ಐಕ್ಯ ಅಲಯನ್ಸ್ ಸಂಸ್ಥೆಯ ವತಿಯಿಂದ ಹುತಾತ್ಮ ದಿನವನ್ನು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯ ನದಿ ತಟದಲ್ಲಿರುವ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಬಿಟ್ಟ ಸ್ಥಳದ ಸ್ಮಾರಕದಲ್ಲಿ ಪುಷ್ಪಾರ್ಚನೆ ಮೂಲಕ ಭಾವಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಐಕ್ಯ ಅಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಎನ್. ಸರಸ್ವತಿ, “ನನ್ನ ಜೀವನವೇ ನನ್ನ ಸಂದೇಶ” ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಪ್ರತಿಮ ನಾಣ್ಣುಡಿಯಾಗಿದ್ದು, ಅವರು ಬೋಧಿಸಿದ್ದಕ್ಕಿಂತ ಹೆಚ್ಚು ಬದುಕಿ ತೋರಿಸಿದ ಮಹಾನ್ ನಾಯಕರು ಎಂದರು. ಸತ್ಯ, ಅಹಿಂಸೆ, ಸರಳತೆ ಹಾಗೂ ಸ್ವಾವಲಂಬನೆ ಗಾಂಧೀಜಿಯವರ ದಿನನಿತ್ಯದ ಬದುಕಿನ ಭಾಗವಾಗಿದ್ದು, ಅವು ಕೇವಲ ಮಾತುಗಳಲ್ಲದೆ ಆಚರಣೆಯಾಗಿ ರೂಪುಗೊಂಡಿದ್ದವು ಎಂದು ಹೇಳಿದರು. ಮಹಾತ್ಮ ಗಾಂಧೀಜಿಯವರ ದೈವೈಕ್ಯ ದಿನಗಳನ್ನು ಸ್ವಾತಂತ್ರ್ಯ ಹೋರಾಟದ ವೀರರ ತ್ಯಾಗವನ್ನು ಸ್ಮರಿಸಲು ಹಾಗೂ ಅವರ ಆದರ್ಶಗಳನ್ನು ಪಾಲಿಸಲು ಮೀಸಲಿಡಲಾಗಿದೆ” ಎಂದು ತಿಳಿಸಿದರು.
ಶ್ರೀರಂಗಪಟ್ಟಣ ಪುರಸಭೆಯ ಮಾಜಿ ಸದಸ್ಯ ನಳಿನ ಅವರು ಮಾತನಾಡಿ, “ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಪಶ್ಚಿಮ ವಾಹಿನಿ ನದಿಯಲ್ಲಿ ಬಿಟ್ಟು ಸ್ಮರಣಾರ್ಥವಾಗಿ ಸ್ಥಾಪಿಸಿರುವ ಸ್ಮಾರಕವು ಸೂಕ್ತ ನಿರ್ವಹಣೆಯಿಲ್ಲದೆ ನೆನೆಗುಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಿ, ಭೇಟಿಗರಿಗೆ ಸುವ್ಯವಸ್ಥಿತ ತಾಣವನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಪಟ್ಟಣದ ಪುರಸಭೆ ವಹಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮಂಡ್ಯ | ಯುವಜನರ ಭಾವನೆಗಳ ಜತೆಗಿನ ರಾಜಕೀಯ ಚೆಲ್ಲಾಟ ನಿಲ್ಲಿಸಿ: ಸಿಪಿಐಎಂ
ಕಾರ್ಯಕ್ರಮದಲ್ಲಿ ಪ್ರಜ್ಞಾವಂತ ವೇದಿಕೆಯ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್, ಐಕ್ಯ ಅಲಯನ್ಸ್ ಸಂಸ್ಥೆಯ ಖಜಾಂಚಿ ಗಾಯತ್ರಿ, ಸದಸ್ಯರಾದ ಲಕ್ಷ್ಮೀದೇವಿ, ಪ್ರಿನ್ಸ್ ಅಧ್ಯಕ್ಷ ಪುಟ್ಟಸ್ವಾಮಿ, ಶಿಕ್ಷಕಿ ಎಚ್.ಜೆ. ಶೀಲಾ, ಶಿವಕುಮಾರ್, ಬಾಲು, ಸಿ. ನಾರಾಯಣ, ಚಿಕ್ಕತಮೇಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.





