ಚಳಿಗಾಲದ ಈ ಕಠಿಣ ಸಮಯದಲ್ಲಿ ಪಾದಚಾರಿ ಮಾರ್ಗ ಹಾಗೂ ರಸ್ತೆಬದಿಯನ್ನೇ ನಂಬಿ ಬದುಕುತ್ತಿರುವ ನಿರಾಶ್ರಿತರಿಗೆ ನೆರವಾಗುವ ನಿಟ್ಟಿನಲ್ಲಿ, ಶೇಷಾದ್ರಿಪುರಂ ಇಂಜಿನಿಯರಿಂಗ್ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಶ್ರೀರಂಗಪಟ್ಟಣದ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಕಂಬಳಿ ಮತ್ತು ಉಣ್ಣೆ ಬಟ್ಟೆಗಳನ್ನು ವಿತರಿಸಲಾಯಿತು.
ಮಾನವೀಯತೆಯಿಂದ ಪಟ್ಟಣದಾದ್ಯಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿಯ ತೀವ್ರತೆಯಿಂದ ರಕ್ಷಿಸಿಕೊಳ್ಳಲು ಯಾವುದೇ ಆಸರೆಯಿಲ್ಲದ ಬಡವರಿಗೆ ಹಾಗೂ ಅಸಹಾಯಕರಿಗೆ ಬೆಚ್ಚಗಿನ ಹೊದಿಕೆಗಳನ್ನು ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎನ್ಎಸ್ಎಸ್ ಅಧಿಕಾರಿ ಡಾ. ರಾಘವೇಂದ್ರ, “ಸಾಮಾನ್ಯವಾಗಿ ಚಳಿಗಾಲದಲ್ಲಿ ಸಾವಿರಾರು ಜನರು ಸಾವನ್ನಪ್ಪುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವವಾಗಿ ಇದು ಕೇವಲ ಚಳಿಯಿಂದಲ್ಲ, ಬದಲಾಗಿ ಚಳಿಯನ್ನು ತಡೆದುಕೊಳ್ಳಲು ಅಗತ್ಯವಿರುವ ಬೆಚ್ಚಗಿನ ಬಟ್ಟೆ ಮತ್ತು ಹೊದಿಕೆಗಳ ಕೊರತೆಯಿಂದ ಸಂಭವಿಸುವ ಸಾವುಗಳಾಗಿವೆ. ಫುಟ್ಪಾತ್ ಮತ್ತು ರಸ್ತೆ ಬದಿಗಳಲ್ಲಿ ಹರಿದ ಬಟ್ಟೆಗಳನ್ನು ಹೊದ್ದು ಮಲಗುವ ವೃದ್ಧರು ಹಾಗೂ ಬಡವರು ರಾತ್ರಿಯಿಡೀ ತಣ್ಣನೆಯ ಗಾಳಿಗೆ ನಲುಗುತ್ತಾರೆ. ಅಂತಹವರ ಜೀವ ಉಳಿಸುವ ಸಣ್ಣ ಪ್ರಯತ್ನ ಇದಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ಶ್ರೀರಂಗಪಟ್ಟಣ | ‘ನ್ಯಾಯ’ ಪ್ರತಿಯೊಬ್ಬ ನಾಗರಿಕನ ಹಕ್ಕು: ಡಾ. ರಂಗಸ್ವಾಮಿ ಡಿ
“ಭಾರತದಂತಹ ದೇಶದಲ್ಲಿ ಇಂದಿಗೂ ಅನೇಕರು ಕನಿಷ್ಠ ಬಟ್ಟೆಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಟ್ಟೆ ದಾನ ಮಾಡುವುದು ಕೇವಲ ದಾನವಲ್ಲ, ಅದು ಹಿಂದುಳಿದವರ ಬದುಕಿಗೆ ಗೌರವ ನೀಡುವುದರ ಜೊತೆಗೆ ಮರುಬಳಕೆಯ ಪರಿಸರ ಸ್ನೇಹಿ ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಹಾಜರಿದ್ದು, ಸೇವೆಯಲ್ಲಿ ಪಾಲ್ಗೊಂಡರು.





