ಮಂಡ್ಯ ನಗರದ ಶುಚಿತ್ವಕ್ಕಾಗಿ ತನ್ನ ಬದುಕಿನ 35 ವರ್ಷಗಳನ್ನು ಮುಡಿಪಾಗಿಟ್ಟ ಪೌರಕಾರ್ಮಿಕರೊಬ್ಬರು ನಿವೃತ್ತಿಯಾದಾಗ ಅವರ ಕೈಯಲ್ಲಿ ಒಂದು ರೂಪಾಯಿ ಉಳಿತಾಯವೂ ಇಲ್ಲದ, ಭವಿಷ್ಯದ ಭದ್ರತೆಯೂ ಇಲ್ಲದ ಸ್ಥಿತಿಯಲ್ಲಿ ಬೀಳ್ಕೊಡುತ್ತಿರುವುದು ನಮ್ಮ ವ್ಯವಸ್ಥೆಯ ಅತಿದೊಡ್ಡ ದುರಂತ ಎಂದು ಪೌರಕಾರ್ಮಿಕ ಸಂಘಟನೆಯ ಮುಖಂಡ ನಾಗಣ್ಣ ಎಂ ಬಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಡ್ಯ ನಗರಸಭೆಯ ಪೌರಕಾರ್ಮಿಕ ಮಹಾದೇವ ಅವರ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರಕಾರ್ಮಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟಿದ್ದು, “ಹಣಕಾಸು ಭದ್ರತೆಯ ಕೊರತೆ ಮತ್ತು ತಾರತಮ್ಯ ಪೌರಕಾರ್ಮಿಕರಲ್ಲಿ ನೇರ ಪಾವತಿ, ಹೊರಗುತ್ತಿಗೆ ಮತ್ತು ಕಾಯಂ ಎಂಬ ವಿಭಜನೆಗಳು ಇವೆ” ಎಂದು ವಿವರಿಸಿದರು.
“ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ನಿವೃತ್ತ ಪೌರಕಾರ್ಮಿಕರಿಗೆ 10 ಲಕ್ಷ ರೂಪಾಯಿ ಇಡುಗಂಟು ನೀಡುವ ನಿಯಮವಿದೆ. ಆದರೆ ನಗರಸಭೆ ಮತ್ತು ಪುರಸಭೆಗಳಲ್ಲಿ ʼಹಣಕಾಸು ಸಂಪನ್ಮೂಲದ ಕೊರತೆʼ ಎಂಬ ನೆಪವೊಡ್ಡಿ ಈ ಸೌಲಭ್ಯವನ್ನು ನಿರಾಕರಿಸಲಾಗುತ್ತಿದೆ. 35 ವರ್ಷ ದುಡಿದ ಕಾರ್ಮಿಕನಿಗೆ ನಿವೃತ್ತಿಯ ನಂತರ ಬದುಕು ಸಾಗಿಸಲು ಯಾವುದೇ ನಿವೃತ್ತಿ ವೇತನ ಅಥವಾ ಹಣಕಾಸು ನೆರವು ಇಲ್ಲದಿರುವುದು ಶೋಚನೀಯ” ಎಂದರು.
”ಅನಾರೋಗ್ಯದ ಕಪಿಮುಷ್ಟಿಯಲ್ಲಿ ಕುಟುಂಬಗಳು ಶುಚಿತ್ವದ ಕೆಲಸ ಮಾಡುವ ಕಾರ್ಮಿಕರು ಗಂಭೀರ ಆರೋಗ್ಯ ತೊಡಕುಗಳಿಗೆ ತುತ್ತಾಗುತ್ತಿದ್ದಾರೆ. ಉದಾಹರಣೆಗೆ, ಗೋವಿಂದಪ್ಪ ಎಂಬ ಕಾರ್ಮಿಕರು ‘ಡ್ರೈ ಗ್ಯಾಂಗ್ರಿನ್’ನಿಂದ ಕಾಲು ಕಳೆದುಕೊಂಡರೆ, ಸೌಮ್ಯ ಎಂಬ ಕಾರ್ಮಿಕ ಮಹಿಳೆಯ ಎರಡು ಕಿಡ್ನಿಗಳು ವೈಫಲ್ಯಗೊಂಡಿವೆ. ಇಂತಹ ಸಂದರ್ಭಗಳಲ್ಲಿ ಇವರಿಗೆ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡುವ ‘ಕ್ಯಾಶ್ಲೆಸ್ ಟ್ರೀಟ್ಮೆಂಟ್’ ಸೌಲಭ್ಯವನ್ನು ಸರ್ಕಾರ ಈವರೆಗೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ” ಎಂದು ಪೌರಕಾರ್ಮಿಕರ ಬದುಕಿನ ಭೀಕರತೆಯನ್ನು ಬಿಚ್ಚಿಟ್ಟರು.
”ಅನುಕಂಪದ ಆಧಾರಿತ ಉದ್ಯೋಗದ ಬೇಡಿಕೆ ಸೇವೆಯಲ್ಲಿರುವಾಗಲೇ ಮೃತಪಟ್ಟ ಅಥವಾ ಗಂಭೀರ ಕಾಯಿಲೆಯಿಂದ ಕೆಲಸ ಮಾಡಲು ಅಶಕ್ತರಾದ ಪೌರಕಾರ್ಮಿಕರ ಅವಲಂಬಿತ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ತಕ್ಷಣ ಉದ್ಯೋಗ ನೀಡಬೇಕು. ಇದು ಕೇವಲ ಬೇಡಿಕೆಯಲ್ಲ, ಆ ಕುಟುಂಬಗಳ ಬದುಕಿನ ಹಕ್ಕಾಗಿದೆ” ಎಂದು ನಾಗಣ್ಣ ಒತ್ತಾಯಿಸಿದರು.
”ಯಾಂತ್ರೀಕರಣದ ನಡುವೆ ಮನುಷ್ಯನ ಬೆವರು ಸ್ವಚ್ಛತೆಯಲ್ಲಿ ನಗರ ಮೊದಲ ಸ್ಥಾನ ಪಡೆಯಿತು ಎಂದರೆ ಅದಕ್ಕೆ ಯಂತ್ರಗಳಿಗಿಂತ ಪೌರಕಾರ್ಮಿಕರ ಶ್ರಮವೇ ಕಾರಣ. ನಾವು ಚಂದ್ರಯಾನ, ಸೂರ್ಯಯಾನ ಮಾಡುತ್ತಿದ್ದೇವೆ. ಆದರೆ ನಮ್ಮ ನಗರಗಳನ್ನು ಗುಡಿಸುವ ಕಾರ್ಮಿಕನ ಬದುಕಿನಲ್ಲಿ ಬೆಳಕು ತರಲು ವಿಫಲವಾಗಿದ್ದೇವೆ” ಎಂದು ವಿಷಾದಿಸಿದರು.
ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಕರೆ
”ಕಸದ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಪ್ಲಾಸ್ಟಿಕ್ ನಿಷೇಧ. ಮಾರುಕಟ್ಟೆ ಮತ್ತು ಮಾಂಸದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಸಾರ್ವಜನಿಕರು ಕಸ ಎಸೆಯುವುದನ್ನು ತಡೆಯಲು ದಂಡ ವಿಧಿಸುವ ಮತ್ತು ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ‘ಪುತ್ತೂರು ಮಾದರಿ’ಯನ್ನು ಜಾರಿಗೆ ತರಬೇಕು” ಎಂದು ಅವರು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗೆಜ್ಜಲಗೆರೆ ಪಂಚಾಯಿತಿಯಲ್ಲಿ ‘ನಡಾವಳಿ’ ಗೋಲ್ಮಾಲ್: ಜನರ ಆಶಯಕ್ಕೆ ಕೊಡಲಿ ಪೆಟ್ಟು
ನಗರದ ಆರೋಗ್ಯ ಕಾಪಾಡುವ ಈ ʼಆರೋಗ್ಯ ರಕ್ಷಕರಿಗೆʼ ಸರ್ಕಾರ ತಾರತಮ್ಯವಿಲ್ಲದೆ ಕನಿಷ್ಠ 10 ಲಕ್ಷ ರೂಪಾಯಿ ನಿವೃತ್ತಿ ಇಡುಗಂಟು, ಪೆನ್ಷನ್ ಮತ್ತು ಕಾಯಂ ಉದ್ಯೋಗದ ಭರವಸೆ ನೀಡಬೇಕಿದೆ. ಜನವರಿ ತಿಂಗಳಿನಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ಬದಲಾವಣೆ ತರುವ ಭರವಸೆ ನೀಡಿದರು.
ವರದಿ : ಜಗದೀಶ್ ನಗರಕೆರೆ





