ಪ್ರಜಾಪ್ರಭುತ್ವದ ಅಡಿಪಾಯ ಎನಿಸಿಕೊಂಡಿರುವ ಗ್ರಾಮ ಪಂಚಾಯಿತಿಯ ನಿರ್ಣಯಗಳಲ್ಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜೂಜಾಡುತ್ತಿದ್ದಾರೆಯೇ? ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರಿಸುವ ವಿಚಾರದಲ್ಲಿ ನಡೆದಿರುವ ವಿದ್ಯಮಾನಗಳು ಇಂತಹದೊಂದು ಗಂಭೀರ ಸಂಶಯಕ್ಕೆ ಎಡೆಮಾಡಿಕೊಟ್ಟಿವೆ. ನಾಲ್ಕು ಸಭೆಗಳಲ್ಲಿ ಮೂರು ಬಾರಿ ‘ಬೇಡ’ವೆಂದರೂ ಕೇವಲ ಒಂದು ಸಭೆಯ ಅಸ್ಪಷ್ಟ ನಿರ್ಣಯವನ್ನು ಮುಂದಿಟ್ಟುಕೊಂಡು ಜನರ ಹಿತವನ್ನು ಬಲಿ ಕೊಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರು ನಗರಸಭೆಗೆ ಗೆಜ್ಜೆಲಗೆರೆ ಗ್ರಾಮ ಸೇರ್ಪಡೆ ಕೈಬಿಡುವಂತೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪ್ರತಿಭಟನಾಕಾರರು ಮಾತನಾಡಿದರು.
ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರಿಸುವ ಸರ್ಕಾರದ ಪ್ರಸ್ತಾವನೆಯ ಸುತ್ತ ಈಗ ದೊಡ್ಡಮಟ್ಟದ ಕಾನೂನು ಮತ್ತು ನೈತಿಕ ಸಂಘರ್ಷ ಆರಂಭವಾಗಿದೆ. ಪಂಚಾಯಿತಿಯ ಸಾಮಾನ್ಯ ಸಭೆಯ ನಡವಳಿಕೆಗಳಲ್ಲಿನ ಗಂಭೀರ ಲೋಪದೋಷಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿಯುತ ನಡೆ ಈಗ ಹೈಕೋರ್ಟ್ ಮೆಟ್ಟಿಲೇರಿದೆ.
ಗ್ರಾಮ ಪಂಚಾಯಿತಿಯ ಸಭೆಯ ನಡವಳಿಕೆ ಪುಸ್ತಕದಲ್ಲಿ(Minutes Book) ದಾಖಲಾಗಿರುವ ವೈರುಧ್ಯದ ಅಂಶಗಳು ಸ್ವತಃ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯ ಆಶಯಗಳನ್ನು ಗಾಳಿಗೆ ತೂರಲಾಗಿದೆ ಎನ್ನುವುದಕ್ಕೆ ಎರಡನೇ ಸಾಮಾನ್ಯ ಸಭೆಯ ಅಂಶಗಳೇ ಸಾಕ್ಷಿ.
ಎರಡನೇ ಸಾಮಾನ್ಯ ಸಭೆಯ ನಡಾವಳಿಯಲ್ಲಿ ವೈರುಧ್ಯದ ಅಂಶ ದಾಖಲಿಸಲಾಗಿದೆ ಎನ್ನುವುದು ಗ್ರಾಮಸ್ಥರ ಆರೋಪ. ಪಂಚಾಯಿತಿಯ ದಾಖಲೆಗಳಲ್ಲಿ ಒಂದು ಕಡೆ ʼಗೆಜ್ಜಲಗೆರೆ ಪಂಚಾಯಿತಿಯನ್ನು ನಗರಸಭೆಗೆ ಸೇರಿಸುವ ಪ್ರಸ್ತಾವನೆಗೆ ವಿರೋಧವಿದೆʼ ಎಂದು ನಮೂದಿಸಿದ್ದರೆ, ಮತ್ತೊಂದು ಕಡೆ ʼನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಅಭಿವೃದ್ಧಿ ದೃಷ್ಟಿಯಿಂದ ಸಭೆಯು ತೀರ್ಮಾನಿಸಿದೆʼ ಎಂದು ದಾಖಲಿಸಲಾಗಿದೆ. ಈ ಪರಸ್ಪರ ವಿರೋಧಾಭಾಸದ ನಿರ್ಣಯಗಳಿಗೆ ಅಧಿಕಾರಿಗಳು ಹಾಗೂ ಕೆಲವು ಸದಸ್ಯರು ಯಾರೋ ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದಾರೆಯೇ ಎಂಬ ಅನುಮಾನ ಮೂಡಿಸಿವೆ.
ಒಟ್ಟು ನಾಲ್ಕು ಸಾಮಾನ್ಯ ಸಭೆಗಳಲ್ಲಿ ಮೂರು ಸಭೆಗಳು(1, 3 ಮತ್ತು 4ನೇ ಸಭೆ) ನಗರಸಭೆಗೆ ಸೇರುವುದನ್ನು ಕಟುವಾಗಿ ವಿರೋಧಿಸಿವೆ. ಆದರೆ, ಎರಡನೇ ಸಾಮಾನ್ಯ ಸಭೆಯಲ್ಲಿ ಯಾವುದೇ ಪೂರ್ವಭಾವಿ ‘ಅಜೆಂಡಾ’ ಇಲ್ಲದಿದ್ದರೂ, ಅಧ್ಯಕ್ಷರ ಒಪ್ಪಿಗೆಯ ಹೆಸರಿನಲ್ಲಿ ಕೇವಲ ಒಂದು ಸಾಲಿನ ನಿರ್ಣಯ ಬರೆದು ʼಅಭಿವೃದ್ಧಿ ದೃಷ್ಟಿಯಿಂದ ಒಪ್ಪಿಗೆ ನೀಡಲಾಗಿದೆʼ ಎಂದು ದಾಖಲಿಸಿರುವುದು ಕಾನೂನುಬಾಹಿರ ಎನ್ನಲಾಗಿದೆ.
ಇಲ್ಲಿ ಸ್ಪಷ್ಟವಾಗಿ ಪಂಚಾಯತ್ ರಾಜ್ ಕಾಯಿದೆಯ ಉಲ್ಲಂಘನೆಯಾಗಿದೆ. ಕಾಯಿದೆಯ ಸೆಕ್ಷನ್ 2(101)ರ ಅಡಿಯಲ್ಲಿ ಸಭೆಯ ಪ್ರತಿ ಚರ್ಚೆ ಮತ್ತು ಸದಸ್ಯರ ಅಭಿಪ್ರಾಯಗಳನ್ನು ಪಾರದರ್ಶಕವಾಗಿ ದಾಖಲಿಸುವುದು ಪಿಡಿಒ(PDO) ಅವರ ಶಾಸನಬದ್ಧ ಕರ್ತವ್ಯ. ಆದರೆ, ಗೆಜ್ಜಲಗೆರೆ ಪ್ರಕರಣದಲ್ಲಿ ಯಾವುದೇ ಚರ್ಚೆಯ ವಿವರ ನೀಡದೆ ಕೇವಲ ನಿರ್ಣಯಿಸಲಾಯಿತು ಎಂದು ಬರೆದಿರುವುದು ಪಾರದರ್ಶಕತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
”ಕಳೆದ 15 ದಿನಗಳಿಂದ ಗೆಜ್ಜಲಗೆರೆಯ ಗ್ರಾಮಸ್ಥರು ಪಕ್ಷಭೇದ ಮರೆತು ಬೀದಿಗಿಳಿದಿದ್ದಾರೆ. ‘ನಮ್ಮ ಗ್ರಾಮದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮತ್ತು ನಗರಸಭೆಯ ಹೆಸರಿನಲ್ಲಿ ಆಗುವ ತೆರಿಗೆ ಹೊರೆಯಿಂದ ತಪ್ಪಿಸಿಕೊಳ್ಳಲು ನಾವು ಬದ್ಧ’ ಎಂಬುದು ಗ್ರಾಮಸ್ಥರ ಒಕ್ಕೊರಲ ಧ್ವನಿ. ಗೆಜ್ಜಲಗೆರೆಯನ್ನು ನಗರಸಭೆ ವ್ಯಾಪ್ತಿಯಿಂದ ಕೈಬಿಡುವವರೆಗೂ ಧರಣಿ ಮತ್ತು ಕಾನೂನು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ಗ್ರಾಮದ ಹೋರಾಟವನ್ನು ಯಾವುದೇ ಮಾಧ್ಯಮಗಳು ಸರಿಯಾಗಿ ಸುದ್ದಿ ಮಾಡದೆ ಕತ್ತಲಿನಲ್ಲಿ ಇಟ್ಟಿರುವ ಮಾಧ್ಯಮಗಳ ದೋರಣೆಗಳು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ಮೆಟ್ಟಿಲೇರಲಿರುವ ಗ್ರಾಮಸ್ಥರು ಐದನೇ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ನಡವಳಿಕೆಗಳಲ್ಲಿನ ಈ ಲೋಪದೋಷಗಳನ್ನು ಹಾಗೂ ಜನರ ಇಚ್ಛೆಗೆ ವಿರುದ್ಧವಾಗಿರುವ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(PIL) ಅಧ್ಯಕ್ಷರ ಹೆಸರಿನಲ್ಲಿ ಗ್ರಾಮಸ್ಥರು ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗೆಜ್ಜಲಗೆರೆ ನಗರಸಭೆಗೆ ಸೇರ್ಪಡೆ: ಜನರ ಆಶೋತ್ತರದ ವಿರುದ್ಧ ನಿರ್ಣಯಕ್ಕೆ ಸುನಂದಮ್ಮ ಜಯರಾಮ್ ಆಕ್ರೋಶ
“ನಾಲ್ಕೂ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿರುವ ನಿರ್ಣಯವನ್ನು ತಡೆಹಿಡಿಯುವ, ಅಸ್ಪಷ್ಟ ಮತ್ತು ವಿರೋಧಾಭಾಸದ ನಿರ್ಣಯಗಳನ್ನು ರದ್ದುಪಡಿಸುವ ಅಧಿಕಾರ ಸರ್ಕಾರಕ್ಕಿದೆ. ಈ ಕೂಡಲೇ ಮುಖ್ಯಮಂತ್ರಿಗಳಾದ ಸಿದ್ದರಾಮ್ಯಯ್ಯರವರು ಮಧ್ಯಪ್ರವೇಶಿಸಿ, ನಡವಳಿಕೆ ಪುಸ್ತಕದಲ್ಲಿನ ಲೋಪದೋಷಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ನಮ್ಮೂರಿನ ಭವಿಷ್ಯವನ್ನು ನಿರ್ಧರಿಸುವ ಅಧಿಕಾರ ನಮಗಿರಲಿ, ಅಧಿಕಾರಿಗಳ ಕಾಗದದ ಕೈಚಳಕಕ್ಕಲ್ಲ” ಎಂದು ನಿರಂತರ ಧರಣಿ ನಿರತ ಗ್ರಾಮಸ್ಥರು ಘೋಷಣೆ ಕೂಗುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವರದಿ : ಜಗದೀಶ್ ನಗರಕೆರೆ





