ವಿವೇಕಾನಂದರು ಅಂದು ಚಿಕಾಗೋದಲ್ಲಿ ನೀಡಿದ ‘ಸಹೋದರ ಸಹೋದರಿಯರೇ’ ಎಂಬ ಕರೆ ಇಂದು ನಮ್ಮ ಸಂವಿಧಾನದ ‘ಭ್ರಾತೃತ್ವ’ ಎಂಬ ಪದದಲ್ಲಿ ಅಡಗಿದೆ. ವಿವೇಕಾನಂದರು ಸನ್ಯಾಸತ್ವವೆಂದರೆ ಸರ್ವಸಂಗ ಪರಿತ್ಯಾಗಿಯೆಂದು ನಂಬಿದ್ದರು. ಅವರಿಗೆ ಆಹಾರ, ಜಾತಿ ಇಲ್ಲವೇ ಧರ್ಮದಲ್ಲಿ ಯಾವುದೇ ಭೇದ-ಭಾವವಿರಲಿಲ್ಲ ಎಂದು ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣ ತಾಲೂಕು ಸಂಚಾಲಕ ಸಿ ಎಸ್ ವೆಂಕಟೇಶ್ ಅಭಿಪ್ರಾಯಪಟ್ಟರು.
ʼಸರ್ವ ಜನಾಂಗದ ಶಾಂತಿಯ ತೋಟʼವೆಂದು ಕುವೆಂಪು ಅವರು ಬಣ್ಣಿಸಿದ ಕರ್ನಾಟಕದ ಪುಣ್ಯಭೂಮಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪ್ರಜ್ಞಾವಂತರ ವೇದಿಕೆಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯೋತ್ಸವದ ಆಚರಣೆಯಲ್ಲಿ ಮಾತನಾಡಿದರು.
“ಜಾತಿ ಮತ್ತು ಧರ್ಮಗಳ ನಡುವೆ ಕಂದಕ ಸೃಷ್ಟಿಸಿ, ಜನರನ್ನು ಎತ್ತಿಕಟ್ಟುವವರು ವಿವೇಕಾನಂದರ ತತ್ವಗಳಿಗೆ ವಿರೋಧಿಗಳು ಹಾಗೂ ದೇಶದ್ರೋಹಿಗಳು” ಎಂದು ಕಟುವಾಗಿ ಟೀಕಿಸಿದರು.
“ಇಂದಿನ ಕಾಲದ ಐಷಾರಾಮಿ ಬದುಕು ನಡೆಸುವ, ಆಸ್ತಿ ಮಾಡುವ ಸನ್ಯಾಸಿಗಳು ವಿವೇಕಾನಂದರ ಬದುಕನ್ನು ನೋಡಿ ಕಲಿಯಬೇಕು. ಸನ್ಯಾಸತ್ವ ಎಂದರೆ ಜನಸೇವೆಯೇ ಹೊರತು ಸ್ವಾರ್ಥವಲ್ಲ. ʼಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿʼ ಎಂಬ ವಿವೇಕಾನಂದರ ವಾಣಿಯಂತೆ ನಾವೆಲ್ಲರೂ ಭ್ರಾತೃತ್ವದಿಂದ ಬದುಕೋಣ” ಎಂದು ಕಿವಿಮಾತು ಹೇಳಿದರು.
ಗಂಜಾಂ ಅಬೆ ದುಬೆ ಚರ್ಚ್ನ ಧರ್ಮಾಧಿಕಾರಿ ಸಾಂಗೈ ಪುಷ್ಪರಾಜ್ ಮಾತನಾಡಿ, “1888ರಲ್ಲಿ ಭಾರತ ಪರ್ಯಟನೆಗೆ ಹೊರಟಾಗ ವಿವೇಕಾನಂದರು ತಮ್ಮೊಂದಿಗೆ ಕಮಂಡಲ, ದಂಡದ ಜತೆಗೆ ತಮಗೆ ಪ್ರಿಯವಾದ ಭಗವದ್ಗೀತೆ ಮತ್ತು ‘ದಿ ಇಮಿಟೇಶನ್ ಆಫ್ ಕ್ರೈಸ್ಟ್’ ಪುಸ್ತಕಗಳನ್ನು ಕೊಂಡೊಯ್ಯುತ್ತಿದ್ದರು. ಇದು ಅವರು ಧರ್ಮಗಳನ್ನು ಮೀರಿ ಪ್ರೀತಿ ಮತ್ತು ಮಾನವೀಯತೆಗೆ ನೀಡುತ್ತಿದ್ದ ಮಹತ್ವವನ್ನು ತೋರಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕುಶಾಲನಗರ | ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿ: ಟಿ ಜಿ ಪ್ರೇಮ್ ಕುಮಾರ್
ಈ ಸಂದರ್ಭದಲ್ಲಿ ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಫ್ಸರ್ ಖಾನ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ತಾಲೂಕು ಬೌದ್ಧ ಮಹಾಸಭಾದ ಮಾಜಿ ಅಧ್ಯಕ್ಷ ಕೆ ಟಿ ರಂಗಪ್ಪ, ಸಾಮಾಜಿಕ ಹೋರಾಟಗಾರ ಪಾಲಹಳ್ಳಿ ಪ್ರಸನ್ನ, ಆಂತೋನಿರಾಜ್, ಚಿಕ್ಕತಮೇಗೌಡ, ಗಂಜಾಂ ಆಯುಬ್, ದಾಸ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ವಿವಿಧ ಧರ್ಮಗಳ ಮುಖಂಡರು ಒಂದಾಗಿ ವಿವೇಕಾನಂದರ ಜಯಂತಿ ಆಚರಿಸುವ ಮೂಲಕ ಶ್ರೀರಂಗಪಟ್ಟಣದಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರಲಾಯಿತು.





