ಮದ್ದೂರು ತಾಲೂಕಿನ ಗೆಜ್ಜಲಗೆರೆ ಸೇರಿದಂತೆ ಮೂರು ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆಗೆ ಸೇರಿಸುವ ಸರ್ಕಾರದ ಕ್ರಮವು ಸಂಪೂರ್ಣವಾಗಿ ಅವೈಜ್ಞಾನಿಕ ಮತ್ತು ನಿಯಮಬಾಹಿರವಾಗಿದೆ ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಗಂಭೀರವಾಗಿ ಆರೋಪಿಸಿದರು.
ಮಂಡ್ಯದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಯಲ್ಲಿ ಮದ್ದೂರು ಶಾಸಕರ ನಡೆ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಉಲ್ಲಂಘನೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
”ಮದ್ದೂರು ಶಾಸಕರು ಚಾಮನಹಳ್ಳಿ, ಸೋಮನಹಳ್ಳಿ, ಗೊರವನಹಳ್ಳಿ ಮತ್ತು ಗೆಜ್ಜಲಗೆರೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ, ಏಕಪಕ್ಷೀಯವಾಗಿ ಈ ಭಾಗಗಳನ್ನು ನಗರಸಭೆಗೆ ಸೇರಿಸಲು ಮುಂದಾಗಿದ್ದಾರೆ. ಈ ನಡೆ ಅಬ್ದುಲ್ ನಜೀರ್ ಸಾಬ್ ಮತ್ತು ಗಾಂಧೀಜಿಯವರ ‘ಪಂಚಾಯತ್ ರಾಜ್’ ಕನಸಿಗೆ ತಂದಿರುವ ಧಕ್ಕೆ” ಎಂದು ದೂರಿದರು.
”ಗ್ರಾಮ ಪಂಚಾಯಿತಿಗಳ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಯಾವುದೇ ಕಾರ್ಯಸೂಚಿ ಮಂಡಿಸಿಲ್ಲ. ಗ್ರಾಮಸ್ಥರು ಮತ್ತು ಪಂಚಾಯಿತಿ ಸದಸ್ಯರ ಹಕ್ಕು ಚ್ಯುತಿ ಮಾಡಲಾಗುತ್ತಿದೆ. ನಗರೀಕರಣದ ಹೆಸರಿನಲ್ಲಿ ತಾಲೂಕಿನ ‘ಹಸಿರು ವಲಯ’ವನ್ನು(Green Zone) ಸರ್ವನಾಶ ಮಾಡಲು ಸಂಚು ರೂಪಿಸಲಾಗಿದೆ” ಎಂದು ಸುನಂದಾ ಜಯರಾಂ ಆಕ್ಷೇಪಿಸಿದರು.
”ಈಗಾಗಲೇ ಈ ನಿರ್ಧಾರದ ವಿರುದ್ಧ ತಾಲೂಕು ಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದು, ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಲಾಗಿದೆ. ʼಗೆಜ್ಜಲಗೆರೆ ಗ್ರಾ.ಪಂ ಕಚೇರಿ ಎದುರು ಕಳೆದ 18 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದರೂ ಶಾಸಕರು ನೀಡಿದ್ದ ಭರವಸೆ ಈಡೇರಿಲ್ಲ. ಅವರು ಮಾತಿಗೆ ತಪ್ಪಿರುವುದು ಖಂಡನೀಯ. ಅಭಿವೃದ್ಧಿಯ ಹೆಸರಿನಲ್ಲಿ ಹಳ್ಳಿಗಳನ್ನು ನಾಶಮಾಡಿ ಜನರಿಗೆ ದ್ರೋಹ ಮಾಡುತ್ತಿರುವ ಈ ನಗರೀಕರಣದ ವಿರುದ್ಧ ಚಳವಳಿ ಅನಿವಾರ್ಯವಾಗಿದೆ” ಎಂದು ಅವರು ಎಚ್ಚರಿಸಿದರು.
ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ ಎಸ್ ರಾಧ ಮಾತನಾಡಿ, “ನಮ್ಮ ಪಂಚಾಯಿತಿಯು ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಬಲವಂತವಾಗಿ ನಗರಸಭೆಗೆ ಸೇರಿಸುವುದರಿಂದ ಸ್ಥಳೀಯ ಆಡಳಿತದ ಹಕ್ಕುಗಳಿಗೆ ಧಕ್ಕೆಯಾಗುತ್ತದೆ. 18 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಮೌನವಾಗಿರುವುದು ಖೇದಕರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದೊಡ್ಡಬಳ್ಳಾಪುರ | ಒಂದೇ ಕಾಮಗಾರಿಗೆ ಎರಡು ಬಾರಿ ಗುದ್ದಲಿಪೂಜೆ; ಸಚಿವ ಮುನಿಯಪ್ಪ ವಿರುದ್ಧ ಶಾಸಕ ಧೀರಜ್ ಗರಂ
ಮದ್ದೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಇ ಪಿ ಯೋಗೇಶ್ ಮಾತನಾಡಿ, “ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯು ಕೇವಲ ಒಂದು ಆಡಳಿತಾತ್ಮಕ ಘಟಕವಲ್ಲ, ಅದು ಸಾವಿರಾರು ಜನರ ಭಾವನೆ. ನಗರಸಭೆಗೆ ಸೇರ್ಪಡೆಯಾದರೆ ತೆರಿಗೆ ಹೊರೆ ಅಧಿಕವಾಗುತ್ತದೆ ಮತ್ತು ಹಳ್ಳಿಯ ಪರಿಸರ ನಾಶವಾಗುತ್ತದೆ. ಈ ನಿರ್ಧಾರವನ್ನು ಕೈಬಿಡುವವರೆಗೂ ನಮ್ಮ ಸತ್ಯಾಗ್ರಹ ಮುಂದುವರಿಯಲಿದೆ” ಎಂದು ತಿಳಿಸಿದರು.
ಗೆಜ್ಜಲಗೆರೆ ಗ್ರಾ.ಪಂ ಅಧ್ಯಕ್ಷೆ ಬಿ ಎಸ್ ರಾಧ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ ಸಂ ಮಹೇಂದ್ರ, ತಾ ಪಂ ಮಾಜಿ ಅಧ್ಯಕ್ಷ ಇ ಪಿ ಯೋಗೇಶ್, ಜಿ ಹೆಚ್ ವೀರಪ್ಪ, ಚಂದ್ರಶೇಖರ್, ಲಿಂಗಪ್ಪಾಜಿ ಮತ್ತು ಯಜಮಾನ್ ಶಂಕರಪ್ಪ ಇದ್ದರು.





