವನ್ನು ನೇರವಾಗಿ ಸರ್ಕಾರಿ ಸಾರಿಗೆ ನಿಗಮಗಳಿಗೆ ನೀಡಿದರೆ, ಸಾರಿಗೆ ವ್ಯವಸ್ಥೆ ಉತ್ತಮಗೊಳ್ಳುವುದಲ್ಲದೆ ಕಾಯಂ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಜನವಿರೋಧಿ ಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು” ಎಂದು ಸಮಿತಿ ಆಗ್ರಹಿಸಿದೆ.





